ಭುವನೇಶ್ವರ, ಒಡಿಶಾ: ಆನ್ಲೈನ್ ಪೇಮೆಂಟ್ ಆ್ಯಪ್ಗಳ ಮೂಲಕ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಮೂವರು ಯುವಕರನ್ನು ಒಡಿಶಾ ಪೊಲೀಸ್ನ ಅಪರಾಧ ವಿಭಾಗದ ಅಧಿಕಾರಿಗಳು ಭುವನೇಶ್ವರ ನಗರದಲ್ಲಿ ಬಂಧಿಸಿದ್ದಾರೆ.
ಭುವನೇಶ್ವರ ನಗರದ ರಸೂಲ್ಗಢ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಿದ್ದ ಆರೋಪಿಗಳು 'ಜಮ್ತಾರಾ ಗ್ಯಾಂಗ್' ಮಾದರಿಯಲ್ಲಿ ವಂಚನೆ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಸುಮಾರು 20 ರಾಜ್ಯಗಳ ಜನರನ್ನು ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 28, 2021ರಿಂದ ಆರೋಪಿಗಳು ವಾಸವಿದ್ದ ಬಾಡಿಗೆ ಮನೆಯಿಂದಲೇ ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳು ಎಂದು ಹೇಳಿಕೊಂಡು ಮನೆಯನ್ನು ಬಾಡಿಗೆ ಪಡೆದಿದ್ದರು ಎಂದು ಅಪರಾಧ ವಿಭಾಗದ ಎಡಿಜಿ ಸಂಜೀಬ್ ತಿಳಿಸಿದ್ದಾರೆ.
ಆರೋಪಿಗಳನ್ನು ಪ್ರದುಮ್ ಕುಮಾರ್ ಮಂಡಲ್ (20), ಕೃಷ್ಣ ಕುಮಾರ್ ಮಂಡಲ್ (19) ಮತ್ತು ಚೆತ್ಲಾಲ್ ಮೋದ್ನಾಲ್ (28) ಎಂದು ಗುರುತಿಸಲಾಗಿದ್ದು, ಅವರಲ್ಲಿ ಇಬ್ಬರು ಜಾರ್ಖಂಡ್ನ ಗಿರಿಡಿಹ್ ಪ್ರದೇಶದವರಾಗಿದ್ದರೆ, ಮತ್ತೊಬ್ಬ ವ್ಯಕ್ತಿ ಧನಬಾದ್ ಪ್ರದೇಶಕ್ಕೆ ಸೇರಿದವನು ಎಂದು ಪೊಲೀಸರು ತಿಳಿಸಿದ್ದಾರೆ.