ಕರ್ನಾಟಕ

karnataka

ETV Bharat / bharat

ಕತಾರ್​ನಲ್ಲಿ ಮರಣದಂಡನೆಗೆ ಒಳಗಾದ ಭಾರತೀಯರ ಕುಟುಂಬಗಳನ್ನು ಭೇಟಿ ಮಾಡಿದ ಸಚಿವ ಜೈಶಂಕರ್​

ಕತಾರ್​ನಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಎಂಟು ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಕುಟುಂಬಗಳನ್ನು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಭೇಟಿ ಮಾಡಿದರು.

By ETV Bharat Karnataka Team

Published : Oct 30, 2023, 12:03 PM IST

jaishankar-meets-families-of-8-indian-navy-veterans-facing-death-penalty-in-qatar-assures-all-efforts-secure-release
ಕತಾರ್​ನಲ್ಲಿ ಮರಣದಂಡನೆಗೆ ಒಳಗಾದ ಭಾರತೀಯರ ಕುಟುಂಬವನ್ನು ಭೇಟಿ ಮಾಡಿದ ಸಚಿವ ಜೈಶಂಕರ್​

ನವದೆಹಲಿ :ಇಸ್ರೇಲ್​ಗಾಗಿ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಕತಾರ್​ನಲ್ಲಿ ಮರಣದಂಡನೆಗೆ ಗುರಿಯಾಗಿರುವ 8 ಮಂದಿ ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಕುಟುಂಬವನ್ನು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಇಂದು ಬೆಳಗ್ಗೆ ಭೇಟಿ ಮಾಡಿದರು. ಈ ವೇಳೆ, ಕತಾರ್​ನಲ್ಲಿ ಬಂಧನಕ್ಕೊಳಗಾಗಿರುವ ಅಧಿಕಾರಿಗಳನ್ನು ಕರೆತರುವ ನಿಟ್ಟಿನಲ್ಲಿ ಸರ್ಕಾರವು ಸರ್ವಪ್ರಯತ್ನ ನಡೆಸಲಿದೆ ಎಂದು ಕುಟುಂಬಸ್ಥರಿಗೆ ಭರವಸೆ ನೀಡಿದರು.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​ ಜೈಶಂಕರ್, ಕತಾರ್​ನಲ್ಲಿ ಬಂಧನಕ್ಕೊಳಗಾಗಿರುವ ಎಂಟು ಭಾರತೀಯರ ಕುಟುಂಬಸ್ಥರನ್ನು ಇಂದು ಬೆಳಿಗ್ಗೆ ಭೇಟಿ ಮಾಡಿದೆ. ಭಾರತ ಸರ್ಕಾರವು ಶಿಕ್ಷೆಗೊಳಗಾಗಿರುವ 8 ಜನರನ್ನು ಕರೆತರುವಲ್ಲಿ ಎಲ್ಲಾ ರೀತಿಯಲ್ಲೂ ಪ್ರಯತ್ನ ನಡೆಸುತ್ತದೆ. ಕುಟುಂಬಸ್ಥರನ್ನು ಭೇಟಿ ಮಾಡಿ ಅವರ ನೋವನ್ನು ಆಲಿಸಲಾಯಿತು. ಈ ಎಲ್ಲ ಕುಟುಂಬಸ್ಥರ ಜೊತೆ ಸರ್ಕಾರ ಇರಲಿದೆ ಎಂದು ಅವರು ಹೇಳಿದ್ದಾರೆ.

ಇಸ್ರೇಲ್​ಗಾಗಿ ಬೇಹುಗಾರಿಕೆ.. 8 ಮಂದಿಗೆ ಮರಣದಂಡನೆ :ಕಳೆದ ಅಕ್ಟೋಬರ್​ 26ರಂದು ಇಸ್ರೇಲ್​ಗಾಗಿ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಎಂಟು ಮಂದಿ ಮಾಜಿ ಭಾರತೀಯ ಸೇನಾಪಡೆಯ ಅಧಿಕಾರಿಗಳಿಗೆ ಕತಾರ್​ನಲ್ಲಿ ಮರಣ ದಂಡನೆ ಶಿಕ್ಷೆಯಾಗಿತ್ತು. ಶಿಕ್ಷೆಗೊಳಗಾದವರನ್ನು ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಎಂದು ಗುರುತಿಸಲಾಗಿತ್ತು.

ಇವರು 2022ರ ಆಗಸ್ಟ್​ನಲ್ಲಿ ಇಸ್ರೇಲ್​ಗಾಗಿ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಈ ಎಲ್ಲ ಬಂಧಿತರು ದಹ್ರಾ ಗ್ಲೋಬಲ್​ ಎಂಬ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದು ಕತಾರ್​ ಸೇನೆಗೆ ಜಲಾಂತರ್ಗಾಮಿ ನೌಕೆಯನ್ನು ಪೂರೈಸುವ ಕಾರ್ಯವನ್ನು ಮಾಡುತ್ತಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಕತಾರ್​ನಲ್ಲಿ ಭಾರತೀಯ ನಾಗರೀಕರ ಮರಣ ದಂಡನೆ ತೀರ್ಪಿನಿಂದಾಗಿ ನಮಗೆ ತೀವ್ರ ಆಘಾತವಾಗಿದೆ. ನಾವು ವಿವರವಾದ ತೀರ್ಪಿಗಾಗಿ ಕಾಯುತ್ತಿದ್ದೇವೆ. ನಾವು ಈಗಾಗಲೇ ಶಿಕ್ಷೆಗೊಳಗಾಗಿರುವ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದೇವೆ. ಬಂಧನಕ್ಕೊಳಗಾಗಿರುವ ಅಧಿಕಾರಿಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ. ಭಾರತವು ಈ ಪ್ರಕರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಪ್ರಕರಣ ಸಂಬಂಧ ಕತಾರ್​ ಅಧಿಕಾರಿಗಳು ಈ ಹಿಂದೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಿದೆ.

ಇದನ್ನೂ ಓದಿ :8 ಮಂದಿ ಭಾರತೀಯರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕತಾರ್ ಕೋರ್ಟ್‌: ಆಘಾತ ವ್ಯಕ್ತಪಡಿಸಿದ ವಿದೇಶಾಂಗ ಸಚಿವಾಲಯ

ABOUT THE AUTHOR

...view details