ಕರ್ನಾಟಕ

karnataka

By

Published : Jun 24, 2022, 1:04 PM IST

Updated : Jun 24, 2022, 2:57 PM IST

ETV Bharat / bharat

Exclusive: ಬುಡಕಟ್ಟು ಜನರ ಏಳಿಗೆಗೆ ದ್ರೌಪದಿ ಮುರ್ಮು ಏನಾದರೂ ಮಾಡಿದ್ರೆ ಬಹಿರಂಗಪಡಿಸಲಿ - ಯಶವಂತ್ ಸಿನ್ಹಾ

ರಾಷ್ಟ್ರಪತಿ ಚುನಾವಣೆಗಾಗಿ ಪ್ರತಿಪಕ್ಷಗಳ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ ಈಟಿವಿ ಭಾರತನೊಂದಿಗೆ ಎಕ್ಸಕ್ಲೂಸಿವ್ ಆಗಿ ಮಾತನಾಡಿದ್ದಾರೆ. ನಮ್ಮ ಪ್ರತಿನಿಧಿ ಸೌರಭ ಶರ್ಮಾ ಅವರೊಂದಿಗೆ ತಮ್ಮ ಸೈದ್ಧಾಂತಿಕ ಹೋರಾಟ, ರಾಜಕೀಯ ಹಾಗೂ ಆಡಳಿತ ಸೇವಾ ಜೀವನ ಮತ್ತು ತಮ್ಮ ಪ್ರತಿಸ್ಪರ್ಧಿ, ಬಿಜೆಪಿ ನೇತೃತ್ವದ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬಗ್ಗೆ ತಮ್ಮ ಅಭಿಪ್ರಾಯವೇನು ಹೀಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Interview: Would like Draupadi Murmu to put her tribal work record in public domain, says Yashwant Sinha
Interview: Would like Draupadi Murmu to put her tribal work record in public domain, says Yashwant Sinha

ನವದೆಹಲಿ:ದಶಕಗಳ ಕಾಲ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಿದ ಬಳಿಕ ಮಾಜಿ ಕೇಂದ್ರ ಮಂತ್ರಿ ಯಶವಂತ್ ಸಿನ್ಹಾ ಅವರನ್ನು ಪ್ರತಿಪಕ್ಷಗಳು ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿಯನ್ನಾಗಿ ನಿಲ್ಲಿಸಿವೆ. ಸಿನ್ಹಾ ಮೂಲತಃ ಓರ್ವ ಐಎಎಸ್ ಅಧಿಕಾರಿ. ನಂತರ ರಾಜಕೀಯಕ್ಕೆ ಬಂದು ಜನತಾದಳ, ಬಿಜೆಪಿ ಹಾಗೂ ಟಿಎಂಸಿ ಪಕ್ಷಗಳಲ್ಲಿದ್ದು ರಾಜಕೀಯ ಸೇವೆ ಸಲ್ಲಿಸಿದ್ದಾರೆ.

ಅವರ ಸುದೀರ್ಘ ರಾಜಕೀಯ ಜೀವನ ಹಲವಾರು ಏಳು - ಬೀಳುಗಳಿಂದ ಕೂಡಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದ್ದು ಗಮನಾರ್ಹ ಸಂಗತಿಯಾಗಿದೆ.

ಈಟಿವಿ ಭಾರತದ ಸೌರಭ್ ಶರ್ಮಾ ಅವರೊಂದಿಗೆ ದೂರವಾಣಿ ಮೂಲಕ ಯಶವಂತ್ ಸಿನ್ಹಾ ಸಂದರ್ಶನ ನೀಡಿದ್ದು, ಅದರ ಸಂಪೂರ್ಣ ವರದಿ ಪ್ರಶ್ನೋತ್ತರ ರೂಪದಲ್ಲಿ ಇಲ್ಲಿದೆ. ತಮ್ಮ ಸೈದ್ಧಾಂತಿಕ ಹೋರಾಟ, ರಾಜಕೀಯ ಹಾಗೂ ಆಡಳಿತ ಸೇವಾ ಜೀವನ ಮತ್ತು ತಮ್ಮ ಪ್ರತಿಸ್ಪರ್ಧಿ, ಬಿಜೆಪಿ ನೇತೃತ್ವದ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬಗ್ಗೆ ತಮ್ಮ ಅಭಿಪ್ರಾಯವೇನು ಹೀಗೆ ಹಲವಾರು ವಿಷಯಗಳನ್ನು ಸಿನ್ಹಾ ಹಂಚಿಕೊಂಡಿದ್ದಾರೆ.

ಈಟಿವಿ ಭಾರತ: ರಾಷ್ಟ್ರಪತಿ ಚುನಾವಣೆಯ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಎನ್​ಡಿಎಗೆ ಕೇವಲ ಒಂದು ಪ್ರತಿಶತ ಮತಗಳ ಕೊರತೆಯಿದೆ. ಈ ಸಂದರ್ಭದ ಲಾಭವನ್ನು ಹೇಗೆ ಪಡೆಯುವಿರಿ ಹಾಗೂ ಬಿಹಾರ, ಜಾರ್ಖಂಡ್ ಮತ್ತು ಒಡಿಶಾಗಳಲ್ಲಿನ ರಾಜಕೀಯ ಪಕ್ಷಗಳ ಮನಸ್ಸನ್ನು ಹೇಗೆ ಗೆಲ್ಲುವಿರಿ?

ಸಿನ್ಹಾ: ನಮ್ಮ ಬಳಿ ಇದಕ್ಕಾಗಿ ಒಂದು ತಂತ್ರಗಾರಿಕೆ ಇದೆ. ಆದರೆ, ಅದನ್ನು ಮಾಧ್ಯಮಗಳ ಮುಂದೆ ಹೇಳಲಾಗದು. ಅದನ್ನು ಬಹಿರಂಗ ಮಾಡಿದಲ್ಲಿ ಅದು ತಂತ್ರಗಾರಿಕೆ ಆಗಿ ಉಳಿಯದು.

ಈಟಿವಿ ಭಾರತ: ಬಿಹಾರ, ಜಾರ್ಖಂಡ್ ಹಾಗೂ ಒಡಿಶಾಗಳ ಮುಖ್ಯಮಂತ್ರಿಗಳೊಂದಿಗೆ ನೀವು ಮಾತನಾಡಿರುವಿರಾ?

ಸಿನ್ಹಾ:ನನ್ನ ಪರವಾಗಿ ಹಲವಾರು ಮುಖಂಡರು ಅವರೊಂದಿಗೆ ಮಾತನಾಡುತ್ತಿದ್ದಾರೆ. ನಾನು ವೈಯಕ್ತಿಕವಾಗಿ ಈವರೆಗೂ ಮಾತನಾಡಿಲ್ಲ.

ಈಟಿವಿ ಭಾರತ:ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ನಿಮ್ಮ ಚುನಾವಣಾ ಪ್ಲಾನ್ ಏನಿರಲಿದೆ? ನೀವು ಎಲ್ಲಿಂದ ಪ್ರಚಾರ ಆರಂಭಿಸುವಿರಿ?

ಸಿನ್ಹಾ: ಬಿಹಾರದಿಂದ ಪ್ರಚಾರ ಆರಂಬಿಸಲಿದ್ದೇನೆ. ಆದರೆ ನಾಮಪತ್ರ ಸಲ್ಲಿಕೆ ಮುನ್ನ ಬಿಹಾರಕ್ಕೆ ಹೋಗಬೇಕೋ ಅಥವಾ ನಂತರ ಹೋಗಬೇಕೋ ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಬಿಹಾರದಿಂದ ಜಾರ್ಖಂಡ್​ಗೆ ಹೋಗುವೆ. ಎಲ್ಲ ರಾಜ್ಯಗಳಿಗೂ ಭೇಟಿ ನೀಡುವೆ.

ಈಟಿವಿ ಭಾರತ:ನಿಮ್ಮ ಮೊದಲ ಸಭೆಯ ನಂತರ ನೀವು ನೀಡಿದ ಹೇಳಿಕೆಯನ್ನು ಗಮನಿಸಿದರೆ, ನಿಮ್ಮ ಹಾಗೂ ಅವರ (ದ್ರೌಪದಿ ಮುರ್ಮು) ಮಧ್ಯದ ಹೋರಾಟ ಇದಲ್ಲ, ಇದು ಸೈದ್ಧಾಂತಿಕ ನಂಬಿಕೆಗಳ ಹೋರಾಟ ಎಂದು ಹೇಳಿದ್ದಿರಿ ಅಲ್ಲವೇ?

ಸಿನ್ಹಾ:ಇದು ಬಹಳ ಸರಳವಾಗಿದೆ. ಓರ್ವ ಮಹಿಳೆ ನಿಮಗೆ ಪ್ರತಿಸ್ಪರ್ಧಿಯಾಗಿದ್ದಾಳೆ. ಆಕೆ ಬುಡಕಟ್ಟು ಜನಾಂಗದವಳಾಗಿರುವುದರಿಂದ ಅವಳ ಪರವಾಗಿ ಸಹಾನುಭೂತಿಯ ಅಲೆ ಕಾಣಿಸುತ್ತಿದೆ ಎಂದು ಕೆಲವರು ನನಗೆ ಹೇಳಿದರು. ಇದಕ್ಕೆ ನನ್ನ ಪ್ರತಿಕ್ರಿಯೆ ಏನೆಂದರೆ - ಯಾರ ಬೆಲೆಯನ್ನು ಯಾರೂ ನಿರ್ಧರಿಸಲಾಗದು. ಯಾರೋ ಒಬ್ಬರು ಯಾವುದೋ ಒಂದು ಕುಟುಂಬದಲ್ಲಿ ಅಥವಾ ಸಮುದಾಯದಲ್ಲಿ ಜನಿಸಬೇಕೆಂಬುದನ್ನು ಯಾರೊಬ್ಬರೂ ನಿರ್ಧರಿಸಲಾರರು.

ಹಾಗಾಗಿಯೇ ನಾನು ಹುಟ್ಟಿರುವ ಕುಟುಂಬ ಅಥವಾ ಆಕೆ ಹುಟ್ಟಿರುವ ಕುಟುಂಬದ ಬಗ್ಗೆ ನಾವ್ಯಾರೂ ನಿಯಂತ್ರಣ ಹೊಂದಿಲ್ಲ. ಆದರೆ, ಮುಖ್ಯ ವಿಷಯ ಅದಲ್ಲ. ಜನಸಮುದಾಯದ ಕಲ್ಯಾಣ ಮಾಡುವುದು ಹಾಗೂ ಎಸ್​ಸಿ, ಎಸ್​ಟಿ ಸಮುದಾಯಗಳು ಸೇರಿದಂತೆ ಮಹಿಳೆಯರು, ಹಿಮದುಳಿದ ವರ್ಗಗಳ ಏಳಿಗೆ ಸಾಧಿಸುವುದು ಮುಖ್ಯ ವಿಷಯವಾಗಿದೆ.

ಹಣಕಾಸು ಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ಮಂಡಿಸಿದ 5 ಬಜೆಟ್​​ಗಳಲ್ಲಿ ಈ ದೇಶದ ಎಸ್​ಸಿ, ಎಸ್​ಟಿ ಸಮುದಾಯಗಳಿಗೆ ಒಳ್ಳೆಯ ಕೊಡುಗೆಯನ್ನು ನೀಡಿದ್ದೇನೆ. ಪ್ರತಿಬಾರಿಯೂ ಈ ಸಮುದಾಯಗಳ ಬಗ್ಗೆ ಕಲ್ಯಾಣ ಯೋಜನೆಗಳನ್ನು ನೀಡಿದ್ದೇನೆ.

ನಂತರ ವಾಜಪೇಯಿ ಸರ್ಕಾರವು ಈಶಾನ್ಯ ರಾಜ್ಯಗಳಿಗಾಗಿಯೇ ಹೊಸದೊಂದು ಸಚಿವಾಲಯವನ್ನೇ ಆರಂಭಿಸಿತು. ಬಹುತೇಕ ಈಶಾನ್ಯ ರಾಜ್ಯಗಳು ಬುಡಕಟ್ಟು ಜನಾಂಗದವರ ಪ್ರದೇಶಗಳೇ ಆಗಿವೆ. ಹೀಗೆ ನಾವು ಆಗಲೇ ಬುಡಕಟ್ಟು ಜನಾಂಗಕ್ಕೆ ಪ್ರಾತಿನಿಧ್ಯ ನೀಡಿದ್ದೆವು. ಹೀಗಾಗಿ ನಾವು ಅಧಿಕಾರದಲ್ಲಿರುವಾಗ ಬುಡಕಟ್ಟು ಜನಾಂಗದವರಿಗೆ ಏನೂ ಮಾಡಿಲ್ಲ ಎಂದು ಆರೋಪಿಸುವ ಹಕ್ಕು ಯಾರಿಗೂ ಇಲ್ಲ. ಬಿಹಾರದ ಬುಡಕಟ್ಟು ಜಿಲ್ಲೆಯಾದ ಗಿರಿ ಜಿಲ್ಲೆಯಲ್ಲಿ ನಾನು ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಆಗಿದ್ದೆ. ಇಲ್ಲಿಂದಲೇ ನನ್ನ ಐಎಎಸ್ ಜೀವನ ಆರಂಭವಾಗಿತ್ತು ಹಾಗೂ ಇಲ್ಲಿನ ಜನತೆಗಾಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ.

ನಂತರ ಸದ್ಯ ಜಾರ್ಖಂಡ್​ನಲ್ಲಿರುವ ಸಂಥಾಲ್ ಪರ್ಗನಾ ಎಂಬ ಜಿಲ್ಲೆಯ ಡಿಸಿ ಆಗಿ ಕೆಲಸ ಮಾಡಿದೆ. ಹೀಗಾಗಿ ನನ್ನ ಐಎಎಸ್ ಜೀವನ ಹಾಗೂ ರಾಜಕೀಯ ಜೀವನಗಳೆರಡೂ ಸಂಪೂರ್ಣ ಜನಸಮುದಾಯದ ಸೇವೆಯಲ್ಲೇ ಕಳೆದು ಹೋಗಿವೆ. ಕರ್ಪೂರಿ ಠಾಕೂರ್ ಮತ್ತು ರಾಮಸುಂದರ್ ದಾಸ್ ಅವರಿಗೆ ಪ್ರಿನ್ಸಿಪಲ್ ಸೆಕ್ರೆಟರಿ ಆಗಿದ್ದ ಸಮಯದಲ್ಲಿಯೂ ಕೆಳವರ್ಗದವರ ಏಳಿಗೆಗೆ ಕೆಲಸ ಮಾಡಿದ್ದೇನೆ. ಐಎಎಸ್ ಅಧಿಕಾರಿಗಯಾಗಿದ್ದಾಗ ಅಥವಾ ರಾಜಕೀಯ ಜೀವನದಲ್ಲಿದ್ದಾಗ ಬುಡಕಟ್ಟು ಜನಾಂಗದವರೊಂದಿಗೆ ಕೆಲಸ ಮಾಡಿದ್ದೇನೆ, ಅವರೊಂದಿಗೆ ಕುಳಿತು ಊಟ ಮಾಡಿದ್ದೇನೆ.

ಬುಡಕಟ್ಟು ಜನಾಂಗ ಸೇರಿದಂತೆ ಸಮಾಜದ ಕೆಳರ್ಗದವರಿಗಾಗಿ ನನ್ನ ಪ್ರತಿಸ್ಪರ್ಧಿಯಾಗಿರುವ ಮಹಿಳೆ ಏನು ಮಾಡಿದ್ದಾರೆ ಎಂಬುದನ್ನು ಸಾರ್ವಜನಿಕರ ಮುಂದೆ ಇಡಲಿ. ತನ್ನ ಜನಾಂಗದವರು ಸೇರಿದಂತೆ ಕೆಳವರ್ಗದವರಿಗಾಗಿ ಅವರು ಯಾವ ರೀತಿಯ ಸಹಾಯ ಮಾಡಿದ್ದಾರೆ? ಅವರು ಓರ್ವ ಮಂತ್ರಿಯಾಗಿದ್ದರು ಹಾಗೂ ರಾಜ್ಯಪಾಲರೂ ಆಗಿದ್ದರು.

ಈಟಿವಿ ಭಾರತ:ಭಾರತದಲ್ಲಿ ಈವರೆಗೂ ಬುಡಕಟ್ಟು ಜನಾಂಗದಿಂದ ಯಾರೂ ರಾಷ್ಟ್ರಪತಿಯಾಗಿಲ್ಲ. ಎನ್​ಡಿಎ ಮಿತ್ರಪಕ್ಷಗಳ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರ ಸ್ಪರ್ಧೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇಲ್ಲಿ ಬಿಜೆಪಿ ರಾಜಕೀಯ ರಹಿತ ಆಟವಾಡುತ್ತಿದೆಯಾ?

ಸಿನ್ಹಾ: ಈವರೆಗೂ ಇಂಗ್ಲಿಷಿನ ವೈ ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿ ಭಾರತದ ರಾಷ್ಟ್ರಪತಿಯಾಗಿಲ್ಲ. ಅಂದರೆ ಹಲವಾರು ವಿಷಯಗಳು ಪ್ರಥಮ ಬಾರಿ ಘಟಿಸುತ್ತಲೇ ಇರುತ್ತವೆ. 2017ರಲ್ಲೇ ಅವರನ್ನು ರಾಷ್ಟ್ರಪತಿ ಏಕೆ ಮಾಡಲಿಲ್ಲ? ಇದನ್ನು ಮೋದಿ ಸರ್ಕಾರಕ್ಕೆ ಕೇಳಿ.

ಈಟಿವಿ ಭಾರತ: ಮುರ್ಮು ಅವರು ಅಭ್ಯರ್ಥಿಯಾಗಿದ್ದಕ್ಕೆ ಮನ್ನಣೆ ನೀಡಿ ಹಾಗೂ ತಮಗೆ ವಯಸ್ಸಾಗಿರುವುದರಿಂದ ತಾವು ರಾಷ್ಟ್ರಪತಿ ಅಭ್ಯರ್ಥಿ ಸ್ಥಾನದಿಂದ ಹಿಂದೆ ಸರಿಯಬೇಕೆಂದು ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಹೇಳುತ್ತಿದ್ದಾರಲ್ಲ? ಮುಗಿದುಹೋದ ಹೋರಾಟಕ್ಕೆ ಧುಮುಕಿರುವಿರೆಂದು ನಿಮಗೆ ಅನಿಸುವುದಿಲ್ಲವೆ?

ಸಿನ್ಹಾ: ಅವರು ಹಾಗೆ ಹೇಳುತ್ತಿರುವುದು ಸಂಪೂರ್ಣ ತಪ್ಪು. ನಾನು ಹಿಂದೆ ಸರಿಯಬೇಕೆಂದು ಯಾರೆಲ್ಲ ಹೇಳುತ್ತಿದ್ದಾರೆ ಎಂಬುದು ತಿಳಿದಿಲ್ಲ. ಇಷ್ಟಕ್ಕೂ ನಾನೇಕೆ ಹಿಂದೆ ಸರಿಯಬೇಕು? ನಾನು ಹಿಂದೆ ಸರಿಯಬೇಕೆಂದು ಒಬ್ಬನೇ ಒಬ್ಬ ವ್ಯಕ್ತಿಯೂ ನನಗೆ ಹೇಳಿಲ್ಲ. ಅಷ್ಟಕ್ಕೂ ಇದು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೋರಾಟವಾಗಿದೆ. ಹೀಗಿರುವಾಗ ನಾನು ಹಿಂದೆ ಸರಿಯುವ ಪ್ರಶ್ನೆಯಾದರೂ ಎಲ್ಲಿಂದ ಬರುತ್ತದೆ? ಕೆಲವರು ಮೂರ್ಖ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಆಕೆಯ ಹೆಸರು ಘೋಷಣೆಗೆ ಮುನ್ನವೇ ನಾನು ಅಭ್ಯರ್ಥಿ ಎಂದು ಘೋಷಿಸಿಯಾಗಿತ್ತು. ಒಂದು ವೇಳೆ ಸರ್ಕಾರವು ಒಮ್ಮತ ಮೂಡಿಸುವ ಇರಾದೆಯನ್ನು ಹೊಂದಿದ್ದರೆ, ಮುರ್ಮು ನಮ್ಮ ಅಭ್ಯರ್ಥಿ ಎಂದು ಹೇಳಿ, ಪ್ರತಿಪಕ್ಷಗಳೊಂದಿಗೆ ಚರ್ಚಿಸಬೇಕಿತ್ತು.

ಈ ಕಾರ್ಯವನ್ನು ಅವರು ಯಾಕೆ ಮಾಡಲಿಲ್ಲ ಎಂದು ಬಿಜೆಪಿಯವರಿಗೆ ಕೇಳಿ. ಈ ಸರ್ಕಾರವು ಒಮ್ಮತದ ನಿರ್ಣಯಗಳ ಮೇಲೆ ಕೆಲಸ ಮಾಡುವುದಿಲ್ಲ. ಇದು ಬರೀ ವಿರೋಧಗಳ ಮೇಲೆ ಕೆಲಸ ಮಾಡುತ್ತದೆ. ಇನ್ನು ಹೋರಾಟಕ್ಕಿಳಿದ ಮೇಲೆ ಸಾವೋ ಅಥವಾ ಬದುಕೋ ಎಂಬುದು ಗ್ಯಾರಂಟಿ ಇರದು. ಸೈನಿಕನೊಬ್ಬನನ್ನು ನೀವು ಯುದ್ಧಕ್ಕೆ ಕಳುಹಿಸುತ್ತಿರುವಿರಿ ಎಂದಾಗ ಆತ ಸಾಯುವ ಅಪಾಯ ಯಾವಾಗಲೂ ಇರುತ್ತದೆ. ಹಾಗಂತ ಸೈನಿಕ ಯುದ್ಧಕ್ಕೆ ಹೋಗಲಾಗದಿರುತ್ತದೆಯೇ?

ಈಟಿವಿ ಭಾರತ: ಫರೂಕ್ ಅಬ್ದುಲ್ಲಾ, ಶರದ್ ಪವಾರ್ ಮತ್ತು ಗೋಪಾಲಕೃಷ್ಣ ಗಾಂಧಿ ಸ್ಪರ್ಧೆಗೆ ಒಲ್ಲೆ ಎಂದರು. ನಿಮ್ಮನ್ನು ಮೊದಲಿಗೆ ಸಂಪರ್ಕಿಸಿದ್ದು ಯಾರು?

ಸಿನ್ಹಾ: ಅವರ ವಿಚಾರಗಳು ಅವರಿಗೆ, ನನ್ನ ವಿಚಾರಗಳು ನನಗೆ. ಶರದ್ ಪವಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಮೊದಲಿಗೆ ನನ್ನನ್ನು ಸಂಪರ್ಕಿಸಿದರು.

Last Updated : Jun 24, 2022, 2:57 PM IST

ABOUT THE AUTHOR

...view details