ಕರ್ನಾಟಕ

karnataka

ರವೀಂದ್ರನಾಥ್ ಟಾಗೋರರ ನಿವಾಸ 'ಶಾಂತಿನಿಕೇತನ' ಯುನೆಸ್ಕೋ ಪಟ್ಟಿ ಸೇರ್ಪಡೆ: ಪ.ಬಂಗಾಳದಲ್ಲಿ ಸಂಭ್ರಮ

By ETV Bharat Karnataka Team

Published : Sep 18, 2023, 8:28 AM IST

Updated : Sep 18, 2023, 12:34 PM IST

ಪ್ರಸಿದ್ಧ ಕವಿ ರವೀಂದ್ರನಾಥ್​ ಟಾಗೋರ್​ ಅವರ ನಿವಾಸ 'ಶಾಂತಿನಿಕೇತನ' ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರ್ಪಡೆಗೊಂಡಿದೆ. ಇದು ಪ್ರತಿಷ್ಟಿತ ಪಟ್ಟಿ ಸೇರ್ಪಡೆಗೊಂಡ ದೇಶದ 41ನೇ ತಾಣ.

Celebration at Vishwa Bharati University, West Bengal
ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿವಿಯಲ್ಲಿ ಸಂಭ್ರಮಾಚರಣೆ

ಪಶ್ಚಿಮ ಬಂಗಾಳ: ನೊಬೆಲ್​ ಪುರಸ್ಕೃತ ಜಗತ್ಪ್ರಸಿದ್ಧ ಸಾಹಿತಿ ರವೀಂದ್ರನಾಥ ಟಾಗೋರ್​ ಅವರು ಬದುಕಿ ಬಾಳಿದ ಅವರ ಮನೆ 'ಶಾಂತಿನಿಕೇತನ' ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡ ಖುಷಿಯನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಅದರಲ್ಲೂ ಬಂಗಾಳದ ಬಿರ್ಭೂಮ್​ ಜಿಲ್ಲೆಯ ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ ಭಾರಿ ಸಂಭ್ರಮ ಮನೆ ಮಾಡಿದೆ.

ವಿಶ್ವವಿದ್ಯಾಲಯದ ಐಕಾನಿಕ್​ ಕಟ್ಟಡ ಮತ್ತು ಕಾಂಪೌಂಡ್​ ಅಲಂಕಾರಿಕ ದೀಪಗಳಿಂದ ಜಗಮಗಿಸುತ್ತಿದೆ. ವಿವಿ ಅಧ್ಯಾಪಕರು ಹಾಗೂ ಸಿಬ್ಬಂದಿ, ಹಾಸ್ಟೆಲ್​ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು, ರವೀಂದ್ರ ಸಂಗೀತವನ್ನು ಹಾಡುವ ಮೂಲಕ ಶಾಂತಿನಿಕೇತನಕ್ಕೆ ಅಂತರರಾಷ್ಟ್ರೀಯ ಮನ್ನಣೆ ಸಿಕ್ಕ ಸಂತೋಷವನ್ನು ಸಂಭ್ರಮಿಸಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಶಾಂತಿನಿಕೇತನ ಸೇರ್ಪಡೆಯಾಗಿರುವ ಸುದ್ದಿ ಪ್ರಕಟವಾಗುತ್ತಿದ್ದಂತೆ, ತಮ್ಮ ಎಕ್ಸ್​ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. "ನಮ್ಮ ಶಾಂತಿನಿಕೇತನ, ಗುರುದೇವ್​ ರವೀಂದ್ರನಾಥ್ ಟಾಗೋರ್​ ಅವರ ಮನೆ ಇದೀಗ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಅಂತಿಮವಾಗಿ ಸೇರ್ಪಡೆಗೊಂಡಿರುವುದು ಖುಷಿ ಹಾಗೂ ಹೆಮ್ಮೆ ವಿಷಯ. ಬಿಸ್ವಾ ಬಾಂಗ್ಲಾದ ಹೆಮ್ಮೆಯಾಗಿರುವ ಶಾಂತಿನಿಕೇತನವನ್ನು ಕವಿ ರವೀಂದ್ರನಾಥ ಟಾಗೋರ್​ ನಮಗೆ ನೀಡಿದರೆ, ಪೀಳಿಗೆಯಿಂದ ಪೀಳಿಗೆಗೆ ನಮ್ಮ ಬಂಗಾಳದ ಜನ ಅದನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

"ಕಳೆದ 12 ವರ್ಷಗಳಿಂದ ಪಶ್ಚಿಮ ಬಂಗಾಳ ಸರ್ಕಾರ ಶಾಂತಿನಿಕೇತನದ ಮೂಲಸೌಕರ್ಯವನ್ನು ಗಣನೀಯವಾಗಿ ಅಭಿವೃದ್ಧಿ ಮಾಡಿದೆ. ಜಗತ್ತು ಈಗ ಆ ಪಾರಂಪರಿಕ ತಾಣದ ವೈಭವವನ್ನು ಗುರುತಿಸಿದೆ. ಬಂಗಾಳ, ಟಾಗೋರ್​ ಹಾಗೂ ಅವರ ಭ್ರಾತೃತ್ವದ ಸಂದೇಶಗಳನ್ನು ಪ್ರೀತಿಸುವ ಎಲ್ಲರಿಗೂ ವಂದನೆಗಳು. ಜೈ ಬಾಂಗ್ಲಾ, ಗುರುದೇವನಿಗೆ ಪ್ರಣಾಮಗಳು" ಎಂದು ತಿಳಿಸಿದ್ದಾರೆ.

ಭಾನುವಾರ ನಡೆದ ಯುನೆಸ್ಕೋದ ಸಭೆಯಲ್ಲಿ ಪಶ್ಚಿಮ ಬಂಗಾಳದ ಶಾಂತಿನಿಕೇತನವನ್ನು ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರ್ಪಡೆಗೊಳಿಸಿ, ಘೋಷಣೆ ಮಾಡಲಾಯಿತು. "ಶಾಂತಿನಿಕೇತನ ಐತಿಹಾಸಿಕ ಕಟ್ಟಡಗಳು, ಭೂದೃಶ್ಯಗಳು ಮತ್ತು ಉದ್ಯಾನಗಳು, ಮಂಟಪಗಳು, ಕಲಾಕೃತಿಗಳು ಮತ್ತು ಮುಂದುವರಿದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಸಮೂಹವಾಗಿದೆ. ಇದೆಲ್ಲವೂ ಜೊತೆಯಾಗಿ ತನ್ನ ಅತ್ಯುತ್ತಮ ಸಾರ್ವತ್ರಿಕ ಮೌಲ್ಯವನ್ನು ವ್ಯಕ್ತಪಡಿಸುತ್ತದೆ" ಎಂದು ಯುನೆಸ್ಕೋ ಹೇಳಿದೆ.

ಪಶ್ಚಿಮ ಬಂಗಾಳದ ಸಚಿವೆ ಶಶಿ ಪಂಜ, "ಇದು ಪಶ್ಚಿಮ ಬಂಗಾಳ ಹಾಗು ಇಡೀ ಭಾರತಕ್ಕೆ ಹೆಮ್ಮೆಯ ಕ್ಷಣ" ಎಂದು ತಿಳಿಸಿದ್ದಾರೆ. (ಎಎನ್‌ಐ)

ಇದನ್ನೂ ಓದಿ:ಯುನೆಸ್ಕೋ ಪಟ್ಟಿಗೆ ಸೇರಿದ ಠಾಗೋರರ 'ಶಾಂತಿನಿಕೇತನ'.. ಅಂತಾರಾಷ್ಟ್ರೀಯ ಮನ್ನಣೆ ಪಡೆದ ದೇಶದ 41ನೇ ತಾಣ ಈ ಮನೆ

Last Updated : Sep 18, 2023, 12:34 PM IST

ABOUT THE AUTHOR

...view details