ಅಟ್ಟಾರಿ(ಪಂಜಾಬ್):ಮೀನುಗಾರಿಕೆಯ ವೇಳೆ ಅಕ್ರಮವಾಗಿ ಗಡಿ ದಾಟಿ ಬಂದ ಆರೋಪದ ಮೇಲೆ 4 ವರ್ಷಗಳ ಹಿಂದೆ ಪಾಕಿಸ್ತಾನದ ವಶವಾಗಿದ್ದ ಭಾರತದ 20 ಮೀನುಗಾರರನ್ನು (Pakistan released 20 Indian fisherman)ಅಲ್ಲಿನ ಸರ್ಕಾರ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಿದೆ.
4 ವರ್ಷಗಳ ಕಾಲ ಪಾಕಿಸ್ತಾನದ ಲಾಂಧಿ ಜಿಲ್ಲಾ ಕಾರಾಗೃಹ, ಮಲಿರ್, ಕರಾಚಿ ಜೈಲುಗಳಲ್ಲಿ ಬಂಧಿಯಾಗಿದ್ದ 20 ಮೀನುಗಾರರು ಪಂಜಾಬ್ನ ಅಟ್ಟಾರಿ- ವಾಘಾ ಗಡಿಯ ಮೂಲಕ ಇಂದು ಭಾರತ ಪ್ರವೇಶಿಸಿದ್ದಾರೆ.
ಮೀನುಗಾರಿಕೆಯ ವೇಳೆ ಅಕ್ರಮವಾಗಿ ಗಡಿ ದಾಟಿ ಬಂದ ಭಾರತದ 20 ಮೀನುಗಾರರನ್ನು ಪಾಕಿಸ್ತಾನ ವಶಕ್ಕೆ ಪಡೆದಿತ್ತು. ಶಿಕ್ಷೆಯ ಅವಧಿ ಮುಗಿದ ಹಿನ್ನೆಲೆ ಅವರನ್ನು ಭಾರತಕ್ಕೆ ಮರಳಿ ಕಳುಹಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ತಾಯ್ನಾಡಿಗೆ ಮರಳಿ ಬಂದ ಮೀನುಗಾರರು ಹರ್ಷಗೊಂಡಿದ್ದಾರೆ. ಅಲ್ಲದೇ, ತಾವು ಜೈಲಿನಲ್ಲಿದ್ದ ವೇಳೆ ತಮ್ಮ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.
ಏತನ್ಮಧ್ಯೆ, ಪಾಕಿಸ್ತಾನ ಪಡೆಗಳು ನವೆಂಬರ್ 8 ರಂದು ಭಾರತೀಯ ಮೀನುಗಾರರ ಹಡಗುಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಘಟನೆಯಲ್ಲಿ ಮೀನುಗಾರನೊಬ್ಬ ಸಾವನ್ನಪ್ಪಿದ್ದರೆ, ಇನ್ನೊಬ್ಬ ಗಾಯಗೊಂಡಿದ್ದಾನೆ. ಪಾಕ್ ಪಡೆಗಳ ಕೃತ್ಯವನ್ನು ವಿರೋಧಿಸಿ ಕೇಂದ್ರ ಸರ್ಕಾರ ಪಾಕಿಸ್ತಾನದ ಹೈಕಮೀಷನರ್ರನ್ನು ವಿದೇಶಾಂಗ ಕಾರ್ಯಾಲಯಕ್ಕೆ ಕರೆಸಿಕೊಂಡು ದೂರು ಸಲ್ಲಿಸಿದೆ.
ಇದಲ್ಲದೇ, ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಿ ಬಂದಿದ್ದ 10 ಮಂದಿ ಪಾಕಿಸ್ತಾನದ ಮೀನುಗಾರರನ್ನು ಕೇಂದ್ರ ಸರ್ಕಾರ ಇದೇ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿತ್ತು.