ಕರ್ನಾಟಕ

karnataka

ನಾವಿನ್ನೂ ಕೀವ್​ನಲ್ಲಿ ಸಿಲುಕಿದ್ದೇವೆ, ದಯವಿಟ್ಟು ಸಹಾಯ ಮಾಡಿ: ಭಾರತೀಯ ವೈದ್ಯ ಕುಟುಂಬದ ಮನವಿ

By

Published : Mar 3, 2022, 10:58 AM IST

ಉಕ್ರೇನ್‌ನ ರಾಜಧಾನಿ ಕೀವ್​ನಲ್ಲಿ ಭಾರತ ಮೂಲದ ಕುಟುಂಬವೊಂದು ಸಿಲುಕಿಕೊಂಡಿದ್ದು, ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Indian family stuck in Ukraine
ಉಕ್ರೇನ್​ನಲ್ಲಿ ಸಿಲುಕಿದ ಭಾರತೀಯ ಕುಟುಂಬ

ನವದೆಹಲಿ​:ರಷ್ಯಾ ಆಕ್ರಮಣದಿಂದ ಉಕ್ರೇನ್​ನಲ್ಲಿ ಉದ್ವಿಗ್ನತೆ ಆವರಿಸಿದೆ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಕಾರ್ಯ ಚುರುಕಾಗಿದೆ. ಇಂದು ಒಂದೇ ದಿನದಲ್ಲಿ ಮೂರು ವಿಮಾನಗಳಲ್ಲಿ ವಿವಿಧೆಡೆಯಿಂದ 628 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ಹಂತ ಹಂತವಾಗಿ ಭಾರತೀಯರನ್ನು ಕರೆತರಲಾಗುತ್ತಿದ್ದು, ಇನ್ನೂ ಹಲವರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಹೀಗೆ ಉಕ್ರೇನ್​ನಲ್ಲಿ ಸಿಲುಕಿರುವ ಕುಟುಂಬವು ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದೆ.

ನಾಲ್ವರು ಸದಸ್ಯರನ್ನೊಳಗೊಂಡ ಕುಟುಂಬವು ಉಕ್ರೇನ್‌ನ ರಾಜಧಾನಿ ಕೀವ್​​ನಿಂದ ತಮ್ಮನ್ನು ರಕ್ಷಿಸುವಂತೆ ಮನವಿಯನ್ನು ಕಳುಹಿಸಿದೆ. ಮಂಗಳವಾರದ ವೇಳೆಗೆ ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಭಾವಿಸಲಾಗಿದೆ, ಆದರೆ ರಷ್ಯಾದ ಆಕ್ರಮಣದ ನಡುವೆ ಈ ನಗರವನ್ನು ತೊರೆಯಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

"ನಮ್ಮದು ನಾಲ್ವರ ಕುಟುಂಬ. ನಾನು ಡಾ. ರಾಜ್‌ಕುಮಾರ್ ಸಂತಾಲಾನಿ, ನನ್ನ ಪತ್ನಿ ಮಯೂರಿ ಮೋಹನಂದನೆ, ನನ್ನ ಮಗಳು ಜ್ಞಾನ ರಾಜ್ ಸಂತಾಲಾನಿ ಮತ್ತು ನನ್ನ ಮಗ ಪಾರ್ಥ ಸಂತಾಲಾನಿ. ಉಕ್ರೇನ್​ ರಾಜಧಾನಿ ಕೀವ್‌ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ" ಎಂದು ವಿಡಿಯೋದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ..

ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ನಮಗೆ ಅನೇಕ ಬಾರಿ ಕರೆ ಮಾಡಿದರು. ಆದರೆ, ಅವರು ನಮ್ಮನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವರು ವಾಹನ ಕಳುಹಿಸುವುದಾಗಿ ಹೇಳಿದರು. ಈವರೆಗೆ ನಾವು ಅವರ ಕಡೆಯಿಂದ ಯಾವುದೇ ಸಾರಿಗೆ ವ್ಯವಸ್ಥೆಯನ್ನು ಪಡೆದಿಲ್ಲ. ಹೊರಗೆ ಗುಂಡಿನ ದಾಳಿ ನಡೆಯುತ್ತಿದೆ" ಎಂದು ತಮ್ಮ ಶೋಚನೀಯ ಪರಿಸ್ಥಿತಿಯನ್ನು ವಿವರಿಸಿದರು.

ಇದನ್ನೂ ಓದಿ:ರೊಮೇನಿಯಾ, ಪೋಲೆಂಡ್​, ಹಂಗೇರಿಯಿಂದ 3 ವಿಮಾನಗಳಲ್ಲಿ 628 ಭಾರತೀಯರ ರಕ್ಷಣೆ

ಅಲ್ಲದೇ ಇಲ್ಲಿ ನಮ್ಮ ವಸ್ತುಗಳನ್ನು ಲೂಟಿ ಮಾಡಲಾಗುತ್ತಿದೆ. ನಮ್ಮಲ್ಲಿ ಹೀಟರ್ ಇಲ್ಲ. ತುಂಬಾ ಚಳಿ ಇದೆ ಮತ್ತು ನನ್ನ ಮಗನಿಗೆ ಜ್ವರವಿದೆ. ಹಾಗಾಗಿ ಸಾಧ್ಯವಾದರೆ ನಮನ್ನು ತಕ್ಷಣ ಸ್ಥಳಾಂತರಿಸಿ. ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಬೇಡಿಕೊಂಡಿದ್ದಾರೆ.

ಭಾರತ ಸರ್ಕಾರ ಮಂಗಳವಾರದಂದು ಎಲ್ಲಾ ಉಕ್ರೇನ್​​ ರಾಜಧಾನಿಯನ್ನು ತೊರೆಯುವಂತೆ ಜನರಿಗೆ ತುರ್ತು ಕರೆ ನೀಡಿದೆ. ಉಕ್ರೇನ್‌ನಿಂದ ನೆರೆಯ ದೇಶಗಳಿಗೆ ತೆರಳಿರುವ ನಾಗರಿಕರನ್ನು ಮರಳಿ ಕರೆತರಲು ಮುಂದಿನ ಮೂರು ದಿನಗಳಲ್ಲಿ 26 ವಿಮಾನಗಳನ್ನು ಕಳಿಸುವುದಾಗಿ ಭಾರತ ಸರ್ಕಾರ ಹೇಳಿದೆ.


ABOUT THE AUTHOR

...view details