ಕರ್ನಾಟಕ

karnataka

By ETV Bharat Karnataka Team

Published : Dec 17, 2023, 3:58 PM IST

ETV Bharat / bharat

ವಾಯುಸೇನೆಗೆ 'ಸಮರ್'​ ಶಕ್ತಿ: ಸ್ವದೇಶಿ ನಿರ್ಮಿತ ಕ್ಷಿಪಣಿಯ ಪರೀಕ್ಷೆ ಯಶಸ್ವಿ

ವಾಯುಸೇನೆಗೆ ಸಮರ್​ ಕ್ಷಿಪಣಿ ಮತ್ತಷ್ಟು ಬಲ ನೀಡಲಿದೆ. ಇದರ ಪ್ರಯೋಗ ಈಚೆಗೆ ನಡೆದಿದ್ದು, ಯಶಸ್ವಿಯಾಗಿದೆ.

ಸಮರ್​ ವಾಯು ರಕ್ಷಣಾ ಕ್ಷಿಪಣಿ
ಸಮರ್​ ವಾಯು ರಕ್ಷಣಾ ಕ್ಷಿಪಣಿ

ನವದೆಹಲಿ:ಸ್ವದೇಶಿ ನಿರ್ಮಿತ 'ಸಮರ್'​ ವಾಯು ರಕ್ಷಣಾ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆಯನ್ನು ಭಾರತೀಯ ವಾಯುಪಡೆ ಯಶಸ್ವಿಯಾಗಿ ನಡೆಸಿದೆ. ಸೂರ್ಯಲಂಕಾ ವಾಯುನೆಲೆಯಲ್ಲಿ ಈಚೆಗೆ ಪ್ರಯೋಗ ನಡೆಸಲಾಗಿದೆ. ಈ ಕ್ಷಿಪಣಿಯು ಏರ್ ಟು ಏರ್​ ವ್ಯವಸ್ಥೆ ಹೊಂದಿದ್ದು, ನಿಗದಿತ ಗುರಿ ಮುಟ್ಟಿದೆ.

ಭಾರತೀಯ ವಾಯುಸೇನೆ ಇದಕ್ಕೂ ಮೊದಲು ರಷ್ಯಾ ನಿರ್ಮಿತ ಏರ್​ ಟು ಏರ್​ ಕ್ಷಿಪಣಿಗಳನ್ನು ಬಳಕೆ ಮಾಡುತ್ತಿತ್ತು. ಕೇಂದ್ರ ಸರ್ಕಾರ ಆತ್ಮನಿರ್ಭರ್​ ಯೋಜನೆಯಡಿ ಸೇನಾ ಸಾಮಗ್ರಿಗಳ ತಯಾರಿಯಲ್ಲಿ ಸ್ವಾವಲಂಬನೆ ಸಾಧಿಸಲು ಯೋಜಿಸಿದ್ದು, ಇದರಡಿ ಸಮರ್​ ಕ್ಷಿಪಣಿಯನ್ನು ದೇಶೀಯವಾಗಿ ನಿರ್ಮಿಸಲಾಗಿದೆ.

ಅಸ್ತ್ರಶಕ್ತಿ-2023 ತರಬೇತಿಯ ವೇಳೆ ಪ್ರಯೋಗ ನಡೆಸಲಾಯಿತು. ಕ್ಷಿಪಣಿ ಗಾಳಿಯಲ್ಲಿ ನಿಗದಿತ ಗುರಿ ಸಾಧಿಸಿತು. ಕ್ಷಿಪಣಿ ವ್ಯವಸ್ಥೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸುತ್ತಿರುವ ಸಂಕೇತವಿದು ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ವೈಮಾನಿಕ ಬೆದರಿಕೆಗಳ ವಿರುದ್ಧ ದಾಳಿ:ಸಮರ್​ ಕ್ಷಿಪಣಿಯು 2ರಿಂದ 2.5 ಮ್ಯಾಕ್ ವೇಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕ್ಷಿಪಣಿಗಳೊಂದಿಗೆ ವೈಮಾನಿಕ ಬೆದರಿಕೆಗಳ ವಿರುದ್ಧ ಇದನ್ನು ಬಳಸಲಾಗುತ್ತದೆ. ಈ ಕ್ಷಿಪಣಿ ವ್ಯವಸ್ಥೆಯು ಟ್ವಿನ್ ಟರೆಟ್ ಉಡಾವಣಾ ಕ್ಷಮತೆ ಹೊಂದಿದೆ. ವಾಯುದಾಳಿಯ ಸಂದರ್ಭದಲ್ಲಿ ಇದನ್ನು ಏಕಕಾಲದಲ್ಲಿ ಸಿಂಗಲ್ ಮತ್ತು ಸಾಲ್ವೋ ಮೋಡ್‌ನಲ್ಲಿ ಉಡಾವಣೆ ಮಾಡಬಹುದು ಐಎಎಫ್ ಅಧಿಕಾರಿಗಳು ಮಾಹಿತಿ ನೀಡಿದರು.

ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ವೈಸ್ ಚೀಫ್ ಆಫ್ ಏರ್ ಸ್ಟಾಫ್ ಏರ್​ಮಾರ್ಷಲ್ ಎ.ಪಿ.ಸಿಂಗ್, ಐಎಎಫ್​ ಮ್ಯಾನೇಜಿಂಗ್​ ಕಮಾಂಡ್ ಚೀಫ್​ ಏರ್ ಮಾರ್ಷಲ್ ವಾಸ್​ ಪಾಂಡೆ ವೀಕ್ಷಿಸಿದರು. ಈ ಮಾದರಿಯ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ತಂಡವನ್ನು ಇದೇ ವೇಳೆ ಭೇಟಿ ಮಾಡಿ ಗೌರವಿಸಲಾಯಿತು. ಇದರ ಜೊತೆಗೆ ಅಸ್ತ್ರಶಕ್ತಿ ತರಬೇತಿ ಶಿಬಿರದಲ್ಲಿ ಇತರ ಕ್ಷಿಪಣಿಗಳನ್ನೂ ಪರೀಕ್ಷೆ ಮಾಡಲಾಯಿತು. ಇದರಲ್ಲಿ ಗಮನಾರ್ಹ ಯಶಸ್ಸು ಸಾಧಿಸಲಾಗಿದೆ.

ಆತ್ಮನಿರ್ಭರದತ್ತ ಭಾರತೀಯ ಸೇನೆ:ಕೇಂದ್ರ ಸರ್ಕಾರ ಸೇನಾ ಶಸ್ತ್ರಾಸ್ತ್ರಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸುವ ಕಡೆಗೆ ಹೆಚ್ಚಿನ ಗಮನ ನೀಡುತ್ತಿದೆ. ಇದಕ್ಕಾಗಿ ಆತ್ಮನಿರ್ಭರ್​ ಯೋಜನೆಯಡಿ ಸ್ಥಳೀಯ ಕಂಪನಿಗಳೊಂದಿಗೆ ಉತ್ಕೃಷ್ಟ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನು ರೂಪಿಸಲು ಯೋಜಿಸಿದೆ.

ಅದರ ಭಾಗವಾಗಿ ಫೈಟರ್ ಜೆಟ್‌ಗಳು, ಸಾರಿಗೆ ವಿಮಾನಗಳು, ಚಾಪರ್‌ಗಳು ಮತ್ತು ಭೂ ಆಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಬಳಸಲಾಗುವ ಬಹು ಬಿಡಿಭಾಗಗಳು ಮತ್ತು ಉಪಕರಣಗಳನ್ನು ದೇಶೀಯವಾಗಿ ನಿರ್ಮಿಸುವಲ್ಲಿ ಮ್ಯಾಜೇನಿಂಗ್​ ಕಮಾಂಡ್ ಗಮನಾರ್ಹ ಸಾಧನೆ ಮಾಡಿದೆ.

ಯಶಸ್ವಿ ಪರೀಕ್ಷೆ ಕಂಡ ಸಮರ್​ ಕ್ಷಿಪಣಿಯನ್ನು ದೆಹಲಿ ಮೂಲದ 7 ಬಿಆರ್​ಡಿ ಸಂಸ್ಥೆ ಅಭಿವೃದ್ಧಿಪಡಿಸಿದೆ. ಸುಕೋಯ್​-30, ಮಿಗ್​-29 ವಿಮಾನಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಹಿಂದೂಸ್ಥಾನ್​ ಏರೋನಾಟಿಕಲ್​ ಲಿಮಿಟೆಡ್​ ಜೊತೆ ನಿಕಟವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.

ಇದನ್ನೂ ಓದಿ:ಇರಾನ್​ ಬತ್ತಳಿಕೆಗೆ ಹೊಸ ಅಸ್ತ್ರ: 1400 ಕಿಮೀ ದೂರ ಸಾಗಿ ಹೊಡೆಯುವ 'ಹೈಪರ್ಸಾನಿಕ್ ಕ್ಷಿಪಣಿ' ಸೇರ್ಪಡೆ

ABOUT THE AUTHOR

...view details