ಹೈದರಾಬಾದ್: ಭಾರತವು ಪ್ರಮುಖ ನೀಲಿ (ಕಡಲ) ಆರ್ಥಿಕ ದೇಶವಾಗಿ ಹೊಮ್ಮಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2021ರ ಮ್ಯಾರಿಟೈಮ್ (ಕಡಲತಡಿ ದೇಶಗಳ) ಇಂಡಿಯಾ ಶೃಂಗಸಭೆಯನ್ನು ಉದ್ದೇಶಿಸಿ ಹೇಳಿದ್ದು, ಸರಕಾರ ಅದನ್ನು ಸಾಧ್ಯವಾಗಿಸುವ ಸಂಕಲ್ಪವನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಅವರ ಆತ್ಮವಿಶ್ವಾಸವು ಪರಿಪೂರ್ಣವಾಗಿ ವ್ಯಕ್ತವಾಗಿದೆ.
ಭಾರತದ ಜಲಮಾರ್ಗಗಳು ಮತ್ತು ಕರಾವಳಿಯ ಸಾಮರ್ಥ್ಯವನ್ನು ಹೊರಹಾಕಲು ಉದ್ದೇಶಿಸಿದ್ದ ಸಾಗರಮಾಲಾ ಯೋಜನೆಯ ಕುರಿತು ಮೊದಲ ಪ್ರಸ್ತಾಪ ಕೇಳಿಬಂದಿದ್ದು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ. ಹೀಗಿದ್ದಾಗ್ಯೂ, ಯುಪಿಎ ಆಡಳಿತದ ಸಮಯದಲ್ಲಿ ಈ ಪ್ರಸ್ತಾಪವನ್ನು ಬಹುತೇಕ ಕೈಬಿಡಲಾಗಿತ್ತು. ಆದರೆ, ನಂತರ ಬಂದ ಮೋದಿ ಆಡಳಿತವು, ಆರು ವರ್ಷಗಳ ಹಿಂದೆ, ಸಾಗರಮಾಲಾ ಯೋಜನೆಗೆ ಮತ್ತೆ ಜೀವ ತುಂಬಿತು. ಬಂದರುಗಳನ್ನು ಆಧುನೀಕರಿಸುವ ಮೂಲಕ ಜಾಗತಿಕ ದರ್ಜೆಯ ಪ್ರಮುಖ ಬಂದರುಗಳನ್ನು ನಿರ್ಮಿಸುವ ಮೂಲಕ ಹಾಗೂ ಅವೆಲ್ಲವನ್ನೂ ಪರಸ್ಪರ ಜೋಡಿಸುವ ಮೂಲಕ, ಕರಾವಳಿ ಆರ್ಥಿಕ ವಲಯಗಳನ್ನು ಸ್ಥಾಪಿಸುವುದು ಆ ಸಮಯದಲ್ಲಿ ಘೋಷಿಸಲ್ಪಟ್ಟ ಉದ್ದೇಶವಾಗಿತ್ತು.
ಸಾಂಕ್ರಾಮಿಕದ ಪರಿಣಾಮದಿಂದಾಗಿ ಎಲ್ಲಾ ಕ್ಷೇತ್ರಗಳ ಕುಸಿತಗೊಂಡಿದ್ದು ಅಭಿವೃದ್ಧಿ ಉದ್ದೇಶಗಳು ತಲೆಕೆಳಗಾಗಿರುವುದರಿಂದ, ಕೆಲವು ಸಮಯೋಚಿತ ಬದಲಾವಣೆಗಳೊಂದಿಗೆ 'ಮ್ಯಾರಿಟೈಮ್ ವಿಷನ್ 2030' ಎಂಬ ಹೊಸ ಕರಡನ್ನು ರೂಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಭಾರತದ ಕಡಲ ಇತಿಹಾಸ ಹಲವಾರು ಸಾವಿರ ವರ್ಷಗಳ ಹಿಂದಿನದು. ಇದು ಹಲವಾರು ಐತಿಹಾಸಿಕ ಬಂದರುಗಳನ್ನು ಹೊಂದಿದ್ದು ಅವೆಲ್ಲ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿ ಪ್ರವರ್ಧಮಾನಕ್ಕೆ ಬಂದವು. ಅಂದಾಜು 7,500 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶದಲ್ಲಿ, ಭಾರತವು 12 ಪ್ರಮುಖ ಬಂದರುಗಳನ್ನು ಹಾಗೂ 200ಕ್ಕೂ ಹೆಚ್ಚು ಅಧಿಸೂಚಿತ ಸಣ್ಣ ಮತ್ತು ಮಧ್ಯಂತರ ಬಂದರುಗಳನ್ನು ಹೊಂದಿದೆ. ಈ ಬಂದರುಗಳ ಮೂಲಕ ದೇಶವು 140 ಕೋಟಿ ಟನ್ ತೂಕದವರೆಗಿನ ಸರಕುಗಳನ್ನು ಸಾಗಿಸುತ್ತದೆ. ಬಂದರುಗಳು ಮತ್ತು ದೀಪಸ್ತಂಭಗಳಲ್ಲಿ ಜಲಮಾರ್ಗಗಳು, ಕಡಲ ವಿಮಾನ ಸೇವೆಗಳು ಮತ್ತು ಪ್ರವಾಸೋದ್ಯಮದ ಉತ್ತೇಜನವನ್ನು ಅಭಿವೃದ್ಧಿಪಡಿಸುವ ಮೂಲಕ ದೇಶದ ನೈಸರ್ಗಿಕ ಸಾಗರ ಶಕ್ತಿಯನ್ನು ಹೆಚ್ಚಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ. 2035ರ ವೇಳೆಗೆ ಪ್ರಮುಖ ಬಂದರುಗಳ ಬಲವರ್ಧನೆಗಾಗಿ 6 ಲಕ್ಷ ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಹೇಳಲಾಗಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆಗಳನ್ನು ಸಹ ಪ್ರಧಾನಮಂತ್ರಿಗಳು ಈ ಉದ್ದೇಶಕ್ಕಾಗಿ ಕೋರಿದ್ದಾರೆ.
ಮೊದಲೇ ಘೋಷಿಸಿದಂತೆ, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ನ ಬಂದರುಗಳನ್ನು ಪರಸ್ಪರ ಜೋಡಿಸುವ ಮೂಲಕ ಪ್ರಮುಖ ಬಂದರುಗಳನ್ನು ಕೈಗಾರಿಕಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾದರೆ, ಆ ಎಲ್ಲಾ ಸ್ಥಳಗಳು ನೀಲಿ ಆರ್ಥಿಕತೆಯ ಭಾಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರಗಳಾಗಿ ಪರಿವರ್ತನೆಯಾಗುತ್ತವೆ.