ಕರ್ನಾಟಕ

karnataka

ಬಾಹ್ಯಾಕಾಶ ಸಾಧನೆಗಳ ಮೂಲಕ 'ವಿಶ್ವಗುರು' ಆಗುವತ್ತ ಭಾರತದ ದಾಪುಗಾಲು: ಕೇಂದ್ರ ಸಚಿವ ಜಿತೇಂದ್ರ ಸಿಂಗ್

By ETV Bharat Karnataka Team

Published : Aug 24, 2023, 10:27 AM IST

ಚಂದ್ರನ ಮೇಲೆ ನೌಕೆ ಇಳಿಸುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ವಿಕ್ರಮ ಬರೆದಿದ್ದು, ವಿಶ್ವಗುರುವಾಗುವತ್ತ ಇದು ನೆರವಾಗಲಿದೆ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಕೇಂದ್ರ ಸಚಿವ ಜಿತೇಂದ್ರ ಸಿಂಗ್

ನವದೆಹಲಿ:ಚಂದ್ರನ ಮೇಲೆ ನೌಕೆಯನ್ನು ಯಶಸ್ವಿಯಾಗಿ ಇಳಿಸಿರುವ ಭಾರತವನ್ನು ಇಡೀ ವಿಶ್ವವೇ ಹೊಗಳಿದೆ. ಬಾಹ್ಯಾಕಾಶ ಯಾನದ ಮೂಲಕ ಭಾರತ ವಿಶ್ವಗುರುವಾಗುವತ್ತ ದಾಪುಗಾಲಿಟ್ಟಿದೆ ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಚಂದ್ರನ ದಕ್ಷಿಣ ಧ್ರುವದ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ್ದರ ಹಿಂದೆ ನಾಲ್ಕು ವರ್ಷಗಳ ಪರಿಶ್ರಮವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಇಲಾಖೆಯನ್ನು 'ಎಲ್ಲರಿಗೂ ಮುಕ್ತ'ಗೊಳಿಸಿದ್ದಾರೆ. ಇದು ಹೆಚ್ಚಿನ ಸಂಶೋಧನೆಗಳನ್ನು ಮಾಡಲು ಸಾಧ್ಯವಾಗಿಸಿದೆ ಎಂದು ಅವರು ಹೇಳಿದ್ದಾರೆ.

ಈಟಿವಿ ಭಾರತ್​ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇಡೀ ದೇಶ, ಭಾರತ ಮಾತ್ರವಲ್ಲದೇ, ಇಡೀ ವಿಶ್ವವೇ ಈ ಯಶಸ್ಸನ್ನು ಶ್ಲಾಘಿಸಿದೆ. ಇದರಲ್ಲಿ ಯಾವುದೇ ಗೌಪ್ಯತೆ ಕಾಪಾಡುವುದು ಏನಿಲ್ಲ. ಇದು ಸ್ವಾತಂತ್ರ್ಯ ಅಮೃತೋತ್ಸವದ ಶುಭ ಕಾಲವಾಗಿದೆ. ಪ್ರಧಾನಿ ಮೋದಿ ಅವರು ಹೇಳುವ ಹಾಗೆ 25 ವರ್ಷಗಳಲ್ಲಿ ದೇಶ ವಿಶ್ವ ಗುರುವಾಗುವ ಕಾಲವು ಬಾಹ್ಯಾಕಾಶದ ಮೂಲಕ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

ಚಂದ್ರಯಾನ-3 ಯಶಸ್ಸಿನ ಕ್ರೆಡಿಟ್ ಅನ್ನು ಕಾಂಗ್ರೆಸ್ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಮಾಜಿ ಪ್ರಧಾನಿ ನೆಹರೂ ಅವರ ಕಾಲದಲ್ಲಿ ಬಾಹ್ಯಾಕಾಶ ಯಾನಗಳ ಬಗ್ಗೆ ಅತಿ ಗೌಪ್ಯತೆ ಕಾಪಾಡಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಯವರೂ ಭಾಗಿಯಾಗುತ್ತಿದ್ದಾರೆ. ಇದು ಹೆಚ್ಚಿನ ಸಂಶೋಧನೆಗೆ ಕಾರಣವಾಗಿದೆ. ಹೀಗಾಗಿ ದೇಶದಲ್ಲೀಗ 150 ಕ್ಕೂ ಹೆಚ್ಚು ಸ್ಟಾರ್ಟ್​ಅಪ್​ಗಳನ್ನು ಹೊಂದಿದ್ದೇವೆ ಎಂದು ಸಚಿವರು ತಿಳಿಸಿದರು.

ಮುಂದಿನ 14 ದಿನಗಳು ನಿರ್ಣಾಯಕ. ಚಂದ್ರನ ಒಂದು ದಿನ ಭೂಮಿಯ 14 ದಿನಗಳಿಗೆ ಸಮ. ಲ್ಯಾಂಡರ್​ನಲ್ಲಿನ ರೋವರ್​ ಅನೇಕ ಅಧ್ಯಯನಗಳನ್ನು ನಡೆಸಲಿದೆ. ಅತಿ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-3 ಮಿಷನ್ ರೂಪಿಸಲಾಗಿದೆ. ಭಾರತವು ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿ ವಿಧಾನಗಳ ಮೂಲಕ ಯಶಸ್ಸನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಚಂದ್ರಯಾನ ಯೋಜನೆ ಸಾಬೀತುಪಡಿಸಿದೆ ಎಂದರು.

2019 ರಲ್ಲಿ ಉಡಾಯಿಸಲಾದ ಚಂದ್ರಯಾನ-2 ಯೋಜನೆಯು ವಿಫಲವಾದ ಬಳಿಕ ನಾಲ್ಕು ವರ್ಷಗಳ ನಂತರ ಚಂದ್ರಯಾನ-3 ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಇದೀಗ ಭಾರತ ಯಾರೂ ಮುಟ್ಟದ, ಕಗ್ಗತ್ತಲ ಖಂಡವಾದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿ ವಿಶ್ವದ ಮೊದಲಿಗ ಎಂಬ ಗರಿಮೆಯನ್ನು ಪಡೆಯಿತು. ಇದಕ್ಕೂ ಮೊದಲು ಅಮೆರಿಕ, ಹಿಂದಿನ ಸೋವಿಯತ್ ಒಕ್ಕೂಟ(ರಷ್ಯಾ) ಮತ್ತು ಚೀನಾ ಇದಕ್ಕೂ ಮೊದಲು ಚಂದ್ರನಲ್ಲಿ ನೌಕೆಯನ್ನು ಇಳಿಸಿವೆ.

ಇದನ್ನೂ ಓದಿ:ಲ್ಯಾಂಡರ್​ನಿಂದ ಹೊರಬಂದ ರೋವರ್​ ಚಂದ್ರನ ಮೇಲೆ ನಡೆದಾಟ ಶುರು: ಚಂದ್ರನ ಮೇಲೆ ಮೂಡಲಿದೆ ಭಾರತದ ತ್ರಿವರ್ಣ ಧ್ವಜ

ABOUT THE AUTHOR

...view details