ಕರ್ನಾಟಕ

karnataka

By

Published : Mar 8, 2023, 1:32 PM IST

ETV Bharat / bharat

ಭಾರತ ಅಗಾಧ ಸಾಮರ್ಥ್ಯದ ಅದ್ಭುತ ಕ್ರಿಯಾತ್ಮಕ ದೇಶ: ಸೌದಿ ವಿದೇಶಾಂಗ ಸಚಿವರ ಶ್ಲಾಘನೆ

ಭಾರತ ಮತ್ತು ಸೌದಿ ಅರೇಬಿಯಾಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫರ್ಹಾನ್ ಅಲ್ ಸೌದ್ ಒತ್ತು ನೀಡಿದ್ದಾರೆ. ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನವನ್ನು ಅವರು ಶ್ಲಾಘಿಸಿದ್ದಾರೆ.

ಭಾರತ ಅಗಾಧ ಸಾಮರ್ಥ್ಯದ ಅದ್ಭುತ ಕ್ರಿಯಾತ್ಮಕ ದೇಶ: ಸೌದಿ ವಿದೇಶಾಂಗ ಸಚಿವರ ಶ್ಲಾಘನೆ
Relationship with India top priority Saudi Arabia Foreign Minister

ನವದೆಹಲಿ : ಭಾರತ ದೇಶದೊಂದಿಗಿನ ಸಂಬಂಧ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಕರೆದ ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫರ್ಹಾನ್ ಅಲ್ ಸೌದ್ ಹೇಳಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ಸಂಬಂಧವು ಎಷ್ಟೋ ಪಟ್ಟು ಉನ್ನತವಾಗಿ ಬೆಳೆದಿದೆ, ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷವಾಗಿ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳಲ್ಲಿ ಮತ್ತಷ್ಟು ಪ್ರಗತಿಯ ಅಗತ್ಯವಿದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ನಡುವಿನ ಬಲವಾದ ಸಂಬಂಧವನ್ನು ವಿಶೇಷವಾಗಿ ಉಲ್ಲೇಖಿಸಿದ ಅವರು, ಇಬ್ಬರೂ ನಾಯಕರು ನಿಜವಾದ ಫಲಿತಾಂಶಗಳನ್ನು ನೋಡಲು ಬಯಸುತ್ತಾರೆ, ದೇಶಗಳ ನಡುವಿನ ಸಂಬಂಧದಲ್ಲಿ ಪ್ರಗತಿಯನ್ನು ಬಯಸುತ್ತಾರೆ ಎಂದು ಹೇಳಿದರು. ರೈಸಿನಾ ಐಡಿಯಾಸ್ ಪಾಡ್​ನಲ್ಲಿ 'ಐಡಿಯಾಸ್‌ನಲ್ಲಿ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಅಧ್ಯಕ್ಷ ಸಮೀರ್ ಸರನ್ ಅವರೊಂದಿಗಿನ ಸಂದರ್ಶನದಲ್ಲಿ ಸೌದಿ ವಿದೇಶಾಂಗ ಸಚಿವರು ಮಾತನಾಡಿದರು.

ಕಳೆದ ಐದು ವರ್ಷಗಳಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧವು ಎಷ್ಟೋ ಪಟ್ಟು ಬೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೌನ್ ಪ್ರಿನ್ಸ್ ನಡುವಿನ ಬಲವಾದ ಸಂಬಂಧವು ಇದರ ಒಂದು ಭಾಗವಾಗಿದೆ. ಫಲಿತಾಂಶಗಳ ಆಧಾರದಲ್ಲಿ ಕೆಲಸ ಮಾಡುವ ವಿಚಾರದಲ್ಲಿ ಇಬ್ಬರಿಗೂ ತುಂಬಾ ಹೋಲಿಕೆ ಇದೆ. ಕೇವಲ ನಯವಾದ ಮಾತುಗಳನ್ನಲ್ಲ, ಅವರು ಕೆಲಸವಾಗುವುದನ್ನು ನೋಡಲು ಬಯಸುತ್ತಾರೆ. ಅವರು ಪ್ರಗತಿಯನ್ನು ನೋಡಲು ಬಯಸುತ್ತಾರೆ. ಇದರಿಂದ ಸರ್ಕಾರದಲ್ಲಿರುವ ನಾವು ಬಹಳ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದೇವೆ ಎಂದು ವಿದೇಶಾಂಗ ಸಚಿವ ಫರ್ಹಾನ್ ಅಲ್-ಸೌದ್ ವಿವರಿಸಿದರು. ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನಕ್ಕೆ ವಿಶೇಷ ಒತ್ತು ನೀಡಿದ ಅವರು, ಭಾರತವು ಅಗಾಧ ಸಾಮರ್ಥ್ಯವನ್ನು ಹೊಂದಿರುವ ಅದ್ಭುತ ಕ್ರಿಯಾತ್ಮಕ ದೇಶವಾಗಿದೆ ಮತ್ತು ವಿಶೇಷವಾಗಿ ಕಳೆದ ಐದು ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಪಥವು ಅದ್ಭುತವಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಭಾರತದ ಸಾಮರ್ಥ್ಯವು ಅಳೆಯಲಾಗದಷ್ಟು ಅಗಾಧವಾಗಿದೆ ಎಂದರು.

ಸೌದಿ ಅರೇಬಿಯಾದಲ್ಲಿರುವ ಬಹುದೊಡ್ಡ ಪ್ರಮಾಣದ ಭಾರತೀಯರ ಬಗ್ಗೆ ಉಲ್ಲೇಖಿಸಿದ ಸಚಿವರು, ಹಲವಾರು ದಶಕಗಳಿಂದ ಸೌದಿ ಅರೇಬಿಯಾ ಸಾಮ್ರಾಜ್ಯದ ಅಭಿವೃದ್ಧಿಯ ಪಯಣದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಿದೆ ಎಂಬ ಅಂಶವನ್ನು ಒಪ್ಪಿಕೊಂಡರು. ಎರಡೂ ದೇಶಗಳ ಮಧ್ಯೆ ಇದಕ್ಕೂ ಮುಂಚೆಯೇ ಸಂಪರ್ಕವು ಅಸ್ತಿತ್ವದಲ್ಲಿದೆ. ನೂರಾರು ವರ್ಷಗಳ ಹಿಂದೆಯೇ ದೇಶಗಳ ಮಧ್ಯೆ ವ್ಯಾಪಾರ ಸಂಬಂಧವಿತ್ತು. ನಾವು ಈಗ ಆ ಸಂಪರ್ಕವನ್ನು ಮತ್ತೆ ನಿರ್ಮಿಸುತ್ತಿದ್ದೇವೆ. ಈ ಸಂಬಂಧ ಕೇವಲ ನಮ್ಮಿಬ್ಬರಿಗೆ ಮಾತ್ರವಲ್ಲದೆ, ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರಯೋಜನ ನೀಡುತ್ತದೆ ಎಂದು ಅವರು ಹೇಳಿದರು.

ಯುರೋಪ್‌ನೊಂದಿಗೆ ನಡೆಯುವ ಭಾರತದ ವ್ಯಾಪಾರದ ಬಹುದೊಡ್ಡ ಪ್ರಮಾಣದ ಸರಕು ಸಾಮಗ್ರಿಗಳು ಕೆಂಪು ಸಮುದ್ರದ ಮೂಲಕ ಹಾದುಹೋಗುವುದರಿಂದ ಬಹುದೊಡ್ಡ ವ್ಯಾಪಾರ ವಹಿವಾಟು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ನಾವು ಸಹಜವಾಗಿ ಭಾರತದ ಪ್ರಮುಖ ಇಂಧನ ಪೂರೈಕೆ ಪಾಲುದಾರರಾಗಿದ್ದೇವೆ. ಆದರೆ ನಾವು ಅದನ್ನು ನವೀಕರಿಸಬಹುದಾದ ಇಂಧನ ಯುಗದಲ್ಲಿಯೂ ಮುಂದುವರಿಸಲು ಎದುರು ನೋಡುತ್ತಿದ್ದೇವೆ ಎಂದರು.

ಇದನ್ನೂ ಓದಿ : ಅತ್ಯಾಚಾರಿಗಳಿಗೆ ಸೌದಿ ಅರೇಬಿಯಾ ರೀತಿ ಮರಣದಂಡನೆ ವಿಧಿಸಬೇಕು: ಕಂಗನಾ ಆಗ್ರಹ

ABOUT THE AUTHOR

...view details