ಮೂರು ವರ್ಷಗಳ ನಿರಂತರ ಪ್ರಯತ್ನ ಮತ್ತು ಚಿಂತನಾಶೀಲ ದೂರದೃಷ್ಟಿತ್ವದ ಸಂಘರ್ಷದ ಫಲವೇ ಇಂದಿನ ಗಣರಾಜ್ಯೋತ್ಸವ. ಚಿರಯೌವ್ವನದಿಂದ ಕೂಡಿರುವ ಸಂವಿಧಾನಕ್ಕೆ ಇಂದಿಗೆ 74 ವರ್ಷ. 3 ವರ್ಷ, 165 ದಿನಗಳ ಸುದೀರ್ಘ ಪ್ರಯತ್ನದಿಂದಾಗಿ ಇಂದು ದೇಶದ ಸರ್ವರೂ ಏಕತೆಯಿಂದ ಜೀವಿಸಲು ಸಾಧ್ಯವಾಗಿದೆ. ಸಂವಿಧಾನದಲ್ಲಿ ಮೊದಲು ರಚಿಸಲಾದ ವಿಧಿಗಳು 395, ಪರಿಚ್ಛೇದಗಳು 12. ನವೆಂಬರ್ 26, 1949 ರಂದು ಅನುಮೋದನೆಗೊಂಡ ಸಂವಿಧಾನ 1950 ರ ಜನವರಿ 26 ರಂದು ಅನುಷ್ಠಾನಕ್ಕೆ ಬಂದಿತ್ತು.
ಜಗತ್ತಿನಲ್ಲೇ ವಿಭಿನ್ನ ಸಂವಿಧಾನ: ಭಾರತದ ಸಂವಿಧಾನವನ್ನು ಪ್ರತಿ ಪೌರನೂ ಹೃದಯ ಮತ್ತು ಆತ್ಮದಲ್ಲಿ ಆರಾಧಿಸುತ್ತಾನೆ. ಇದೊಂದು ಐತಿಹಾಸಿಕ ಹಸ್ತಪ್ರತಿಯೂ ಹೌದು. ಪ್ರಜೆಗಳ ಸಾಮಾಜಿಕ, ಆರ್ಥಿಕ ಆಕಾಂಕ್ಷೆಗಳು ಮತ್ತು ಭರವಸೆಗಳು ಈ ಹೊತ್ತಿಗೆಯಲ್ಲಿ ಅಡಕವಾಗಿವೆ. ಭಾರತದಂತೆ ಒಂದು ಸಂವಿಧಾನದಲ್ಲಿ ಎಲ್ಲಾ ಹಕ್ಕುಗಳನ್ನು ಒದಗಿಸುವ, ಸಮಾನ ನಿಲುವು ಹೊಂದಿರುವ, ಒಂದು ದೇಶಕ್ಕೆ ಪ್ರಜಾಪ್ರಭುತ್ವದ ಆತ್ಮವನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಸುವ ಸಂವಿಧಾನ ಜಗತ್ತಿನ ಬೇರೆಲ್ಲೂ ಕಾಣಸಿಗದು.
ಸಾಂವಿಧಾನಿಕ ಹಕ್ಕುಗಳ ರಚನೆ: ಜಾತಿ, ಮತ, ಧರ್ಮ, ಲಿಂಗ, ವರ್ಗ, ಆರ್ಥಿಕ ಸ್ಥಿತಿ ಮತ್ತು ಇತರ ಸಾಮಾಜಿಕ ತೊಡಕುಗಳನ್ನು ಲೆಕ್ಕಿಸದೆ ಸಾಂವಿಧಾನಿಕ ಹಕ್ಕುಗಳನ್ನು ಪ್ರಜೆಗಳಿಗೆ ನೀಡಲಾಗಿದೆ. ಬಹು-ಪಕ್ಷ ಆಧಾರಿತ ಪ್ರಜಾಪ್ರಭುತ್ವ, ಸ್ವತಂತ್ರ ನ್ಯಾಯಾಂಗ, ಚುನಾವಣಾ ಒಕ್ಕೂಟ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಧಿಕಾರಗಳನ್ನು ಸ್ಪಷ್ಟವಾಗಿ ವಿಂಗಡಿಸುವುದು, ಅಲ್ಪಸಂಖ್ಯಾತರಿಗೆ ವಿಶೇಷ ರಕ್ಷಣೆ, ಬುಡಕಟ್ಟು ಮತ್ತು ತುಳಿತಕ್ಕೊಳಗಾದ ಸಮುದಾಯಗಳಿಗೆ ಮೀಸಲಾತಿ, ಒಂದು ಧರ್ಮವನ್ನು ಪ್ರೋತ್ಸಾಹಿಸದೇ ಎಲ್ಲ ಧರ್ಮಗಳಿಗೂ ಸಮಾನ ಅವಕಾಶ ನೀಡುವ ಜಾತ್ಯತೀತತೆ ಸೇರಿದಂತೆ ಸಂವಿಧಾನದ ಚಿಂತನಾಶೀಲ ನಿರ್ಣಯಗಳು ಭಾರತೀಯ ಪ್ರಜಾಪ್ರಭುತ್ವದ ಜೀವಾಳ.
ಜಗತ್ತಿನ ಇತರ ಪ್ರಜಾಪ್ರಭುತ್ವ ರಾಷ್ಟ್ರಗಳು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಡೆಯಲು ಮತ್ತು ನಮ್ಮ ಸಂವಿಧಾನವು ನಾಗರಿಕರಿಗೆ ಒದಗಿಸಿದಷ್ಟು ವಿಸ್ತಾರವಾದ ಹಕ್ಕುಗಳನ್ನು ತನ್ನ ನಾಗರಿಕರಿಗೆ ನೀಡಲು ಹಲವು ವರ್ಷಗಳ ಕಾಲವೇ ಹೋರಾಡಬೇಕಾಯಿತು. ದೇಶದ ಪ್ರತ್ಯೇಕತೆಗೆ ಮುಖ್ಯ ಕಾರಣವಾದ ಧರ್ಮ ಮತ್ತು ಜಾತಿಯ ಸಾಮಾಜಿಕ ಪಿಡುಗು ದೇಶದ ಶಾಂತಿ ಮತ್ತು ಸಾಮರಸ್ಯವನ್ನು ಭಂಗಗೊಳಿಸಲು ಮತ್ತೆ ಮತ್ತೆ ಯತ್ನಿಸಿದ ಉದಾಹರಣೆಗಳಿವೆ. ಅವೆಲ್ಲವನ್ನೂ ಮೀರಿ ಈ ದೇಶದ ಸಂವಿಧಾನ ರೂಪುಗೊಂಡಿದ್ದು ಹೆಮ್ಮೆಯ ಸಂಗತಿಯೇ ಸರಿ. ದೂರದೃಷ್ಟಿ ಹೊಂದಿದ ನಮ್ಮ ನಾಯಕರು, ತಾಳ್ಮೆ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿ ಜನರಿಗೆ ಸ್ನೇಹಪರ ಸಂವಿಧಾನದ ಕೊಡುಗೆ ಕೊಟ್ಟರು.
ವಿವಿಧತೆಯಲ್ಲಿ ಏಕತೆ: ಮೊದಲ ಸಂವಿಧಾನ ರಚನಾ ಸಭೆ ಡಿಸೆಂಬರ್ 9, 1946 ರಂದು ನಡೆಯಿತು. ರಚನಾ ಸಮಿತಿಯಲ್ಲಿ ಸುಮಾರು ಶೇ.82ರಷ್ಟು ಜನರು ಕಾಂಗ್ರೆಸ್ ಸದಸ್ಯರಾಗಿದ್ದರು. ಅವರೆಲ್ಲರ ಆಲೋಚನೆಗಳು ವಿಭಿನ್ನವಾಗಿದ್ದವು. ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವನ್ನು ರಚಿಸಲು ಅವರೆಲ್ಲರನ್ನೂ ಸಂಘಟಿಸುವುದು ಸರಳ ವಿಷಯವಂತೂ ಆಗಿರಲಿಲ್ಲ. ಇಡೀ ಸಂವಿಧಾನ ರಚನೆ ಕಸರತ್ತು ಕೇವಲ ಕಾಂಗ್ರೆಸ್ಸಿಗರಿಗೆ ಸೀಮಿತವಾಗಿದ್ದರೆ, ನಮ್ಮ ಸಂವಿಧಾನವನ್ನು ವಿವಿಧ ರಾಜಕೀಯ ಮಿತಿಗಳ ಅಡಿಯಲ್ಲಿ ಬರೆಯಲಾಗುತ್ತಿತ್ತು. ಆದರೆ ಕಾಂಗ್ರೆಸ್, ಸಂವಿಧಾನವನ್ನು ಒಂದು ಪಕ್ಷವಾಗಿ ಅಥವಾ ಆಂತರಿಕ ವ್ಯವಹಾರವಾಗಿ ನೋಡಲಿಲ್ಲ. ಹೀಗಾಗಿ ಇತರ ಪಕ್ಷಗಳ ಸೂಕ್ತ ಅಭ್ಯರ್ಥಿಗಳಿಗೆ ಸಂವಿಧಾನ ರಚನೆಯಲ್ಲಿ ಸ್ಥಾನಮಾನ ಒದಗಿಸಲಾಗಿತ್ತು. ಇದರಲ್ಲಿ ಸ್ಥಾನ ಪಡೆದ ಎಲ್ಲರೂ ಚಿಂತನಾಶೀಲ ನಾಯಕರಾಗಿದ್ದರು. ಈ ಮೂಲಕ ಅವರ ನ್ಯಾಯಯುತ ಅಭಿಪ್ರಾಯಗಳನ್ನು ಬಯಸಲಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಾಂವಿಧಾನ ರಚನೆ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ.
ಮಹಾನ್ ನಾಯಕರ ಪ್ರಯತ್ನ:ಡಾ.ಅಂಬೇಡ್ಕರ್ ಅವರು ತಮಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು. ಸಂವಿಧಾನ ರಚನಾ ಸಮಿತಿಯಲ್ಲಿ 300 ಜನ ಸದಸ್ಯರಿದ್ದರೂ ಅವರಲ್ಲಿ 20 ಮಂದಿ ಪ್ರಮುಖ ಪಾತ್ರವಹಿಸಿದ್ದರು. ಕಾಂಗ್ರೆಸ್ ಪರವಾಗಿ ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ನಿರ್ಣಾಯಕ ಜವಾಬ್ದಾರಿ ಹೊಂದಿದ್ದರು. ಕೆ.ಎಂ.ಮುನ್ಶಿ ಮತ್ತು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರ ಪಾತ್ರವೂ ಗಮನಾರ್ಹವಾಗಿತ್ತು. ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ ಬಿ.ಎನ್.ರಾವ್ ಮತ್ತು ಮುಖ್ಯ ಕರಡು ರಚನೆಯಲ್ಲಿ ಎಸ್.ಎನ್.ಮುಖರ್ಜಿ ಅವರ ಕೊಡುಗೆಗಳೂ ಸ್ಮರಣಾರ್ಹ.
ಏಕೀಕರಣಕ್ಕೆ ಪ್ರಾಮುಖ್ಯತೆ:ಬ್ರಿಟಿಷ್ ಅಧಿಕಾರಿಗಳು ರಚಿಸಿದ 1935ರ ಭಾರತ ಸರ್ಕಾರದ ಕಾಯ್ದೆಯ ಹೆಚ್ಚಿನ ನಿಬಂಧನೆಗಳನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರಗಳ ಅನುಭವಗಳಿಂದ ಪಡೆದ ಒಂದಷ್ಟು ಅಂಶವನ್ನೂ ಸೇರಿಸಲಾಯಿತು. ಇದರಿಂದಾಗಿ ‘ಭಾರತೀಯತೆಯ’ ಕುರುಹುಗಳನ್ನು ಸಂವಿಧಾನದಿಂದ ತೆಗೆದುಹಾಕಲಾಗಿದೆ ಎಂಬ ಟೀಕೆ ಬರಲು ಪ್ರಾರಂಭವಾಗಿತ್ತು. ಕೆಲವು ಸದಸ್ಯರು ಗ್ರಾಮ ಮಟ್ಟದಲ್ಲಿ ಆಡಳಿತವನ್ನು ವಿಕೇಂದ್ರೀಕರಿಸುವ ಗಾಂಧೀಜಿಯವರ ಸಲಹೆಯನ್ನು ಪ್ರತಿಪಾದಿಸಿದರೂ ಇತರರು ಬೆಂಬಲಿಸಲಿಲ್ಲ. ಅಂತಿಮವಾಗಿ, ಆಧುನಿಕ ಸಂವಿಧಾನ ವ್ಯಕ್ತಿಯ ಹಕ್ಕುಗಳ ಮೇಲೆ ಆಧಾರಿತವಾಗಿವೆ ಮತ್ತು ಪಂಚಾಯಿತಿಗಳು/ಇತರ ಸಂಸ್ಥೆಗಳ ಅಧಿಕಾರ ಮತ್ತು ಕರೆಯ ಮೇರೆಗೆ ಅಲ್ಲ ಎಂಬ ಅಂಶ ರಚನಾ ಸಮಿತಿಯ ಸದಸ್ಯರ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾಯಿತು.