ಕರ್ನಾಟಕ

karnataka

ETV Bharat / bharat

ಐಐಟಿ ಮದ್ರಾಸ್ ಪ್ರೊ.ಟಿ.ಪ್ರದೀಪ್ ಪ್ರತಿಷ್ಠಿತ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್​ ಅಜೀಜ್ ಇಂಟರ್​ನ್ಯಾಷನಲ್ ಪ್ರಶಸ್ತಿಗೆ ಆಯ್ಕೆ - ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಜೀಜ್ ಇಂಟರ್‌ನ್ಯಾಶನಲ್ ಪ್ರೈಸ್ ಫಾರ್ ವಾಟರ್

ದ್ವೈ - ವಾರ್ಷಿಕ ಅಂತಾರಾಷ್ಟ್ರೀಯ ವೈಜ್ಞಾನಿಕ ಪ್ರಶಸ್ತಿಯನ್ನು 2002ರ ಅ. 21ರಂದು ಸೌದಿ ಅರೇಬಿಯಾದ ರಾಜಕುಮಾರ ಸುಲ್ತಾನ್ ಬಿನ್ ಅಬ್ದುಲ್​ ಅಜೀಜ್ ಅಲ್ ಸೌದ್ ಸ್ಥಾಪಿಸಿದ್ದು, ಪ್ರಶಸ್ತಿಯು US $ 2,66,000 (ಅಂದಾಜು ರೂ. 2 ಕೋಟಿ) ನಗದು ಜೊತೆಗೆ ಚಿನ್ನದ ಪದಕ, ಟ್ರೋಫಿ ಮತ್ತು ಪ್ರಮಾಣಪತ್ರವನ್ನು ಹೊಂದಿದೆ.

IIT Madras Prof. T. Pradeep
ಐಐಟಿ ಮದ್ರಾಸ್ ಪ್ರೊ.ಟಿ.ಪ್ರದೀಪ್

By

Published : Jun 14, 2022, 7:38 AM IST

ಚೆನ್ನೈ:ಮದ್ರಾಸ್​ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರೊ.ತಲಪ್ಪಿಲ್ ಪ್ರದೀಪ್ ಅವರು ಪ್ರತಿಷ್ಠಿತ ‘ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್​ ಅಜೀಜ್ ಇಂಟರ್‌ನ್ಯಾಷನಲ್ ಪ್ರೈಸ್ ಫಾರ್ ವಾಟರ್’ (ಪಿಎಸ್‌ಐಪಿಡಬ್ಲ್ಯು) 10ನೇ ಆವೃತ್ತಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯಾವುದೇ ಜಲ-ಸಂಬಂಧಿತ ಕ್ಷೇತ್ರದಲ್ಲಿನ 'ಪ್ರಚೋದಕ ಆವಿಷ್ಕಾರ'ಕ್ಕಾಗಿ ನೀಡಲಾಗುವ 'ಸೃಜನಶೀಲತೆ ಪ್ರಶಸ್ತಿ' ವಿಭಾಗದ ಅಡಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರೊ. ಟಿ. ಪ್ರದೀಪ್ ಅವರ ಸಂಶೋಧನಾ ಗುಂಪು, ಕೈಗೆಟುಕುವ ಹಾಗೂ ಸಮರ್ಥನೀಯ ಮತ್ತು ಕುಡಿಯುವ ನೀರಿನಿಂದ ಆರ್ಸೆನಿಕ್ ಅನ್ನು ತ್ವರಿತವಾಗಿ ತೆಗೆದುಹಾಕುವಂತಹ ಪರಿಸರ ಸ್ನೇಹಿ 'ವಾಟರ್ ಪಾಸಿಟಿವ್' ನ್ಯಾನೊಸ್ಕೇಲ್ ವಸ್ತುಗಳನ್ನು ಅಭಿವೃದ್ಧಿಪಡಿಸಿದೆ. ಪ್ರೊ. ಪ್ರದೀಪ್ ಅವರು ಈ ಹಿಂದೆ ಪದ್ಮಶ್ರೀ ಮತ್ತು ನಿಕ್ಕಿ ಏಷ್ಯಾ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ತಂತ್ರಜ್ಞಾನಗಳು 1.2 ಕೋಟಿಗೂ ಹೆಚ್ಚು ಜನರಿಗೆ ಶುದ್ಧ ನೀರನ್ನು ತಲುಪಿಸುತ್ತಿವೆ.

ಪ್ರಶಸ್ತಿಯ ಮೊತ್ತ ಎಷ್ಟು ಗೊತ್ತಾ?:ದ್ವೈ-ವಾರ್ಷಿಕ ಅಂತಾರಾಷ್ಟ್ರೀಯ ವೈಜ್ಞಾನಿಕ ಪ್ರಶಸ್ತಿಯನ್ನು 2002ರ ಅ. 21ರಂದು ಸೌದಿ ಅರೇಬಿಯಾದ ರಾಜಕುಮಾರ ಸುಲ್ತಾನ್ ಬಿನ್ ಅಬ್ದುಲ್​ ಅಜೀಜ್ ಅಲ್ ಸೌದ್ ಸ್ಥಾಪಿಸಿದ್ದು, ಪ್ರಶಸ್ತಿಯು US $ 2,66,000 (ಅಂದಾಜು ರೂ. 2 ಕೋಟಿ) ನಗದು ಜೊತೆಗೆ ಚಿನ್ನದ ಪದಕ, ಟ್ರೋಫಿ ಮತ್ತು ಪ್ರಮಾಣಪತ್ರ ಹೊಂದಿದೆ.

ಪ್ರಶಸ್ತಿ ಪ್ರದಾನ ಸಮಾರಂಭ 2022ರ ಸೆಪ್ಟೆಂಬರ್ 12 ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಪ್ರಶಸ್ತಿಯು ಪ್ರೊ. ಟಿ. ಪ್ರದೀಪ್ ಅವರ ತಂಡದ ಸದಸ್ಯರಾದ ಅವುಲಾ ಅನಿಲ್ ಕುಮಾರ್, ಚೆನ್ನು ಸುಧಾಕರ್, ಶ್ರೀತಮಾ ಮುಖರ್ಜಿ, ಅಂಶುಪ್ ಮತ್ತು ಮೋಹನ್ ಉದಯಶಂಕರ್ ಅವರನ್ನೂ ಗುರುತಿಸಿದೆ.

ಈ ಪ್ರಶಸ್ತಿಯ ಕುರಿತು ಮಾತನಾಡಿದ ಐಐಟಿ ಮದ್ರಾಸ್‌ನ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಪ್ರೊ.ಟಿ.ಪ್ರದೀಪ್, ಮುಂದಿನ ಸುಧಾರಿತ ದಿನಗಳಲ್ಲಿ ಶುದ್ಧ ನೀರು ಪಡೆಯುವುದು ನಿಜವಾಗಿಯೂ ಸಮಸ್ಯೆ. ನಮ್ಮಿಂದಾದ ಸಣ್ಣ ಪ್ರಮಾಣದ ಕೊಡುಗೆಯನ್ನು ಆ ಸಮಸ್ಯೆ ಪರಿಹಾರಕ್ಕೆ ನಾವು ನೀಡಬಹುದು. ನಮ್ಮ ರಾಷ್ಟ್ರಕ್ಕೆ ಧನ್ಯವಾದಗಳು ಎಂದಿದ್ದಾರೆ.

ಭವಿಷ್ಯದ ಯೋಜನೆಗಳೇನು?:ತಮ್ಮ ಭವಿಷ್ಯದ ಯೋಜನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಡೆಸಲಿನೇಶನ್​, ತೇವಾಂಶ ಕೊಯ್ಲು, ಸಂವೇದಕ ಮತ್ತು ಮರುಬಳಕೆಯಂತಹ ನೀರಿನ ಪ್ರತಿಯೊಂದು ಕ್ಷೇತ್ರಗಳಲ್ಲಿ ಮಾಡಲು ಬಹಳಷ್ಟು ಇದೆ. ನಮ್ಮ ತಂಡವು ಆ ಪ್ರತಿಯೊಂದು ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದೆ. ಈ ವಿಶಾಲವಾದ ಕ್ಷೇತ್ರದಲ್ಲಿ ಎಲ್ಲರೂ ಕೊಡುಗೆ ನೀಡಲು ಅವಕಾಶವಿದೆ ಎಂದರು.

ಕಿಂಗ್ ಸೌದ್ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ. ಬದ್ರನ್ ಅಲ್ - ಒಮರ್ ಅವರ ಅಧ್ಯಕ್ಷತೆ ಮತ್ತು ಪಿಎಸ್​ಐಪಿಡಬ್ಲ್ಯೂ ಅಧ್ಯಕ್ಷ ಹೆಚ್​ಆರ್​ಹೆಚ್​ ಪ್ರಿನ್ಸ್ ಖಾಲಿದ್ ಬಿನ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ಅವರ ನಿರ್ದೇಶನದ ಅಡಿ ಪ್ರಶಸ್ತಿ ಮಂಡಳಿಯು ಇದೇ ಜೂನ್​ 5ರಂದು ಪ್ರಿನ್ಸ್ ಸುಲ್ತಾನ್ ಅವರ 10 ನೇ ಪ್ರಶಸ್ತಿ (2022) ಗೆ ವಿಜೇತರನ್ನು ಅನುಮೋದಿಸಿತು.

ಬಾಹ್ಯಾಕಾಶದ ಶಾಂತಿಯುತ ಬಳಕೆಗಳ (UN COPUOS) ವಿಶ್ವಸಂಸ್ಥೆಯ ಸಮಿತಿಯ 65ನೇ ಅಧಿವೇಶನದ ಬಾಹ್ಯಾಕಾಶ ಮತ್ತು ನೀರಿನ ಕಾರ್ಯಸೂಚಿಯಲ್ಲಿ 10ನೇ ಪ್ರಶಸ್ತಿ ವಿಜೇತರನ್ನು ಔಪಚಾರಿಕವಾಗಿ ಬಹಿರಂಗಪಡಿಸಲಾಯಿತು.

ಇದನ್ನೂ ಓದಿ :ಗೇರುಹಣ್ಣಿನಲ್ಲಿ ವೈನ್ ತಯಾರಿಸಿ ಪೇಟೆಂಟ್‌ ಪಡೆದ ಮಂಗಳೂರಿನ ಎನ್​ಐಟಿಕೆ ಪ್ರೊಫೆಸರ್!

ABOUT THE AUTHOR

...view details