ಕರ್ನಾಟಕ

karnataka

ಮೋದಿ ಮತ್ತೆ ಪ್ರಧಾನಿಯಾದರೆ ವಂಚಕರು ಕಂಬಿ ಹಿಂದೆ, ರಾಹುಲ್ ಪ್ರಧಾನಿಯಾದರೆ ಭ್ರಷ್ಟಾಚಾರ, ಹಗರಣಗಳೇ ದೇಶಕ್ಕೆ ಗತಿ: ಅಮಿತ್​ ಶಾ

By

Published : Jun 30, 2023, 9:26 PM IST

ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಇಂದು ಬೃಹತ್​ ಸಭೆ ಉದ್ದೇಶಿಸಿ ಮಾತನಾಡಿದರು.

If Rahul becomes PM, scams and corruption will become India's destiny: Union Home MinisterAmit Shah
ಮೋದಿ ಮತ್ತೆ ಪ್ರಧಾನಿಯಾದರೆ ವಂಚಕರು ಕಂಬಿ ಹಿಂದೆ.. ರಾಹುಲ್ ಪ್ರಧಾನಿಯಾದರೆ ಭ್ರಷ್ಟಾಚಾರ, ಹಗರಣಗಳೇ ದೇಶಕ್ಕೆ ಗತಿ: ಅಮಿತ್​ ಶಾ

ಉದಯಪುರ (ರಾಜಸ್ಥಾನ): ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾದರೆ ಭ್ರಷ್ಟಾಚಾರ ಹಾಗೂ ಹಗರಣಗಳೇ ದೇಶಕ್ಕೆ ಗತಿ. ಪ್ರಧಾನಿ ನರೇಂದ್ರ ಮೋದಿ ಪುನರಾಯ್ಕೆಯಾದರೆ ವಂಚಕರು ಕಂಬಿ ಹಿಂದೆ ಬೀಳುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ರಾಜಸ್ಥಾನದ ಉದಯಪುರದಲ್ಲಿ ಶುಕ್ರವಾರ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ ಒಂಬತ್ತು ವರ್ಷಗಳಲ್ಲಿ ಸಾಧನೆಗಳ ಕುರಿತ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಕಾಂಗ್ರೆಸ್​ ಸೇರಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ಪಾಟ್ನಾದಲ್ಲಿ ಸಭೆ ಸೇರಿದ್ದ ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡಲು ಅವರು ಬಯಸುವುದಿಲ್ಲ. ಅವರಿಗೆ ತಮ್ಮ ಪುತ್ರರ ಭವಿಷ್ಯವೇ ಮುಖ್ಯ ಎಂದು ಟೀಕಾ ಪ್ರಹಾರ ನಡೆಸಿದರು.

ಸೋನಿಯಾ ಗಾಂಧಿಯವರ ಗುರಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡುವುದಾಗಿದೆ. ಅದೇ ರೀತಿಯಾಗಿ ಲಾಲು ಯಾದವ್ ಅವರಿಗೂ ತನ್ನ ಮಗ ತೇಜಸ್ವಿ ಯಾದವ್ ಅವರನ್ನು ಪ್ರಧಾನಿ ಮಾಡುವ ಬಯಕೆ ಇದೆ. ಮಮತಾ ಬ್ಯಾನರ್ಜಿ ತಮ್ಮ ಸೋದರಳಿಯ ಅಭಿಷೇಕ್ ಅವರನ್ನು ಮುಖ್ಯಮಂತ್ರಿ ಮಾಡುವುದು ಮತ್ತು ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಭವಿಷ್ಯದ ಚಿಂತೆ ಇದೆ. ರಾಹುಲ್ ಗಾಂಧಿ ಪ್ರಧಾನಿಯಾದರೆ ಹಗರಣಗಳು ಹಾಗೂ ಭ್ರಷ್ಟಾಚಾರವೇ ದೇಶದ ಹಣೆಬರಹವಾಗಲಿದೆ ಎಂದು ಕುಟುಕಿದರು.

ಪ್ರಧಾನಿ ಮೋದಿ ಮತ್ತೊಮ್ಮೆ ಆಯ್ಕೆಯಾದರೆ ವಂಚಕರು ಕಂಬಿ ಎಣಿಸಬೇಕಾಗುತ್ತದೆ. ಅವರ ನೇತೃತ್ವದ ಸರ್ಕಾರಕ್ಕೆ ಒಂಬತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಕೃತಜ್ಞತಾ ಯಾತ್ರೆಗಳನ್ನು ಆರಂಭಿಸಿದೆ. ನಾನು ದೇಶಾದ್ಯಂತ ಪ್ರವಾಸ ಮಾಡಿದ್ದೇನೆ. ಎಲ್ಲೆಡೆ ಸಿಗುತ್ತಿರುವ ಬೆಂಬಲದಿಂದ ಮೋದಿ 300 ಸ್ಥಾನಗಳೊಂದಿಗೆ ಪ್ರಧಾನಿಯಾಗುವುದು ಖಚಿತವಾಗಿದೆ ಎಂದು ಅವರು ಹೇಳಿದರು.

ಇಡೀ ವಿಶ್ವದಲ್ಲಿ ಮೋದಿಗೆ ಸಿಗುತ್ತಿರುವ ಗೌರವ ಮೋದಿ ಅಥವಾ ಬಿಜೆಪಿಗಲ್ಲ. ಅದು ದೇಶದ 130 ಕೋಟಿ ಜನರ ಗೌರವ. 2014ರ ಮೊದಲು ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಆಲಿಯಾ-ಮಾಲಿಯಾ-ಜಮಾಲಿಯಾ (ಭಯೋತ್ಪಾದಕರು) ಭಾರತಕ್ಕೆ ನುಗ್ಗಿ ಸ್ಫೋಟದಂತಹ ಕೃತ್ಯಗಳನ್ನು ಮಾಡಿದ್ದರು. ಆದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ಪಾಕಿಸ್ತಾನ ಉರಿ ಮತ್ತು ಪುಲ್ವಾಮಾದಲ್ಲಿ ತಪ್ಪುಗಳನ್ನು ಮಾಡಿತ್ತು. ಮೋದಿ ಸರ್ಕಾರ ಹತ್ತು ದಿನಗಳಲ್ಲೇ ಏರ್​ ಸ್ಟ್ರೈಕ್​, ಸರ್ಜಿಕಲ್ ಸ್ಟ್ರೈಕ್ ​ಕಾರ್ಯಗತಗೊಳಿಸಿ ಪಾಕಿಸ್ತಾನದ ಭಯೋತ್ಪಾದಕರನ್ನು ಹೊಡೆದುರುಳಿತು ಎಂದು ಅಮಿತ್​ ಶಾ ತಿಳಿಸಿದರು.

ಇದನ್ನೂ ಓದಿ:ನುಡಿದಂತೆ ನಡೆದ ಗೆಹ್ಲೋಟ್​​​​ ಸರ್ಕಾರ... ಮೃತ ಟೇಲರ್​ ಕನ್ಹಯ್ಯಾಲಾಲ್ ಇಬ್ಬರು ಪುತ್ರರಿಗೆ ಸರ್ಕಾರಿ ನೌಕರಿ!

ಕನ್ಹಯ್ಯ ಹಂತಕರಿಗೆ ನೇಣು:ಕಳೆದ ವರ್ಷದ ಉದಯಪುರದಲ್ಲಿ ಹತ್ಯೆಗೀಡಾದ ಟೈಲರ್​​ ಕನ್ಹಯ್ಯ ಲಾಲ್ ಪ್ರಕರಣ ಸಂಬಂಧ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದರು. ಗೆಹ್ಲೋಟ್​ ಸರ್ಕಾರ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದ್ದರೆ ಇಷ್ಟೊತ್ತಿಗೆ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುತ್ತಿತ್ತು ಎಂದರು.

ಗೆಹ್ಲೋಟ್​ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ. ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ವಿಳಂಬಕ್ಕೆ ಕಾರಣವಾಗಿದೆ. ಕನ್ಹಯ್ಯ ಲಾಲ್‌ಗೆ ಸರ್ಕಾರ ಭದ್ರತೆ ನೀಡಲಿಲ್ಲ. ಅವರು ಹತ್ಯೆ ಆಗುವವರೆಗೂ ಪೊಲೀಸರು ಸುಮ್ಮನಿದ್ದರು. ಆರೋಪಿಗಳನ್ನು ಪೊಲೀಸರು ಹಿಡಿಯಲು ಮುಂದಾಗಲಿಲ್ಲ. ಎನ್ಐಎ ಅಧಿಕಾರಿಗಳು ಆರೋಪಿಗಳನ್ನು ಸೆರೆ ಹಿಡಿದರು. ಚಾರ್ಜ್​ಶೀಟ್ ಸಲ್ಲಿಸಿಲ್ಲ ಎಂದು ಹೇಳಬೇಡಿ. 2022ರ ಡಿಸೆಂಬರ್ 22ರಂದೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.

ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಬಹುಸಂಖ್ಯಾತ ಸಮುದಾಯದವರನ್ನು ಶೋಷಣೆ ಮಾಡಲಾಗುತ್ತಿದೆ. ಮೋದಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದರು. ಆದರೆ, ಗೆಹ್ಲೋಟ್ ಆಡಳಿತದಲ್ಲಿ ಕೋಟಾದಲ್ಲಿ ಪಿಎಫ್‌ಐ ಜಾಥಾ ನಡೆಯಿತು. ಕರೌಲಿಯಲ್ಲಿ ಹಿಂದೂ ಹಬ್ಬ ನಿಲ್ಲಿಸಲಾಯಿತು. ಸಂಘದ ಪಥ ಸಂಚಲನಕ್ಕೆ ಅವಕಾಶ ನೀಡಲಿಲ್ಲ. ಅಲ್ವಾರ್‌ನಲ್ಲಿ 300 ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯವನ್ನು ಕೆಡವಲಾಯಿತು ಎಂದು ಟೀಕಿಸಿದರು.

ಇದನ್ನೂ ಓದಿ:ಕನ್ಹಯ್ಯಾಲಾಲ್ ಕೊಲೆ ಪ್ರಕರಣಕ್ಕೆ ಭರ್ತಿ ವರ್ಷ: ಹಂತಕರಿಗೆ ಶೀಘ್ರ ಶಿಕ್ಷೆ ಪ್ರಕಟಿಸುವಂತೆ ಸಿಎಂ ಗೆಹ್ಲೋಟ್ ಒತ್ತಾಯ

ABOUT THE AUTHOR

...view details