ಭರತ್ಪುರ(ರಾಜಸ್ಥಾನ):ಜಿಲ್ಲೆಯ ಉಚೈನ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ವಿಮಾನವೊಂದು ಪತನಗೊಂಡಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಆಡಳಿತ ಮಂಡಳಿ ತಕ್ಷಣ ಸ್ಥಳಕ್ಕೆ ಧಾವಿಸಿದೆ. ಇದಾದ ಬಳಿಕ ವಾಯುಪಡೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಉತ್ತರ ಪ್ರದೇಶದ ಆಗ್ರಾ ಏರ್ ಫೋರ್ಸ್ ಸ್ಟೇಷನ್ನಿಂದ ಈ ವಿಮಾನ ಟೇಕ್ ಆಫ್ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಸ್ತುತ ವಾಯುಪಡೆಯು ಅಪಘಾತದ ಕಾರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.
ಇಂದು ಬೆಳಗ್ಗೆ 10 ರಿಂದ 10.15ರ ಸುಮಾರಿಗೆ ಆಕಾಶದಿಂದ ಹಾರುತ್ತಿದ್ದ ವಿಮಾನವೊಂದು ಹಠಾತ್ತನೆ ಗ್ರಾಮದ ಹೊರವಲಯದ ಹೊಲಗಳಲ್ಲಿ ಬಿದ್ದಿದೆ ಎಂದು ನಾಗಲಾ ಬಿಜ್ಜಾ ಗ್ರಾಮಸ್ಥರು ತಿಳಿಸಿದ್ದಾರೆ. ವಿಮಾನ ಪತನದ ಸದ್ದಿಗೆ ಇಡೀ ಗ್ರಾಮವೇ ಕಂಪಿಸಿದೆ. ಗ್ರಾಮದ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದು, ಆತಂಕಗೊಂಡಿದ್ದರು. ಗ್ರಾಮದ ಹೊರಗೆ ಎಲ್ಲೆಂದರಲ್ಲಿ ವಿಮಾನದ ತುಣುಕುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ವಿಮಾನ ಅಪಘಾತದ ಅವಶೇಷಗಳಲ್ಲಿ ಪೈಲಟ್ ಅಥವಾ ಇತರ ಗಾಯಾಳುಗಳು ಎಲ್ಲಿಯೂ ಕಂಡುಬಂದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಪಘಾತದ ಸ್ಥಳಕ್ಕೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ್ದರು. ಕೆಲವರು ಮರಳಿನೊಂದಿಗೆ ಅವಶೇಷಗಳ ಮೇಲಿನ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಕೆಲವರು ಅವಶೇಷಗಳು ಮತ್ತು ಗುಂಪಿನ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.
ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಬಂದಿರಬಹುದು ಎಂದು ತಿಳಿಯಲಾಗಿದೆ. ಆದರೆ, ಈ ಸಂಪೂರ್ಣ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಅಥವಾ ವಾಯುಪಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ವಿಮಾನ ಪತನಗೊಂಡಿರುವುದರ ಬಗ್ಗೆ ವರದಿಯಾಗಿದೆ. ಆದರೆ ಯಾವ ವಿಮಾನ ಪತನಗೊಂಡಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ವಾಯುಪಡೆಯಿಂದ ಮಾಹಿತಿ ಪಡೆದ ನಂತರವಷ್ಟೇ ಖಚಿತಪಡಿಸಲಾಗುವುದು ಎಂದು ರಕ್ಷಣಾ ಪಿಆರ್ಒ ಕರ್ನಲ್ ಅಮಿತಾಭ್ ಶರ್ಮಾ ಹೇಳಿದ್ದಾರೆ.
ಈ ಅಪಘಾತದ ಬಗ್ಗೆ ಭರತ್ಪುರ ಡಿಸಿಪಿ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ. ಬೆಳಗ್ಗೆ 10 ರಿಂದ 10.15ರ ಸುಮಾರಿಗೆ ವಿಮಾನ ಅಪಘಾತದ ಬಗ್ಗೆ ಮಾಹಿತಿ ಲಭಿಸಿದೆ. ಆದರೆ ಅವಶೇಷಗಳ ಮೂಲಕ ಇದು ಯುದ್ಧ ವಿಮಾನವೇ ಅಥವಾ ಸಾಮಾನ್ಯ ವಿಮಾನವೇ ಎಂದು ನಿರ್ಣಯಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಇನ್ನು, ಪೈಲಟ್ ಸಹ ಇದರಿಂದ ಹೊರಬಂದಿದ್ದಾರೆಯೇ ಅಥವಾ ಇಲ್ಲವೋ ಎಂಬುದು ತಿಳಿಯಲು ಆಗುತ್ತಿಲ್ಲ ಎಂದು ಡಿಎಸ್ಪಿ ರಾಜ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿರುವ ರಕ್ಷಣಾ ಸಚಿವ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಅಪಘಾತದ ವಿವರಗಳನ್ನು ಕೇಳಿದ್ದಾರೆ.
ಓದಿ:ಮಧ್ಯಪ್ರದೇಶದಲ್ಲಿ ಸುಖೋಯ್-30, ಮಿರಾಜ್-2000 ಯುದ್ಧ ವಿಮಾನಗಳು ಪತನ..