ಕರ್ನಾಟಕ

karnataka

By

Published : Mar 21, 2022, 5:24 PM IST

ETV Bharat / bharat

ಹೊಸ ಹಣಕಾಸು ವರ್ಷಕ್ಕೆ ಲೆಕ್ಕಾಚಾರದ ಯೋಜನೆಗಳನ್ನು ರೂಪಿಸಿಕೊಳ್ಳಲು ಇಷ್ಟು ಮಾಡಿ..

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗಳಿಕೆಯ ನಿರ್ದಿಷ್ಟ ಮೊತ್ತವನ್ನು ತನ್ನ ಹಣಕಾಸಿನ ಗುರಿಗಳನ್ನು ಸಾಧಿಸಲು ವಿನಿಯೋಗಿಸುತ್ತಾನೆ. ಅದು ಉಳಿತಾಯ ಮತ್ತು ಬೇರೆ ಯಾವುದರ ಮೇಲಾದರು ಹೂಡಿಕೆ ಮಾಡುವ ಮೂಲಕವೂ ಆಗಿರಬಹುದು. ಹೊಸ ಆರ್ಥಿಕ ವರ್ಷ ಪ್ರಾರಂಭವಾಗುತ್ತಿದ್ದು, ಈ ವರ್ಷದಲ್ಲಿ ಒಮ್ಮೆ ನಿಮ್ಮ ಆ ಕನಸುಗಳನ್ನು ಖಚಿತಪಡಿಸಿಕೊಳ್ಳಿ..

New Financial year ahead
ಹೊಸ ಹಣಕಾಸು ವರ್ಷ ಪ್ರಾರಂಭವಾಗುತ್ತಿದೆ.

ಹೈದರಾಬಾದ್ :ಕಳೆದ ಎರಡು ವರ್ಷಗಳಲ್ಲಿ ಕಡಿಮೆ ಆದಾಯ, ವ್ಯವಹಾರಗಳಲ್ಲಿ ನಷ್ಟ, ಅತಿಯಾದ ವೈದ್ಯಕೀಯ ಖರ್ಚುಗಳಿಂದಾಗಿ ಅನೇಕರು ವೈಯಕ್ತಿಕ ಹಣಕಾಸು ಸಮಸ್ಯೆ ಅನುಭವಿಸಿದವರೇ.. ಅದೇ ಸಮಯದಲ್ಲಿ ಕೋವಿಡ್​ ಬಿಲಿಯನೇರ್​ನಿಂದ ಹಿಡಿದು ಪೈಸೆ ಪೈಸೆ ಲೆಕ್ಕ ಹಾಕಿ ಬದುಕುವವನಿಗೂ ಆರ್ಥಿಕತೆಯ ಪಾಠವನ್ನು ಚೆನ್ನಾಗಿಯೇ ಮಾಡಿದೆ.

ಪ್ರತಿಯೊಬ್ಬರೂ ಲೆಕ್ಕಾಚಾರದ ಜೀವನ ಎಷ್ಟು ಮುಖ್ಯ ಎಂಬುದನ್ನು ಕಂಡುಕೊಂಡಿದ್ದಾರೆ. ಹೊಸ ಹಣಕಾಸಿನ ವರ್ಷದ ಹೊಸ್ತಿಲಲ್ಲಿ ನಾವಿರುವ ಈ ಹೊತ್ತಲ್ಲಿ ಮುಂಚಿತವಾಗಿಯೇ ಹೊಸ ಯೋಜನೆಗಳನ್ನು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಯಾವ ರೀತಿಯ ಬದಲಾವಣೆಗಳನ್ನು ತರಬಹುದು ಎಂಬುದನ್ನು ಕಂಡುಕೊಳ್ಳಲು ಡಿವಿಪಿ-ಈಕ್ವಿಟಿ ಸ್ಟ್ರಾಟೆಜಿಸ್ಟ್ (ಏಂಜೆಲ್ ಒನ್ ಲಿಮಿಟೆಡ್) ಜ್ಯೋತಿ ರಾಯ್ ಕೆಲ ಸಲಹೆಗಳನ್ನು ನೀಡಿದ್ದಾರೆ.

ನಮ್ಮ ಜೀವನದಲ್ಲಿ ಹಣಕಾಸು ಯೋಜನೆ ಬಹಳ ಮುಖ್ಯ ಎಂದರೆ ಲೆಕ್ಕಾಚಾರವಿಲ್ಲದ ಬದುಕು ಮೂಗುದಾರವಿಲ್ಲದೆ ಎತ್ತಿನ ದಾರಿಯಲ್ಲಿ ಸಾಗಿದಂತೆ. ಅದಕ್ಕಾಗಿ ಆದಷ್ಟು ಬೇಗ ನೀವು ನಿಮ್ಮ ಆದಾಯ ಮತ್ತು ಖರ್ಚುಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಈವರೆಗೆ ನೀವು ಅಂತಹ ಯೋಜನೆಗಳನ್ನು ರೂಪಿಸಿಕೊಳ್ಳದೆಯೇ ಜೀವನ ಸಾಗಿಸಿದ್ದರೆ, ಆದಷ್ಟು ಇದ್ದರೆ ಈಗಲೇ ಎಚ್ಚೆತ್ತು ಹಣಕಾಸು ಯೋಜನೆಯ ಪಟ್ಟಿಯನ್ನು ತಯಾರು ಮಾಡಿಕೊಳ್ಳಿ.

ಅತ್ತಿಂದಿತ್ತ ಗುರಿಯಿಲ್ಲದೆ ಓಡುತ್ತಿರುವ ನಿಮ್ಮ ಖರ್ಚುಗಳನ್ನು ಮೂಗುದಾರ ಹಾಕಿ ಎಳೆದಿಟ್ಟುಕೊಳ್ಳಬೇಕಿದೆ. ಹೊಸ ಆರ್ಥಿಕ ವರ್ಷದಲ್ಲಿ ಹಣಕಾಸು ಯೋಜನೆಯನ್ನು ಪ್ರಾರಂಭಿಸಿ. ಉತ್ತಮ ಆಯ-ವ್ಯಯವುಳ್ಳ ಸಮತೋಲನದ ಹಣಕಾಸು ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

ಹಣಕಾಸು ಯೋಜನೆ :ಮೊಟ್ಟ ಮೊದಲು ನೀವು ಮಾಡುತ್ತಿರುವ ಖರ್ಚುಗಳೊಂದಿಗೆ ನಿಮ್ಮ ಯೋಜನೆಯನ್ನು ಪ್ರಾರಂಭಿಸಿ. ತಿಂಗಳಲ್ಲಿ ನೀವು ಯಾಕೆ ಮತ್ತು ಎಷ್ಟು ಹಣ ಖರ್ಚು ಮಾಡುತ್ತಿದ್ದೀರಾ ಎಂಬುದು ನಿಮಗೆ ಗೊತ್ತಿದ್ದರೆ, ಆರ್ಥಿಕ ಶಿಸ್ತನ್ನು ಪಾಲಿಸುವುದು ಸುಲಭ. ನೀವು ಈಗ ಮಾಡುತ್ತಿರುವ ತಿಂಗಳ ಖರ್ಚು ಅತಿಯಾಗಿದ್ದರೆ, ಆ ಖರ್ಚಿನಲ್ಲಿ ಎಲ್ಲಿ ಕಡಿಮೆ ಮಾಡಬೇಕು ಎಂಬುದನ್ನ ನೀವು ಕಂಡುಕೊಂಡರೆ, ನಿಮ್ಮ ಉಳಿತಾಯದ ಮಟ್ಟ ಹೆಚ್ಚಾಗುತ್ತದೆ.

ನಿಮ್ಮ ಇಡೀ ತಿಂಗಳ ಖರ್ಚನ್ನು ತಾಳೆ ಹಾಕಿ ನೋಡಿ, ಎಲ್ಲಿ ಅನಗತ್ಯ, ಬೇಕಾಬಿಟ್ಟಿಯಾಗಿ ಖರ್ಚು ಮಾಡ್ತಿದ್ದೀರಾ ಗಮನಿಸಿ, ಆ ಅನಗತ್ಯ ಖರ್ಚುಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಪಟ್ಟಿ ಮಾಡಿಕೊಳ್ಳಿ. ಈಗಾಗಲೇ ನೀವು ಆದಾಯ ಮತ್ತು ಖರ್ಚುಗಳ ಬಗ್ಗೆ ಬರೆದಿಟ್ಟುಕೊಳ್ಳುತ್ತಿದ್ದೀರಾ ಅಂದರೆ ಮತ್ತೊಮ್ಮೆ ಎಚ್ಚರಿಕೆಯಿಂದ ಅದನ್ನು ಗಮನಿಸಿ, ನಿಜವಾಗಿಯೂ ಅನಗತ್ಯ ಖರ್ಚುಗಳಾಗುತ್ತಾ ಇದೆ ಎಂಬುದು ನಿಮ್ಮ ಗಮನಕ್ಕೆ ಬಂದರೆ ಮುಂದಿನ ತಿಂಗಳಿನಿಂದ ಆ ಅನಗತ್ಯ ಖರ್ಚಿಗೆ ಬ್ರೇಕ್​ ಹಾಕಿ. ಅದರಿಂದ ಉಳಿತಾಯವಾದ ಹಣವನ್ನು ನಿಮ್ಮ ಭವಿಷ್ಯದ ಯೋಜನೆಗಳಿಗೆ ಇನ್ವೆಸ್ಟ್​ ಮಾಡಿ.

ಹಣಕಾಸಿನ ಗುರಿಗಳು :ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗಳಿಕೆಯ ನಿರ್ದಿಷ್ಟ ಮೊತ್ತವನ್ನು ತನ್ನ ಹಣಕಾಸಿನ ಗುರಿಗಳನ್ನು ಸಾಧಿಸಲು ವಿನಿಯೋಗಿಸುತ್ತಾನೆ. ಅದು ಉಳಿತಾಯ ಮತ್ತು ಬೇರೆ ಯಾವುದರ ಮೇಲಾದರು ಹೂಡಿಕೆ ಮಾಡುವ ಮೂಲಕವೂ ಆಗಿರಬಹುದು. ಹೊಸ ಆರ್ಥಿಕ ವರ್ಷ ಪ್ರಾರಂಭವಾಗುತ್ತಿದ್ದು, ಈ ವರ್ಷದಲ್ಲಿ ಒಮ್ಮೆ ನಿಮ್ಮ ಆ ಕನಸುಗಳನ್ನು ಖಚಿತಪಡಿಸಿಕೊಳ್ಳಿ.

ಒಂದು ವೇಳೆ ನೀವು ನಿಮ್ಮ ಗುರಿಗಳನ್ನು ಬದಲಾವಣೆ ಮಾಡುವವರಾಗಿದ್ದರೆ ಅದಕ್ಕೆ ಅನುಗುಣವಾಗಿ ಹೂಡಿಕೆ ಯೋಜನೆಗಳನ್ನೂ ಬದಲಾಯಿಸಬೇಕಾಗುತ್ತದೆ. ಉದಾಹರಣೆಗೆ, ನೀವು 10 ವರ್ಷಗಳ ನಂತರ ಒಂದು ಮನೆಯನ್ನು ಖರೀದಿಸಬೇಕೆಂದಿದ್ದರೆ, ನೀವು ತಿಂಗಳಲ್ಲಿ ಉಳಿತಾಯ ಮಾಡುತ್ತಿರುವ ಹಣ ಅಥವಾ ಹೂಡಿಕೆಯ ಮೊತ್ತವನ್ನು ಹೆಚ್ಚಿಸಬೇಕಾಗುತ್ತದೆ. ಆದ್ದರಿಂದ, ಹೂಡಿಕೆಗೆ ಅನುಗುಣವಾಗಿ ನಿಮ್ಮ ಬಜೆಟ್ ಅನ್ನು ಸಿದ್ಧಪಡಿಸಬೇಕು.

ಹೊಸ ಹೂಡಿಕೆಗಳು :ಹೊಸ ಹೂಡಿಕೆಗಳನ್ನು ಪ್ರಾರಂಭಿಸುವ ಮನಸ್ಸಿದ್ದಲ್ಲಿ, ಈ ಆರ್ಥಿಕ ವರ್ಷ ಪ್ರಾರಂಭದಲ್ಲೇ ಆ ಯೋಜನೆಯನ್ನು ಪ್ರಾರಂಭಿಸಿ. ಈಗಾಗಲೇ ಕೆಲ ಹೂಡಿಕೆಗಳನ್ನು ನೀವು ಮಾಡಿದ್ದರೆ ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಪದೇಪದೆ ಅವುಗಳನ್ನು ಪರಿಶೀಲಿಸುತ್ತಿರುವುದರಿಂದ ನೀವು ಮಾಡಿದ ಹೂಡಿಕೆಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ತಿಳಿಯಬಹುದು.

ಒಂದು ವೇಳೆ ನೀವು ಮಾಡಿದ ಹೂಡಿಕೆಗಳಲ್ಲಿ ಯಾವುದಾದರೊಂದು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಒಂದು ವರ್ಷದಿಂದ ಕಳಪೆಯಾಗಿಯೇ ಮುಂದುವರಿಯುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬಂತೆಂದರೆ ತಕ್ಷಣ ಅದರಿಂದ ಹಿಂದೆ ಬರುವುದು ಉತ್ತಮ.

ಇದನ್ನೂ ಓದಿ:ಭಾರತದಲ್ಲಿ 42 ಬಿಲಿಯನ್ ಡಾಲರ್ ಹೂಡಿಕೆಗೆ ಜಪಾನ್​ ಸಜ್ಜು.. ಮೋದಿ-ಜಪಾನ್ ಪಿಎಂ ಭೇಟಿ ವೇಳೆ ಒಪ್ಪಂದ

ವಿಮಾ ಪಾಲಿಸಿಗಳು :ನಿಮ್ಮ ಕಷ್ಟದ ಸಮಯದಲ್ಲಿ ನೀವು ಮಾಡಿಟ್ಟುಕೊಂಡ ವಿಮಾ ಪಾಲಿಸಿಗಳು ನಿಮ್ಮನ್ನು ಕಾಪಾಡುತ್ತವೆ ಎಂಬುದನ್ನು ಮರೆಯಬೇಡಿ. ಆದ್ದರಿಂದ, ತಕ್ಷಣವೇ ಆರೋಗ್ಯ ಮತ್ತು ಜೀವ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳಿ. ಜೀವ ವಿಮಾ ಪಾಲಿಸಿಯು ವಾರ್ಷಿಕ ಆದಾಯದ ಕನಿಷ್ಠ 10-12 ಪಟ್ಟು ಇರುವಂತೆ ನೋಡಿಕೊಳ್ಳಿ. ಒಂದು ಒಳ್ಳೆಯ ಮೊತ್ತಕ್ಕೆ ವಿಮಾ ಪಾಲಿಸಿಯನ್ನು ಮಾಡಿಕೊಳ್ಳಿ. ನೀವು ವಿವಾಹಿತರಾಗಿದ್ದರೆ ಮತ್ತು ಮಕ್ಕಳಿದ್ದರೆ ವಿಮಾ ಮೊತ್ತವನ್ನು ಪರಿಶೀಲಿಸುವುದು ಒಳ್ಳೆಯದು.

ತೆರಿಗೆ ಯೋಜನೆ : ಹಣಕಾಸು ವರ್ಷದ ಮೊದಲ ತಿಂಗಳಿನಿಂದಲೇ ತೆರಿಗೆ ಕಡಿತಗೊಳ್ಳುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ನಿಮ್ಮ ಮೇಲೆ ಎಷ್ಟು ತೆರಿಗೆಯ ಹೊರೆ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಬೇಕು. ಹಣಕಾಸು ವರ್ಷದ ಅಂತ್ಯದವರೆಗೆ ಹೂಡಿಕೆ ಮಾಡುವ ಅವಕಾಶವಿದೆ. ಆದ ಕಾರಣ ಕೊನೆಯ ಕ್ಷಣದಲ್ಲಿ ಸಮಸ್ಯೆಯನ್ನು ಎದುರಿಸುವಂತಹ ಪ್ರಮೇಯದಿಂದ ತಪ್ಪಿಸಿಕೊಳ್ಳಲು ಪ್ರಾರಂಭದಿಂದಲೇ ಹೂಡಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಿಯಮಿತವಾಗಿ ಇಡೀ ವರ್ಷ ಹೂಡಿಕೆ ಮಾಡಿದರೆ ಕೊನೆಯ ಘಳಿಗೆಯಲ್ಲಿ ಪರಿಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಬರುವುದಿಲ್ಲ.

ABOUT THE AUTHOR

...view details