ಕರ್ನಾಟಕ

karnataka

ಹಿಮಾಚಲಪ್ರದೇಶದಲ್ಲಿ ವ್ಯಾಪಕ ಮಳೆ: ಸಾವಿನ ಸಂಖ್ಯೆ 80ಕ್ಕೇರಿಕೆ, ₹4 ಸಾವಿರ ಕೋಟಿ ನಷ್ಟ!

By

Published : Jul 12, 2023, 12:47 PM IST

ಹಿಮಾಚಲಪ್ರದೇಶದಲ್ಲಿ ತೀವ್ರ ಮಳೆಗೆ ಮೂರು ದಿನಗಳಲ್ಲಿ 31 ಮಂದಿ ಸಾವನ್ನಪ್ಪಿದ್ದಾರೆ. ಭೂಕುಸಿತ, ಪ್ರವಾಹದಿಂದಾಗಿ ಸುಮಾರು 1300 ರಸ್ತೆಗಳು 40 ಸೇತುವೆಗಳು ಹಾನಿಗೀಡಾಗಿವೆ ಎಂದು ಮಾಹಿತಿ ಸಿಕ್ಕಿದೆ.

ಹಿಮಾಚಲಪ್ರದೇಶದಲ್ಲಿ ವ್ಯಾಪಕ ಮಳೆ
ಹಿಮಾಚಲಪ್ರದೇಶದಲ್ಲಿ ವ್ಯಾಪಕ ಮಳೆ

ಶಿಮ್ಲಾ:ನಿರಂತರ ವ್ಯಾಪಕ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಹಿಮಾಚಲಪ್ರದೇಶದಲ್ಲಿ ಈವರೆಗೂ ಪ್ರಕೃತಿ ವಿಕೋಪಕ್ಕೆ 80 ಮಂದಿ ಸಾವನ್ನಪ್ಪಿ, 10 ಮಂದಿ ನಾಪತ್ತೆಯಾಗಿದ್ದಾರೆ. 1050 ಕೋಟಿ ರೂಪಾಯಿಯಷ್ಟು ಆಸ್ತಿಪಾಸ್ತಿ ನಾಶವಾಗಿದೆ. ಇದು 4 ಸಾವಿರ ಕೋಟಿಯಷ್ಟು ತಲುಪಬಹುದು ಎಂದು ಅಂದಾಜಿಸಲಾಗಿದೆ.

ಜೂನ್ 24ರಿಂದ ಮಾನ್ಸೂನ್ ಮಳೆಗೆ ಸಂಬಂಧಿತ ಘಟನೆಗಳಲ್ಲಿ 80 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶನಿವಾರದಿಂದೀಚೆಗೆ ನಡೆದ ಅವಘಡಗಳಲ್ಲಿ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭೂಕುಸಿತ ಮತ್ತು ಪ್ರವಾಹಕ್ಕೀಡಾಗಿ 1,300 ರಸ್ತೆಗಳು, 40 ಪ್ರಮುಖ ಸೇತುವೆಗಳು ಹಾನಿಗೀಡಾಗಿವೆ. ಸುಮಾರು 1,050 ಕೋಟಿ ರೂ.ಗಳ ಸಂಚಿತ ನಷ್ಟ ಉಂಟಾಗಿದೆ ಎಂದು ಹಿಮಾಚಲ ಪ್ರದೇಶ ವಿಪತ್ತು ನಿರ್ವಹಣಾ ತಂಡ ಮಾಹಿತಿ ನೀಡಿದೆ.

ಮಳೆ ಸಂಬಂಧಿತ ಘಟನೆಗಳಾದ 24 ರಸ್ತೆ ಅಪಘಾತಗಳು, 21 ಭೂಕುಸಿತಗಳು, 12 ಎತ್ತರ ಪ್ರದೇಶದಿಂದ ಬಿದ್ದು, 7 ಆಕಸ್ಮಿಕವಾಗಿ ನೀರಿನಲ್ಲಿ ಮುಳುಗುವಿಕೆ, 5 ಪ್ರವಾಹ, ವಿದ್ಯುತ್​ ಅವಘಡ 4, ಹಾವು ಕಡಿತದಿಂದ 5 ಮತ್ತು ಇತರ ಕಾರಣಗಳಿಗಾಗಿ 5 ಮಂದಿ ಸಾವಿಗೀಡಾಗಿದ್ದಾರೆ.

ರಸ್ತೆಗಳಿಗೆ ಹಾನಿ, ಸಂಚಾರ ನಿರ್ಬಂಧ:ಭೂಕುಸಿತ ಮತ್ತು ಪ್ರವಾಹದಿಂದಾಗಿ 1,299 ರಸ್ತೆಗಳಿಗೆ ಹಾನಿಯುಂಟಾಗಿದೆ. ಹೀಗಾಗಿ ಆ ರಸ್ತೆಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಶಿಮ್ಲಾ ಮತ್ತು ಮನಾಲಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಹೊಡೆತ ಬಿದ್ದಿದೆ. ಚಂಡೀಗಢ-ಮನಾಲಿ ಮತ್ತು ಶಿಮ್ಲಾ-ಕಲ್ಕಾ ರಾಷ್ಟ್ರೀಯ ಹೆದ್ದಾರಿಗಳು ಭೂಕುಸಿತದಿಂದಾಗಿ ಮುಚ್ಚಲ್ಪಟ್ಟಿವೆ. 3,737 ನೀರು ಸರಬರಾಜು ಯೋಜನೆಗಳಿಗೆ ಹಾನಿಯಾಗಿದ್ದು, 79 ಮನೆಗಳು ಸಂಪೂರ್ಣ ಮತ್ತು 333 ಭಾಗಶಃ ಹಾನಿಗೊಳಗಾಗಿವೆ. ಹಿಮಾಚಲ ರಸ್ತೆ ಸಾರಿಗೆ ನಿಗಮದ 1,284 ಮಾರ್ಗಗಳಲ್ಲಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಅಂಕಿಅಂಶ ನೀಡಿದ್ದಾರೆ.

₹4 ಸಾವಿರ ಕೋಟಿ ನಷ್ಟ-ಸಿಎಂ:ಕುಲು ಪ್ರದೇಶದಲ್ಲಿ ಒಂದೇ ಸುಮಾರು 40 ಅಂಗಡಿಗಳು ಮತ್ತು 30 ಮನೆಗಳು ಕೊಚ್ಚಿಹೋಗಿವೆ. ಮಳೆ ಹಾನಿಗೀಡಾದ ಪ್ರದೇಶಗಳಲ್ಲಿ ಉಂಟಾದ ಹಾನಿಯ ಪ್ರಮಾಣ 3 ರಿಂದ 4 ಸಾವಿರ ಕೋಟಿ ರೂಪಾಯಿಯಷ್ಟಿರಬಹುದು ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅಭಿಪ್ರಾಯಪಟ್ಟಿದ್ದಾರೆ.

ಮಳೆ ಹಾನಿಗೀಡಾದ ಕಸೋಲ್, ಮಣಿಕರಣ್, ಖೀರ್ ಗಂಗಾ ಮತ್ತು ಪುಲ್ಗಾ ಪ್ರದೇಶಗಳಲ್ಲಿ ಎಂ ವೈಮಾನಿಕ ಸಮೀಕ್ಷೆ ನಡೆಸಿದ ಅವರು, ಕುಲುವಿನಲ್ಲಿ ಪ್ರವಾಹದಲ್ಲಿ ಸಿಲುಕಿದ ಪ್ರವಾಸಿಗರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.

ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಪೊಲೀಸ್ ಮಹಾನಿರ್ದೇಶಕ ಸತ್ವಂತ್ ಅತ್ವಾಲ್ ಮಾತನಾಡಿ, ಮಳೆಯಿಂದಾಗಿ ಕುಸಿತಗಳಲ್ಲಿ ಚಂದರ್ತಾಲ್‌ನಲ್ಲಿ 250, ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ 300 ಮತ್ತು ಮಂಡಿ ಜಿಲ್ಲೆಯ ಕೆಲವು ಭಾಗಗಳಲ್ಲಿ 300 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಮಳೆ ಬಿಡುವು ನೀಡಿದ್ದು, ಬುಧವಾರದಿಂದ ರಕ್ಷಣಾ ಕಾರ್ಯ ನಡೆಯಲಿದೆ. ಹಾನಿಗೊಳಗಾದ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಮರುಸೃಷ್ಟಿಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಜುಲೈ 15 ರವರೆಗೆ ಶಾಲೆ ಬಂದ್​:ಮಳೆ ಕಾರಣಕ್ಕಾಗಿ ಯಾವುದೇ ಅನಾಹುತಗಳಿಗೆ ಎಡಮಾಡಿ ಕೊಡಬಾರದು ಎಂಬ ಕಾರಣಕ್ಕಾಗಿ ಜುಲೈ 15 ರವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ ರಾಜ್ಯ ಲೋಕಸೇವಾ ಆಯೋಗ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಗಸ್ಟ್ 20ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ:ದಶಕಗಳ ದಾಖಲೆ ಮುರಿದ ದೆಹಲಿಯಲ್ಲಿ ಸುರಿದ ಭಾರಿ ಮಳೆ: ವರುಣನ ಅಬ್ಬರಕ್ಕೆ ಜನ ತತ್ತರ.. ಕೇಜ್ರಿವಾಲ್​ ತುರ್ತುಸಭೆ

ABOUT THE AUTHOR

...view details