ಕೌಶಂಬಿ (ಉತ್ತರ ಪ್ರದೇಶ): ಇತ್ತೀಚಿಗೆ ದೇಶಾದ್ಯಂತ ಸುದ್ದಿಯಾಗಿದ ದೆಹಲಿ ಪ್ರಕರಣದಂತೆಯೇ ಉತ್ತರ ಪ್ರದೇಶದ ಕೌಶಂಬಿಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು 200 ಮೀಟರ್ಗೂ ಹೆಚ್ಚು ದೂರ ಎಳೆದೊಯ್ದ ಘಟನೆ ನಡೆದಿದೆ. ವಿದ್ಯಾರ್ಥಿನಿಯ ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇವಖರಪುರ ಗ್ರಾಮದ ನಿವಾಸಿ ರೇಣು ದೇವಿ ಮಂಜನ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೇಣುದೇವಿ ಅವರ ಪುತ್ರಿ ಕೌಶಲ್ಯ ದೇವಿ ಮಂಜನ್ಪುರದ ಖಾಸಗಿ ಕಂಪ್ಯೂಟರ್ ಸೆಂಟರ್ನಲ್ಲಿ ಓದುತ್ತಿದ್ದಾರೆ. ದೂರಿನ ಪ್ರಕಾರ, ಜ.1ರಂದು ಅಂದರೆ ಭಾನುವಾರ, ಕೌಶಲ್ಯ ತನ್ನ ಸೈಕಲ್ನಲ್ಲಿ ತರಗತಿಗೆ ಹೋಗುತ್ತಿದ್ದರು. ಬಜಾಪುರ ಗ್ರಾಮದ ಬಳಿ ಹಿಂದಿನಿಂದ ಬಂದ ಕಾರು ಸೈಕಲ್ಗೆ ಡಿಕ್ಕಿ ಹೊಡೆದಿದೆ. ತುಸ್ಲಿಪುರ ನಿವಾಸಿ ರಾಮ್ ನರೇಶ್ ಕಾರು ಚಲಾಯಿಸುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.
ಡಿಕ್ಕಿಯ ನಂತರವೂ ಕಾರು ನಿಲ್ಲಿಸದೆ ಅತಿವೇಗದಲ್ಲಿ ಓಡಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಕೌಶಲ್ಯಾ ಕಾರಿನಡಿ ಸಿಲುಕಿದ್ದು ಸುಮಾರು 200 ಮೀಟರ್ ಎಳೆದೊಯ್ಯಲಾಗಿದೆ. ಘಟನೆಯ ನಂತರ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಪಲ್ಟಿಯಾಗಿದೆ. ಅಷ್ಟರಲ್ಲಾಗಲೇ ಕೌಶಲ್ಯ ತೀವ್ರವಾಗಿ ಗಾಯಗೊಂಡಿದ್ದರು. ಘಟನೆ ಬಳಿಕ ಕಾರು ಚಾಲಕ ಹಾಗೂ ಅದರಲ್ಲಿ ಕುಳಿತಿದ್ದವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.