ಕರ್ನಾಟಕ

karnataka

Heavy rain: ಮುಂಬೈ ಮತ್ತು ಥಾಣೆಯಲ್ಲಿ ಧಾರಾಕಾರ ಮಳೆ, ಮರ ಬಿದ್ದು ಓರ್ವ ಸಾವು

By

Published : Jun 29, 2023, 3:49 PM IST

Updated : Jun 29, 2023, 4:55 PM IST

ಮುಂಬೈ ಮತ್ತು ಥಾಣೆ ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಮರ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

Heavy rain
ಮುಂಬೈನಲ್ಲಿ ಧಾರಾಕಾರ ಮಳೆ, ಮರ ಬಿದ್ದು ಓರ್ವ ಮೃತ್ಯು

ಮುಂಬೈ ಮತ್ತು ಥಾಣೆಯಲ್ಲಿ ಧಾರಾಕಾರ ಮಳೆ, ಮರ ಬಿದ್ದು ಓರ್ವ ಸಾವು

ಥಾಣೆ/ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರದ ಮುಂಬೈ ಮತ್ತು ಥಾಣೆ ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಭಿವಾಂಡಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳು ಜಲಾವೃತಗೊಂಡು ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ರಾಜ್ಯದಲ್ಲಿ ನದಿಗಳು ಪ್ರವಾಹದ ಮಟ್ಟವನ್ನು ತಲುಪಿವೆ. ಅಬ್ಬರಿಸುತ್ತಿರುವ ಮಳೆಯಿಂದಾಗಿ ಮರಗಳು ಧರೆಗುಳಿದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಸಂಪರ್ಕ ಕಡಿತ: ಜುನಂದೂರ್ಖಿ, ಕಂಬೆ, ತೆಂಭವ್ಲಿ, ಪಲಿವಲಿ, ಗಣೆ, ಫಿರಿಂಗ್ಪಾಡ, ಲಖಿವಿಲಿ, ಚಿಂಬಿಪದ, ಕುಹೆ, ಅಂಬರಾಯಿ, ಕುಹೆ, ಖಡ್ಕಿ, ಭೂಯಿಶೆಟ್, ಮಜಿವಾಡೆ, ಧಾಮಣೆ, ವಾನಿನಿ ಸೇರಿದಂತೆ ಅನೇಕ ಗ್ರಾಮಗಳು ಭಿವಾಂಡಿ ನಗರದೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಭಿವಾಂಡಿ ಪರೋಲ್​ ರಸ್ತೆಯ ಕಂಬೆ ಗ್ರಾಮದಲ್ಲಿ ನೀರು ನಿಂತಿದೆ.

ನಿಜಾಂಪುರ, ಕನೇರಿ, ಕಮಲಾ ಹೋಟೆಲ್, ನರ್ಪೋಲಿ, ಪದ್ಮನಗರ, ತಿಂಬತ್ತಿ, ಶಿವಾಜಿ ನಗರ ತರಕಾರಿ ಮಾರುಕಟ್ಟೆ, ನಜರಾನಾ ಕಾಂಪೌಂಡ್, ನಾಡಿನಾಕದ ತಗ್ಗು ಪ್ರದೇಶಗಳಲ್ಲಿ ಜೋರು ಮಳೆಯಾಗಿ ನೀರು ನುಗ್ಗಿದ್ದರಿಂದ ವ್ಯಾಪಾರಸ್ಥರು, ಮನೆ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಲ್ಯಾಣ್​ ರಸ್ತೆ, ಅಂಜುರಫಾಟ, ರಂಜನೋಳಿ ಬೈಪಾಸ್, ವಂಜರಪಟ್ಟಿ, ನಾರ್ಪೋಲಿ ಹಾಗೂ ಶೇಲಾರ್, ಮಂಕೋಳಿ, ವಡ್ಪೆ ಬೈಪಾಸ್ ಸೇರಿದಂತೆ ಅನೇಕ ಮಾರ್ಗಗಳಲ್ಲಿ ಮಳೆ ನೀರು ರಸ್ತೆಗೆ ನುಗ್ಗಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ.

ಅಲ್ಲದೇ, ಮುಂಬೈ- ನಾಸಿಕ್​ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಭಾರೀ ಟ್ರಾಫಿಕ್​ನಿಂದಾಗಿ ಸುಮಾರು 10 ಗಂಟೆಗಳ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಅತಿಯಾದ ಮಳೆಯಿಂದ ವಾರ್ನಾ, ಕಾಮವಾರಿ, ತಾಂಸಾ ನದಿಗಳು ಅಪಾಯದ ಮಟ್ಟ ತಲುಪಿದ್ದು, ಮಳೆ ಹೀಗೆಯೇ ಮುಂದುವರಿದರೆ ಎಚ್ಚೆತ್ತುಕೊಳ್ಳುವಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ತಂಡಕ್ಕೆ ಸೂಚನೆ ನೀಡಲಾಗಿದ್ದು, ನಾಗರಿಕರು ಜಾಗೃತರಾಗುವಂತೆ ತಹಸೀಲ್ದಾರ್ ಅಚೀಸ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ:Himachal floods: ಹಿಮಾಚಲ ಪ್ರದೇಶದಲ್ಲಿ ಪ್ರವಾಹ: 6 ಸಾವು, ಹೆದ್ದಾರಿಯಲ್ಲಿ ಭೂಕುಸಿತ, ನೂರಾರು ಜನರ ಪರದಾಟ

ಮರ ಬಿದ್ದು ವ್ಯಕ್ತಿ ಸಾವು:ಗುರುವಾರ ಮುಂಬೈನಲ್ಲಿ ಭಾರೀ ಮಳೆಯಾದ ಕಾರಣ, ಗುಡಿಸಲೊಂದರ ಮೇಲೆ ಮರ ಬಿದ್ದ ಪರಿಣಾಮ 22 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ಮರ ಬಿದ್ದು ಸಾವನ್ನಪ್ಪಿರುವ ಘಟನೆಗಳಲ್ಲಿ ಇದು ಮೂರನೇ ಸಾವಾಗಿದೆ. ಬುಧವಾರ ಮುಂಬೈನ ಪಶ್ಚಿಮ ಉಪನಗರಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದರು.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ `ಆರೆಂಜ್ ಅಲರ್ಟ್' ನೀಡಿದ್ದು, ಮಹಾರಾಷ್ಟ್ರದ ಆರು ಜಿಲ್ಲೆಗಳಾದ ಪಾಲ್ಘರ್, ರಾಯಗಢ, ಥಾಣೆ, ರತ್ನಗಿರಿ, ಸಿಂಧುದುರ್ಗ ಮತ್ತು ನಾಸಿಕ್‌ಗಳಲ್ಲಿ ಗುರುವಾರ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಪೌರಾಯುಕ್ತರ ಪ್ರಕಾರ, ಇಂದು ಮುಂಜಾನೆಯಿಂದ ರಸ್ತೆಗಳಲ್ಲಿ ನೀರು ಕೊಂಚ ಮಟ್ಟಿಗೆ ತಗ್ಗಿದೆ. ನಿನ್ನೆ ರಾತ್ರಿಯಿಂದ ಮಳೆಯೂ ಕೂಡ ಸ್ವಲ್ಪ ಕಡಿಮೆಯಾಗಿದೆ.

ಇದನ್ನೂ ಓದಿ:ದೇಶಾದ್ಯಂತ ಮುಂಗಾರು ಚುರುಕು.. ಜೂ.30ರವರೆಗೆ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ: ಹಿಮಾಚಲದಲ್ಲಿ 9 ಬಲಿ

Last Updated : Jun 29, 2023, 4:55 PM IST

ABOUT THE AUTHOR

...view details