ಎಲೂರು(ಆಂಧ್ರಪ್ರದೇಶ): ವ್ಯಕ್ತಿಯೋರ್ವ ವಿವಾಹಿತ ಮಹಿಳೆಯನ್ನು ಹತ್ಯೆ ಮಾಡಿ ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ವಿವಾಹಯೇತರ ಸಂಬಂಧ ಹೊಂದಿದ್ದು, ಮಹಿಳೆ ಕೆಲವು ದಿನಗಳಿಂದ ನಿರಾಕರಿಸುತ್ತಿರುವುದನ್ನು ತಾಳಲಾರದೇ ವ್ಯಕ್ತಿ ಹತ್ಯೆಗೈದಿರುವುದಾಗಿ ತಿಳಿದುಬಂದಿದೆ.
ಈ ಘಟನೆಯು ಸೋಮವಾರ ಆಂಧ್ರಪ್ರದೇಶದ ಎಲೂರು ನಗರದಲ್ಲಿ ನಡೆದಿದೆ. ಇಲ್ಲಿನ ಅಶೋಕ್ ಚಕ್ರ ಎಂಬಲ್ಲಿ ಮಹಿಳೆಯನ್ನು ಹತ್ಯೆಗೈದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಈ ಮಹಿಳೆಯನ್ನು ಚಾಕುವಿನಿಂದ ಕತ್ತು ಸೀಳಿ ಹತ್ಯೆಗೈಯಲಾಗಿತ್ತು. ಈ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಯನ್ನು ಶನಿವಾರಪುಪೆಟ್ಟಾ ನಿವಾಸಿ ಉದಾತಾ ಸುಜಾತ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ, ಮಹಿಳೆಯು ದಿಮ್ಮಿಟಿ ಸತ್ಯನಾರಾಯಣ ಎಂಬವರ ಮನೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಸತ್ಯನಾರಾಯಣ ಮದುವೆಯಾಗಿದ್ದರೂ ಹೆಂಡತಿಯೊಂದಿಗೆ ಮನಸ್ತಾಪದಿಂದ ಬೇರೊಂದು ಮನೆಯಲ್ಲಿ ವಾಸವಾಗಿದ್ದನು. ಇಲ್ಲಿಯೇ ಪೈಂಟಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ. ಈ ವೇಳೆ ಸ್ಥಳೀಯರು ಮಾಹಿತಿ ನೀಡಿದ ಪ್ರಕಾರ, ಮೃತ ಮಹಿಳೆಯು ಕಳೆದ ಕೆಲವು ವರ್ಷಗಳಿಂದ ಸತ್ಯನಾರಾಯಣ ಜೊತೆ ವಿವಾಹಯೇತರ ಸಂಬಂಧ ಹೊಂದಿದ್ದಳು. ಈಕೆಯು ಆಗಾಗ ಸತ್ಯನಾರಾಯಣನ ಮನೆಗೆ ಬರುತ್ತಿದ್ದಳು ಎಂದು ತಿಳಿಸಿದ್ದಾರೆ.
ರೈಲಿನಡಿ ಬಿದ್ದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ : ಆರೋಪಿ ಸತ್ಯನಾರಾಯಣ ಸುಜಾತಳನ್ನು ಕೊಂದು ಬಳಿಕ ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ರಾತ್ರಿ ಮನೆಗೆ ಬಂದ ಸುಜಾತಗೆ ಆರೋಪಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಬಳಿಕ ಸೋಮವಾರ ಬೆಳಗ್ಗೆ ಪೊಲೀಸರ ಬಂಧನ ಭೀತಿಯಿಂದ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಜಾತಳ ಶವವನ್ನು ಮನೆಯಲ್ಲಿಯೇ ಬಿಟ್ಟು, ದ್ವಿಚಕ್ರವಾಹನದಲ್ಲಿ ನುಜಿವೀಡು ರೈಲ್ವೇ ಸ್ಟೇಷನ್ಗೆ ಬಳಿ ಬಂದಿದ್ದಾನೆ. ಬಳಿಕ ರೈಲ್ವೇ ನಿಲ್ದಾಣದಲ್ಲಿ ಸತ್ಯನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಸತ್ಯನಾರಾಯಣನ ಜೇಬಿನಲ್ಲಿ ಹೆಸರು ಮತ್ತು ವಿಳಾಸ ಇರುವುದು ಪತ್ತೆಯಾಗಿದೆ. ಸ್ಥಳದಲ್ಲಿ ಬೈಕ್ ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ.