ಕರ್ನಾಟಕ

karnataka

By

Published : Jan 10, 2021, 8:59 PM IST

ETV Bharat / bharat

ಹರಿಯಾಣದಲ್ಲಿ ಭುಗಿಲೆದ್ದ ರೈತರ ಆಕ್ರೋಶ.. ಸಿಎಂ ಸಮಾವೇಶ ವೇದಿಕೆ ಧ್ವಂಸ..ಖಟ್ಟರ್‌ ಅರ್ಧ ದಾರಿಗೆ ವಾಪಸ್!!

ರೈತರನ್ನು ತಡೆಯಲು ನಾಲ್ಕು ಪೊಲೀಸ್ ವರಿಷ್ಠಾಧಿಕಾರಿಗಳು, ಒಂದು ಡಜನ್‌ಗೂ ಹೆಚ್ಚು ಉಪ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಭದ್ರತೆ ನಿಯೋಜನೆ ಮಾಡಲಾಗಿತ್ತಾದ್ರೂ 2000ಕ್ಕೂ ಹೆಚ್ಚಿನ ರೈತರ ಆಕ್ರೋಶದ ಮುಂದೆ ಇದೆಲ್ಲ ನಗಣ್ಯವಾಯಿತು..

Haryana Chief Minister Cancels Farmers' Meet After Chaos By Protesters
ಸಭೆ ರದ್ದುಗೊಳಿಸಿದ ಹರಿಯಾಣ ಸಿಎಂ

ಹರಿಯಾಣ: ಇಂದು ಕೇಂದ್ರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ಭಾಗವಾಗಿ ಭಾರೀ ಅನಾಹುತಗಳೇ ಜರುಗಿವೆ. ಕೇಂದ್ರದ ಕೃಷಿ ಕಾಯ್ದೆ ಬಗ್ಗೆ ಮಾಹಿತಿ ನೀಡಲು ಹೋದ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್ ಪ್ರತಿಭಟನಾಕಾರರಿಂದ ತೀವ್ರ ಪ್ರತಿರೋಧ ಎದುರಿಸುವಂತಾಗಿದೆ. 'ಕಿಸಾನ್‌ ಪಂಚಾಯತ್' ಕಾರ್ಯಕ್ರಮ ರದ್ದುಗೊಳಿಸಿ ಸಿಎಂ ಖಟ್ಟರ್‌ ಅರ್ಧ ದಾರಿಯಲ್ಲೇ ಕಾಪ್ಟರ್‌ನಲ್ಲಿ ವಾಪಸ್ ಆಗಿದ್ದಾರೆ‌.

ಕರ್ನಾಲ್​ ಹಳ್ಳಿಯಲ್ಲಿ ಸಭೆಗೆ ಸಿದ್ಧಪಡಿಸಿದ್ದ ವೇದಿಕೆಯನ್ನೇ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ. ಭದ್ರತೆಗಾಗಿ ವೇದಿಕೆಯ ಮುಂದೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಬೇಧಿಸಿ, ವೇದಿಕೆಯ ಮೇಲೆ ಏರಿ ಹೂವಿನ ಮಡಿಕೆಗಳು, ಟೇಬಲ್‌ಗಳು ಮತ್ತು ಕುರ್ಚಿಗಳನ್ನು ಒಡೆದು ಹಾಕಿದ್ದಾರೆ. ಹಾಗೆಯೇ ಬ್ಯಾನರ್‌ಗಳನ್ನು ಹರಿದು ವೇದಿಕೆ ಅಲಂಕರಿಸಲು ಬಳಸಿದ್ದ ತಂತಿ ಹೂವುಗಳನ್ನು ಕಿತ್ತು ಬಿಸಾಕಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿದ್ದ ಸಾವಿರಾರು ರೈತರು ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ ಮಸೂದೆಗಳನ್ನು ರದ್ದುಗೊಳಿಸುವಂತೆ ಘೋಷಣೆಗಳನ್ನು ಕೂಗಿದ್ದಾರೆ. ಹಾಗೆಯೇ ಸಮೀಪದ ಹೆದ್ದಾರಿಯಲ್ಲಿ ಕಪ್ಪು ಬಾವುಟ ಹಿಡಿದುಕೊಂಡು ನೂರಾರು ರೈತರು ಜಮಾವಣೆಗೊಂಡಿದ್ದರು. ಸಭೆ ನಡೆಯುವ ಸ್ಥಳವನ್ನು ನಾಶ ಮಾಡುವ ಮುನ್ನ ಕಪ್ಪು ಧ್ವಜಗಳನ್ನು ಹಿಡಿದುಕೊಂಡು ಬಂದ ರೈತರು, ಕೈಮ್ಲಾ ಗ್ರಾಮದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್​ಗೆ ದಾಳಿ ಇಟ್ಟರು. ಇದಕ್ಕೂ ಮುನ್ನ ಪೊಲೀಸರು ನಿಯೋಜನೆ ಮಾಡಿದ್ದ ಆರು ಚೆಕ್‌ಪೋಸ್ಟ್‌ಗಳನ್ನು ಬೇಧಿಸಿದರು.

ಇವರೆಲ್ಲರೂ ರ್ಯಾಲಿ ಸ್ಥಳದ ಕಡೆಗೆ ಮೆರವಣಿಗೆ ಪ್ರಾರಂಭಿಸಿದಾಗ, ಪೊಲೀಸರು ಇವರ ಮೇಲೆ ಅಶ್ರುವಾಯು, ಟಿಯರ್​ ಗ್ಯಾಸ್​ ಪ್ರಯೋಗ ನಡೆಸಿದ್ದಾರೆ. ಇಷ್ಟಾದ್ರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಲಾಠಿ ಚಾರ್ಜ್‌ ಕೂಡ ನಡೆಸಿದ್ದಾರೆ. ಈ ವೇಳೆ ಕೆಲವು ರೈತರು ತಪ್ಪಿಸಿಕೊಳ್ಳಲು ಹೊಲಗಳಲ್ಲಿ ಅಡಗಿಕೊಳ್ಳಬೇಕಾದ ಪರಿಸ್ಥಿತಿ ಕೂಡ ನಿರ್ಮಾಣ ಆಗಿತ್ತು.

ರೈತರನ್ನು ತಡೆಯಲು ನಾಲ್ಕು ಪೊಲೀಸ್ ವರಿಷ್ಠಾಧಿಕಾರಿಗಳು, ಒಂದು ಡಜನ್‌ಗೂ ಹೆಚ್ಚು ಉಪ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಭದ್ರತೆ ನಿಯೋಜನೆ ಮಾಡಲಾಗಿತ್ತಾದ್ರೂ 2000ಕ್ಕೂ ಹೆಚ್ಚಿನ ರೈತರ ಆಕ್ರೋಶದ ಮುಂದೆ ಇದೆಲ್ಲ ನಗಣ್ಯವಾಯಿತು.

ಪ್ರಮುಖ ವಿಷಯ ಅಂದರೆ ಸಿಎಂ ಭೇಟಿಯನ್ನು ಉತ್ತೇಜಿಸಿ ಗ್ರಾಮಸ್ಥರು ಅವರನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದರು. ಆದರೆ, ಇವರ ಕೆಲಸ ಯಶಸ್ವಿಯಾಗಲಿಲ್ಲ. ಗ್ರಾಮಸ್ಥರು ಮತ್ತು ಪ್ರತಿಭಟನಾ ರೈತರ ನಡುವೆ ಇನ್ನೇನು ಭಾರೀ ಯುದ್ಧವೇ ಸಂಭವಿಸಬಹುದು ಎನ್ನುವಷ್ಟರಲ್ಲಿ ಗ್ರಾಮಸ್ಥರೇ ಹೆದರಿ ಹಿಂದೆ ಸರಿಯುವಂತಾಯ್ತು.

ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಖಟ್ಟರ್ ಸರ್ಕಾರವು ರೈತರನ್ನು 'ಕಿಸಾನ್‌ ಮಹಾಪಂಚಾಯತ್'ಗೆ ಹಾಜರಾಗದಂತೆ ತಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ನೀವು 'ಕಿಸಾನ್‌ ಮಹಾಪಂಚಾಯತ್' ನಡೆಸುತ್ತಿರುವಾಗ, ರೈತರು ಅಲ್ಲಿಗೆ ಹೋಗುವುದನ್ನು ತಡೆಯುವುದರ ಅರ್ಥವೇನು? ನಿಮಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಸುರ್ಜೇವಾಲಾ ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ.

ಐತನ್ಮಧ್ಯೆ ಇವತ್ತು ಸಿಎಂ ಖಟ್ಟರ್‌ ಕಿಸಾನ್ ಪಂಚಾಯತ್‌ ಸಭೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸೋದಾಗಿ ಭಾರತೀಯ ಕಿಸಾನ್‌ ಯೂನಿಯನ್‌ ಕರ್ನಾಲ್‌ ಜಿಲ್ಲಾಧಿಕಾರಿ ನಿಶಾಂತ್ ಯಾದವ್ ಅವರಿಗೆ ನಿನ್ನೆಯೇ ಮನವಿ ಮಾಡಿತ್ತು. ಆದರೆ, ಸಾಂಕೇತಿಕ ಪ್ರತಿಭಟನೆಗೆ ಮಾತ್ರ ಅವಕಾಶ ನೀಡುತ್ತಿದ್ದು, ಯಾವುದೇ ಕಾರಣಕ್ಕೂ ಆಂದೋಲನ ನಡೆಸದಂತೆ ರೈತ ಮುಖಂಡರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದರು. ಆದರೆ, ಇವತ್ತು ಉದ್ರಿಕ್ತ ರೈತರ ಆಕ್ರೋಶಕ್ಕೆ ಇಡೀ ಕಾರ್ಯಕ್ರಮವೇ ರದ್ದಾಗಿದೆ.

ABOUT THE AUTHOR

...view details