ಚಂಡೀಗಢ:ಚಂಡೀಗಢದ ಮೇಲೆ ಹಕ್ಕನ್ನು ಸಾಧಿಸುವ ನಿರ್ಣಯವನ್ನು ಕಳೆದ ವಾರ ಪಂಜಾಬ್ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಇದನ್ನು ವಿರೋಧಿಸಿ ಹರಿಯಾಣದಲ್ಲಿ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಿರ್ಣಯವನ್ನು ಮಂಡಿಸಲಾಗಿತ್ತು. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮಂಡಿಸಿದ ನಿರ್ಣಯವನ್ನು, ಹರಿಯಾಣ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿತು.
ಖಟ್ಟರ್ ನಿರ್ಣಯುದ ಬೇಡಿಕೆ: ಪಂಜಾಬ್ನ ಮರುಸಂಘಟನೆಯಿಂದ ಉಂಟಾದ ಎಲ್ಲ ಸಮಸ್ಯೆಗಳು ಇತ್ಯರ್ಥವಾಗುವವರೆಗೆ ಕೇಂದ್ರ ಸರ್ಕಾರವು ಎರಡು ರಾಜ್ಯಗಳ ನಡುವೆ ಸಮತೋಲನ ಹಾಳುಮಾಡುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಖಟ್ಟರ್ ಅವರ ನಿರ್ಣಯವು ಆಗ್ರಹಿಸಿದೆ.
1966 ರ ಪಂಜಾಬ್ ಮರುಸಂಘಟನೆ ಕಾಯಿದೆಯ ಸೆಕ್ಷನ್ 3 ರ ನಿಬಂಧನೆಗಳನ್ನು ಸಹ ಖಟ್ಟರ್ ಎತ್ತಿ ತೋರಿಸಿದರು. ಅದರ ಮೂಲಕ ಹರಿಯಾಣ ರಾಜ್ಯವು ಅಸ್ತಿತ್ವಕ್ಕೆ ಬಂದಿದೆ ಮತ್ತು ಇದರಿಂದಾಗಿ ಹಲವಾರು ಕ್ರಮಗಳು ಜಾರಿಗೆ ಬಂದಿವೆ. ಚಂಡೀಗಢದ ಕೇಂದ್ರಾಡಳಿತ ಪ್ರದೇಶವು ಪಂಜಾಬ್ ಮತ್ತು ಹರಿಯಾಣದ ಸಾಮಾನ್ಯ ರಾಜಧಾನಿಯಾಗಿದೆ. ಕಳೆದ ಶುಕ್ರವಾರ ಪಂಜಾಬ್ ಅಸೆಂಬ್ಲಿಯು ಚಂಡೀಗಢವನ್ನು ಪಂಜಾಬ್ಗೆ ವರ್ಗಾಯಿಸುವಂತೆ ಕೋರಿ ನಿರ್ಣಯವನ್ನು ಮಂಡಿಸಿದರು. ಮಾನ್ ಅವರು ಮಂಡಿಸಿದ ನಿರ್ಣಯವನ್ನು ಸದನವು ಧ್ವನಿ ಮತದ ಮೂಲಕ ಅಂಗೀಕರಿಸಿತು.
ಪಂಜಾಬ್ ನಿರ್ಣಯ ತಿರಸ್ಕರಿಸಿದ ಹರಿಯಾಣ: ಪಂಜಾಬ್ ನಿರ್ಣಯವನ್ನು ಹರಿಯಾಣ ರಾಜಕೀಯ ಪಕ್ಷಗಳು ತಿರಸ್ಕರಿಸಿವೆ. ವಿಧಾನಸಭೆ ಅಧಿವೇಶನದ ನಡುವೆ ಪ್ರತಿಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ, ನಿರ್ಣಯವನ್ನು ಅಂಗೀಕರಿಸುವ ಎಎಪಿ ಉದ್ದೇಶವನ್ನು ಪ್ರಶ್ನಿಸಿದರು ಮತ್ತು ಇದು ಯಾವುದೇ ಅರ್ಥವಿಲ್ಲದ "ರಾಜಕೀಯ ಜುಮ್ಲಾ" ಎಂದು ಬಣ್ಣಿಸಿದರು.
ಇಂತಹ ಪ್ರಜಾಸತ್ತಾತ್ಮಕವಲ್ಲದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪಂಜಾಬ್ ಎರಡು ರಾಜ್ಯಗಳ ನಡುವಿನ ಕೋಮು ಸೌಹಾರ್ದತೆಗೆ ಭಂಗ ತರಬಾರದು ಎಂದು ಹೂಡಾ ಹೇಳಿದ್ದಾರೆ. ಚಂಡೀಗಢ ಹರಿಯಾಣಕ್ಕೂ ಸೇರಿದೆ. ಚಂಡೀಗಢ ಆಡಳಿತದಲ್ಲಿ ಪಂಜಾಬ್ ಮತ್ತು ಹರಿಯಾಣಕ್ಕೆ 60:40 ಪ್ರಾತಿನಿಧ್ಯವಿದೆ ಎಂದರು.