ಗುಪ್ಕಾರ್ ಒಕ್ಕೂಟದ ಪ್ರಮುಖ ಪಕ್ಷಗಳು ಈ ಹಿಂದೆ ಒಂದಾದ ಮೇಲೆ ಒಂದರಂತೆ ಬಿಜೆಪಿ ಜೊತೆಗೆ ಕೈಜೋಡಿಸಿದ್ದವು. ಜಮ್ಮು ಕಾಶ್ಮೀರ ವಿಧಾನಸಭೆಗೆ ಪ್ರತ್ಯೇಕವಾಗಿ ಸ್ಫರ್ಧಿಸಿದ ನಂತರದಲ್ಲಿ ಈ ಪಕ್ಷಗಳು ಜೊತೆ ಸೇರಿದ್ದವು. ಈ ಪ್ರದೇಶದಲ್ಲಿ ಅಬ್ದುಲ್ಲಾ ಕುಟುಂಬದ ನ್ಯಾಷನಲ್ ಕಾನ್ಫರೆನ್ಸ್ ಮೊದಲ ಬಾರಿಗೆ ಬಿಜೆಪಿ ಜೊತೆಗೆ ಸೇರಿಕೊಂಡಿತ್ತು. ವಾಜಪೇಯಿ ಕಾಲದಲ್ಲಿ ಎನ್ಡಿಎ ಭಾಗವಾಗಿತ್ತು. ನಂತರ, ಮುಫ್ತಿ ಕುಟುಂಬದ ಪಿಡಿಪಿ ಕೂಡ ಮೋದಿ ನೇತೃತ್ವದ ಎನ್ಡಿಎ ಜೊತೆಗೆ ಕೈ ಜೋಡಿಸಿ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಿತು. ಪರಸ್ಪರರನ್ನು ಸೋಲಿಸಲು ಎನ್ಸಿ ಮತ್ತು ಪಿಡಿಪಿ ಎರಡೂ ಬಿಜೆಪಿ ಬೆಂಬಲವನ್ನು ಪಡೆದಿದ್ದವು. ಈಗ ಇವೆರಡೂ, ತಮ್ಮ ಅಸ್ತಿತ್ವಕ್ಕಾಗಿ ಅದೇ ಪಕ್ಷದ ವಿರುದ್ಧ ಒಟ್ಟಾಗಿವೆ.
ಇದೇ ಗುಪ್ಕಾರ್ ಗ್ಯಾಂಗ್ನ ಪಕ್ಷಗಳ ಜೊತೆಗೆ ಸೇರಿಕೊಂಡು ಬಿಜೆಪಿ ತನ್ನ ಅಸ್ತಿತ್ವವನ್ನು ಬೆಳೆಸಿಕೊಂಡಿತು. ಜಮ್ಮು ಕಾಶ್ಮೀರದ ರಾಜ್ಯದ ಪ್ರಮುಖ ಕ್ಷೇತ್ರಗಳಿರುವ ಕಾಶ್ಮೀರದಲ್ಲಿನ ಹತ್ತು ಜಿಲ್ಲೆಗಳಲ್ಲಿ ಈ ಹಿಂದೆ ಬಿಜೆಪಿ ಅಸ್ತಿತ್ವವೇ ಇರಲಿಲ್ಲ. ಆದರೆ, ಜಮ್ಮು ಜನರು ಬಿಜೆಪಿ ಜೊತೆಗೆ ಮತ್ತು ಇತರ ರಾಜಕೀಯ ಪಕ್ಷಗಳ ಜೊತೆಗೆ ನಿರ್ಲಿಪ್ತ ಮನೋಭಾವದಲ್ಲಿದ್ದಾರೆ.
ರಾಜ್ಯದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವವರೆಗೂ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸ್ಥಿತಿ ಉತ್ತಮವಾಗಿಯೇ ಇತ್ತು. ಅಷ್ಟೇ ಅಲ್ಲ, ನಂತರ ಮಾಜಿ ಸಿಎಂ ಮೆಹಬೂಬಾ ಮುಫ್ತಿಯನ್ನು ಜೈಲಿನಿಂದ ಬಿಡುಗಡೆ ಮಾಡುವವರೆಗೂ ಪರಿಸ್ಥಿತಿ ಬದಲಾಗಿರಲಿಲ್ಲ. ಶಾಂತವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲ ಮನೋಜ್ ಸಿನ್ಹಾ ಅಡಿ ಸರ್ಕಾರ ಬಯಸಿದಂತೆಯೇ ಎಲ್ಲವೂ ನಡೆಯುತ್ತಿತ್ತು. ಹೊಸ ಬೆಳವಣಿಗೆಗಳ ಮಧ್ಯೆ, ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸುವ ಕೆಲಸ ಮಾತ್ರ ಮನೋಜ್ ಸಿನ್ಹಾರಿಂದ ಆಗಿರಲಿಲ್ಲ. ಆಗಸ್ಟ್ 5 ರಂದು ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರದಲ್ಲಿ ರಾಜಕೀಯ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ವಲಯದಲ್ಲಿ ರಾಜಕೀಯ ಚಟುವಟಿಕೆಯನ್ನು ಮರು ಆರಂಭಿಸುವ ಉದ್ದೇಶಕ್ಕೆಂದೇ ಸಿನ್ಹಾ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಉಮರ್ ಮತ್ತು ಅವರ ತಂದೆ ಫಾರೂಕ್ ಅಬ್ದುಲ್ಲಾರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು, ಜನರಿಗೆ ಯಾವ ವ್ಯತ್ಯಾಸವೂ ಕಂಡುಬರಲಿಲ್ಲ. ಅವರು ಬಿಡುಗಡೆಯಾದ ನಂತರ ಕೇವಲ ಸಣ್ಣ ಪುಟ್ಟ ಬೇಡಿಕೆಗಳಾದ 4ಜಿ ನೆಟ್ವರ್ಕ್ ಅನ್ನು ಮರುಸ್ಥಾಪಿಸುವಂತಹದ್ದನ್ನಷ್ಟೇ ಅವರು ಮುಂದಿಟ್ಟಿದ್ದರು. ಅಬ್ದುಲ್ಲಾ ಕುಟುಂಬ ಪ್ರತಿಭಟನೆ ಮಾಡದಂತೆ ಮನೋಜ್ ಸಿನ್ಹಾ ನಿಯಂತ್ರಣ ಮಾಡಿದ್ದು, ದೆಹಲಿ ನಾಯಕತ್ವಕ್ಕೆ ಮೆಚ್ಚುಗೆಯಾಗಿತ್ತು. ಅಷ್ಟೇ ಅಲ್ಲ, ಅದರಿಂದ ಹೊಸದಾಗಿ ರೂಪುಗೊಂಡ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ಮಾಡಲು ಪ್ರೋತ್ಸಾಹ ನೀಡಿತು.
ಬಿಜೆಪಿ ಮಾಡಿದ ಕೆಲವು ತಪ್ಪು ಲೆಕ್ಕಾಚಾರದಿಂದಾಗಿ ಕೆಲವು ಬೆಳವಣಿಗೆಗಳು ನಡೆದವು. ಇದೇ ಕಾರಣದಿಂದ, ಗುಪ್ಕಾರ್ ಒಕ್ಕೂಟದ ಬಗ್ಗೆ ಬಿಜೆಪಿ ಪ್ರಮುಖ ನಾಯಕರಾದ ಅಮಿತ್ ಶಾ, ಜಿತೇಂದ್ರ ಸಿಂಗ್ ಹಾಗೂ ಸಂಬಿತ್ ಪಾತ್ರ ಸೇರಿದಂತೆ ಹಲವರು ಈ ಕುರಿತು ತಮ್ಮ ಟೀಕೆಯನ್ನು ವ್ಯಕ್ತಪಡಿಸಿದರು.
ಮೆಹಬೂಬಾ ಮುಫ್ತಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮಾಡಿದ ಹೇಳಿಕೆಯಲ್ಲಿ ರಾಜಕೀಯ ಪರಿಸ್ಥಿತಿ ಬದಲಾವಣೆಯಾಗುವ ಮುನ್ಸೂಚನೆ ಸಿಕ್ಕಿತ್ತು. ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಹಾಗೂ 370ನೇ ವಿಧಿಯನ್ನು ತೆಗೆದುಹಾಕುವವರೆಗೆ ಕೆಂಪು ತ್ರಿವರ್ಣ ಧ್ವಜವನ್ನು ಮಾತ್ರ ಹಾರಿಸುತ್ತೇವೆ ಎಂದು ಅವರು ಹೇಳಿದ್ದಾರೆ.