ಕರ್ನಾಟಕ

karnataka

By

Published : Jun 13, 2023, 6:59 AM IST

ETV Bharat / bharat

Manipur violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, ಶಂಕಿತ ಕುಕಿ ಗುಂಡಿನ ದಾಳಿಯಿಂದ 9 ಮಂದಿಗೆ ಗಾಯ

ಮಣಿಪುರದಲ್ಲಿ ಮತ್ತೆ ಸಂಘರ್ಷ ಶುರುವಾಗಿದ್ದು ಸೋಮವಾರ ನಡೆದ ದಾಳಿಯಲ್ಲಿ 9 ಮಂದಿ ಗುಂಡೇಟಿಗೆ ಗಾಯಗೊಂಡಿದ್ದಾರೆ. ಚಿಕಿತ್ಸೆ ಮುಂದುವರಿಸಲಾಗಿದೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ
ಮಣಿಪುರದಲ್ಲಿ ಮತ್ತೆ ಹಿಂಸಾಚಾರ

ಗುವಾಹಟಿ( ಅಸ್ಸೋಂ):ಮಣಿಪುರದಲ್ಲಿ ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಸೋಮವಾರ ನಡೆದ ಹೊಸ ಸಂಘರ್ಷದಲ್ಲಿ 9 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಹಲವು ನಾಯಕರು ಸಂಧಾನ ಸಭೆ ನಡೆಸಲು ಯತ್ನಿಸಿದಾಗ್ಯೂ ಅಲ್ಲಿನ ಎರಡು ಪಂಗಡಗಳ ಮಧ್ಯೆ ನಡೆಯುತ್ತಿರುವ ಕದನ ಮಾತ್ರ ತಹಬದಿಗೆ ಬರುತ್ತಿಲ್ಲ.

ಸೋಮವಾರದಂದು ಇಂಫಾಲ್ ಪೂರ್ವ ಜಿಲ್ಲೆಯ ಸಗೋಲ್ಮಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ನೊಂಗ್ಸುಮ್ ಗ್ರಾಮದಲ್ಲಿ ಸೋಮವಾರ ಶಂಕಿತ ಕುಕಿ ದಾಳಿಕೋರರು ಮತ್ತು ಗ್ರಾಮದ ಕೆಲ ಜನರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ, ಕನಿಷ್ಠ 9 ಜನರಿಗೆ ಗುಂಡು ತಾಕಿ ಗಾಯಗೊಂಡಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಆರಂಭವಾದ ಗುಂಡಿನ ಕಾಳಗ ಸಂಜೆಯವರೆಗೂ ನಡೆಯಿತು. ಘಟನೆಯಲ್ಲಿ ಯಾವುದೇ ಈವರೆಗೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಮೊದಲು ಶಂಕಿತ ಕುಕಿ ದಾಳಿಕೋರ ಬೆಳಗ್ಗೆ 10 ಗಂಟೆಯ ಸುಮಾರಿಗೆ ನೋಂಗ್ಸುಮ್ ಗ್ರಾಮದ ಕಡೆಗೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಇದರಿಂದ ತಕ್ಷಣವೇ ಎಚ್ಚೆತ್ತ ಎದುರಾಳಿ ಪಡೆಯ ಕೆಲವರು ಪ್ರತಿದಾಳಿ ನಡೆಸಿದ್ದಾರೆ. ಇವರಿಗೆ ಗ್ರಾಮದ ಇನ್ನಷ್ಟು ಜನರೂ ಸಾಥ್​ ನೀಡಿದ್ದಾರೆ.

ಇಡೀ ದಿನ ಗುಂಡಿನ ಚಕಮಕಿ ನಡೆದ ಕಾರಣ, ಬಂಕರ್‌ಗಳು ಮತ್ತು ಸ್ಯಾಂಟ್ರಿ ಪೋಸ್ಟ್‌ಗಳನ್ನು ಸ್ಥಾಪಿಸಿದ ನೊಂಗ್‌ಸಮ್‌ನ ಗ್ರಾಮದ ಜನರು ಪ್ರತಿದಾಳಿ ನಡೆಸುತ್ತಲೇ ಇದ್ದರು. ಕುಕಿ ದಾಳಿಕೋರರ ಗುಂಡಿನ ದಾಳಿಗೆ ಮಧ್ಯಾಹ್ನ 12.30 ರ ಸುಮಾರಿಗೆ ನಾಲ್ವರು ಗ್ರಾಮಸ್ಥರು ಗುಂಡೇಟಿಗೆ ಒಳಗಾಗಿ ಗಾಯಗೊಂಡರು ಎಂದು ತಿಳಿದುಬಂದಿದೆ. ಇದಾದ ಬಳಿಕ ಮತ್ತೆ ಐವರು ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಒಂಬತ್ತು ಜನರು ಇಂಫಾಲ್‌ನ ರಾಜ್ ಮೆಡಿಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.

ರಾಜ್ಯಪಾಲೆ ಭೇಟಿ:ಇನ್ನೊಂದೆಡೆ, ಮಣಿಪುರದ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರು ಸೋಮವಾರ ಚುರಾಚಂದ್‌ಪುರ ಮತ್ತು ಬಿಷ್ಣುಪುರ್ ಜಿಲ್ಲೆಗಳಲ್ಲಿ ಸರ್ಕಾರದಿಂದ ಸ್ಥಾಪಿಸಲಾದ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು. ನಿರಾಶ್ರಿತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ರಾಜ್ಯಪಾಲರು ಭರವಸೆ ನೀಡಿದರು.

ಎರಡು ಸಮುದಾಯಗಳ ಮಧ್ಯೆ ನಡೆಯುತ್ತಿರುವ ಕಾಳಗದಿಂದ ಜೀವಭಯದಲ್ಲಿ 50 ಸಾವಿರಕ್ಕೂ ಅಧಿಕ ಜನರು ತಮ್ಮ ನಿವಾಸಗಳನ್ನು ತೆರವು ಮಾಡಿದ್ದು, ಸರ್ಕಾರ ಆರಂಭಿಸಿರುವ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈವರೆಗೂ ಮಣಿಪುರದ ಗಲಭೆಯಲ್ಲಿ 70 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮೇ 3 ರಂದು ಆ ರಾಜ್ಯದಲ್ಲಿ ಹಿಂಸಾಚಾರ ಶುರುವಾಯಿತು. ಮೈತೇಯಿ ಮತ್ತು ಕುಕಿ ಸಮುದಾಯದವರ ನಡುವಿನ ಬುಡಕಟ್ಟು ಸ್ಥಾನಮಾನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಗಲಾಟೆಯಲ್ಲಿ ಈ ಹಿಂಸಾಚಾರ ಸಂಭವಿಸುತ್ತಿದೆ. ಇತ್ತೀಚೆಗೆ ಕುಕಿ ಸಮುದಾಯದ ಬಂಡುಕೋರರೇ ಸತತವಾಗಿ ಹಿಂಸಾತ್ಮಕ ಕೃತ್ಯದಲ್ಲಿ ನಿರತವಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ:ಹಿಂಸಾಚಾರ ಪೀಡಿತ ಮಣಿಪುರಕ್ಕೆ ಅಮಿತ್ ಶಾ ಭೇಟಿ: ಸಿಎಂ ನಿವಾಸದಲ್ಲೇ ಸರ್ವಪಕ್ಷ ಸಭೆ!

ABOUT THE AUTHOR

...view details