ಕರ್ನಾಟಕ

karnataka

By ETV Bharat Karnataka Team

Published : Oct 19, 2023, 5:48 PM IST

ETV Bharat / bharat

ಗರ್ಬಾ ನೃತ್ಯದ ವೇಳೆ ಕಲ್ಲು ತೂರಿದ ಆರೋಪಿಗಳಿಗೆ ಥಳಿಸಿದ ಪ್ರಕರಣ: ನಾಲ್ವರು ಪೊಲೀಸರಿಗೆ 14 ದಿನ ಜೈಲು ಶಿಕ್ಷೆ

ಸಾರ್ವಜನಿಕವಾಗಿ ಆರೋಪಿಗಳಿಗೆ ಥಳಿಸಿದ ಪ್ರಕರಣದಲ್ಲಿ ನಾಲ್ವರು ಪೊಲೀಸರಿಗೆ ಗುಜರಾತ್​ ಹೈಕೋರ್ಟ್​ ಶಿಕ್ಷೆ ವಿಧಿಸಿದೆ.

ನಾಲ್ವರು ಪೊಲೀಸರಿಗೆ ಸರಳ ಶಿಕ್ಷೆ ವಿಧಿಸಿ ಹೈಕೋರ್ಟ್​ ಆದೇಶ
ನಾಲ್ವರು ಪೊಲೀಸರಿಗೆ ಸರಳ ಶಿಕ್ಷೆ ವಿಧಿಸಿ ಹೈಕೋರ್ಟ್​ ಆದೇಶ

ಖೇಡಾ (ಗುಜರಾತ್​):ಗುಜರಾತ್​ನ ಖೇಡಾ ಜಿಲ್ಲೆಯಲ್ಲಿ ಕಳೆದ ವರ್ಷ ನವರಾತ್ರಿಯ ಗರ್ಬಾ ಕಾರ್ಯಕ್ರಮದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ಆರೋಪಿಗಳಿಗೆ ಪೊಲೀಸರು ಸಾರ್ವಜನಿಕವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ವಿಧಿಸಿ ಗುಜರಾತ್​ ಹೈಕೋರ್ಟ್ ಗುರುವಾರ​ ತೀರ್ಪು ನೀಡಿತು.

ನಾಲ್ವರು ಪೊಲೀಸರನ್ನು ತಪ್ಪಿತಸ್ಥರೆಂದು ಪರಿಗಣಿಸಿದ ಕೋರ್ಟ್‌ 14 ದಿನಗಳ ಸರಳ ಜೈಲು ಶಿಕ್ಷೆಯ ಜತೆಗೆ 2,000 ರೂಪಾಯಿ ದಂಡ ವಿಧಿಸಿದೆ. ಪೊಲೀಸರು ಕಾನೂನು ಕೈಗೆತ್ತಿಕೊಂಡ ಈ ರೀತಿಯ ವರ್ತನೆ ತೋರಿದ್ದು ಸಂತ್ರಸ್ತರಿಗೆ ಮಾನಸಿಕ ಹಿಂಸೆ ಉಂಟುಮಾಡಿದೆ ಎಂದು ಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.

ಕಳೆದ ಅಕ್ಟೋಬರ್‌ನಲ್ಲಿ ಖೇಡಾ ಜಿಲ್ಲೆಯ ಮತುರ್​ ತಾಲೂಕಿನ ಉಂಧೇಲಾ ಗ್ರಾಮದಲ್ಲಿ ನವರಾತ್ರಿ ಗರ್ಬಾ ನೃತ್ಯ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಅನ್ಯ ಸಮುದಾಯದ ಗುಂಪೊಂದು ಗರ್ಬಾ ಮೇಲೆ ಕಲ್ಲು ತೂರಾಟ ನಡೆಸಿತ್ತು. ಇದರಲ್ಲಿ ಕೆಲವು ಗ್ರಾಮಸ್ಥರು ಸೇರಿ ಪೊಲೀಸರೂ ಗಾಯಗೊಂಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಒಟ್ಟು 13 ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಮೂವರನ್ನು ಪೊಲೀಸರು ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಥಳಿಸಿದ್ದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಕೆಲವು ಆರೋಪಿಗಳು ಪೊಲೀಸರ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿದ್ದರು. ಪೊಲೀಸರು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್.ಸುಪಾಹಿಯಾ ಮತ್ತು ಗೀತಾ ಗೋಪಿ ಅವರಿದ್ದ ಪೀಠವು ಸರಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿತು.

ಇದಕ್ಕೂ ಮೊದಲು, ಈ ವರ್ಷದ ಜುಲೈನಲ್ಲಿ, ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸೇರಿದಂತೆ ಪೆನ್ ಡ್ರೈವ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಿಶ್ಲೇಷಿಸಲು ನಾಡಿಯಾಡ್​ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು.

ಇದನ್ನೂ ಓದಿ:'ಶಾಸಕಾಂಗದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡಲ್ಲ': ಹಿಂದು ಧಾರ್ಮಿಕ ಕೇಂದ್ರಗಳ ನಿಯಂತ್ರಣ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್​

ABOUT THE AUTHOR

...view details