ಕರ್ನಾಟಕ

karnataka

ETV Bharat / bharat

ಬೆಲೆ ಏರಿಕೆ ತಗ್ಗಿಸಲು 30 ಲಕ್ಷ ಮೆಟ್ರಿನ್​ ಟನ್​ ಗೋಧಿ ಮುಕ್ತ ಮಾರುಕಟ್ಟೆಗೆ: ಕೇಂದ್ರ ಸರ್ಕಾರ - Central govt wheat Release to market

ಹೆಚ್ಚುತ್ತಿರುವ ಗೋಧಿ, ಹಿಟ್ಟಿನ ದರ ತಪ್ಪಿಸಲು ಕೇಂದ್ರ ಸರ್ಕಾರ ತನ್ನಲ್ಲಿರುವ 30 ಲಕ್ಷ ಮೆಟ್ರಿಕ್​ ಟನ್​ ದಾಸ್ತಾನನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

Wheat Sale by Central Govt
ಕೇಂದ್ರ ಸರ್ಕಾರದಿಂದ ಗೋಧಿ ಮಾರಾಟ

By

Published : Jan 26, 2023, 10:18 AM IST

ನವದೆಹಲಿ:ದೇಶದಲ್ಲಿ ಗೋಧಿ ಮತ್ತು ಅದರ ಹಿಟ್ಟಿನ ಬೆಲೆ ಹೆಚ್ಚುತ್ತಿದೆ. ಬೆಲೆ ಏರಿಕೆಯನ್ನು ತಪ್ಪಿಸಲು ಕೇಂದ್ರ ಸರ್ಕಾರದ ದಾಸ್ತಾನಿನಲ್ಲಿರುವ 30 ಲಕ್ಷ ಮೆಟ್ರಿಕ್​ ಟನ್​ ಗೋಧಿಯನ್ನು ಮುಕ್ತ ಮಾರುಕಟ್ಟೆ ಯೋಜನೆಯಡಿ ಬಿಡುಗಡೆ ಮಾಡಲು ಮುಂದಾಗಿದೆ. ಈ ಬಗ್ಗೆ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮುಂದಿನ ಎರಡು ತಿಂಗಳೊಳಗೆ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಕೇಂದ್ರೀಯ ದಾಸ್ತಾನಿನಿಂದ 30 ಲಕ್ಷ ಮೆಟ್ರಿಕ್​ ಟನ್​ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ತರುವ ಮೂಲಕ ಗೋಧಿ ಮತ್ತು ಹಿಟ್ಟಿನ ಬೆಲೆಯಲ್ಲಾಗುವ ವ್ಯಾಪಕ ಪರಿಣಾಮವನ್ನು ತಡೆಯಬಹುದಾಗಿದೆ. ಏರುತ್ತಿರುವ ಬೆಲೆಯನ್ನೂ ನಿಯಂತ್ರಿಸಲು ಸಾಧ್ಯ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ದೇಶೀಯವಾಗಿ ಉತ್ಪಾದಿಸಲಾದ ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯನ್ನು ಇಳಿಸುವ ಸಲುವಾಗಿ ವ್ಯಾಪಾರಿಗಳು, ರಾಜ್ಯ ಸರ್ಕಾರ, ಸಹಕಾರಿ ಸಂಸ್ಥೆ, ಫೆಡರೇಶನ್‌ಗಳು ಮತ್ತು ಪಿಎಸ್‌ಯುಗಳ ಮೂಲಕ ಗೋಧಿ ಮಾರಾಟವನ್ನು ಹೆಚ್ಚಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇ-ಹರಾಜಿನ ಅಡಿಯಲ್ಲಿ ಎಫ್‌ಸಿಐ ವಲಯದಿಂದ ಪ್ರತಿ ಖರೀದಿದಾರರಿಗೆ ಗರಿಷ್ಠ 3,000 ಮೆಟ್ರಿಕ್ ಟನ್‌ಗಳಷ್ಟು ಹಿಟ್ಟು ಗಿರಣಿದಾರರು ಮತ್ತು ಬೃಹತ್ ಖರೀದಿದಾರರು, ಮತ್ತಿತರರಿಗೆ ನೀಡಲಾಗುವುದು ಗೋಧಿಯನ್ನು ಒದಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೇ, ಇ- ಹರಾಜು ರಹಿತವಾಗಿಯೂ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ತಮ್ಮ ಯೋಜನೆಗಳಿಗೆ ಈ ಗೋಧಿಯನ್ನು ಸಹ ಬಳಸಿಕೊಳ್ಳಬಹುದು ಎಂದು ತಿಳಿಸಿದೆ.

2350 ರೂಪಾಯಿ ರಿಯಾಯಿತ ದರದಲ್ಲಿ ಇ-ಹರಾಜು ಅಲ್ಲದೆಯೇ ಸರ್ಕಾರ ಸಾರ್ವಜನಿಕ ರಂಗದ ಉದ್ಯಮಗಳು, ಸಹಕಾರಿಗಳು, ಒಕ್ಕೂಟಗಳು, ಎನ್​ಸಿಸಿಎಫ್​, ನಾಫೆಡ್​ಗಳಿಗೆ ಗೋಧಿ ಪೂರೈಸಲಾಗುವುದು. ಈ ವಿಶೇಷ ಮಾರಾಟದ ಖರೀದಿದಾರರು ಗೋಧಿಯನ್ನು ಹಿಟ್ಟು(ಹುಡಿ) ಮಾಡಿ ಅದನ್ನು ಪ್ರತಿ ಕೆಜಿಗೆ ಗರಿಷ್ಠ 29.50 ರೂಪಾಯಿಗೆ ಜನರಿಗೆ ಮಾರಾಟ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.

ಗೋಧಿಗೆ ಬೆಂಬಲ ಹೆಚ್ಚಿಸಿದ್ದ ಕೇಂದ್ರ:ರೈತರ ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗೋಧಿ, ಸಾಸಿವೆ ಸೇರಿದಂತೆ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಳೆದ ವರ್ಷ ಹೆಚ್ಚಿಸಿತ್ತು. ಆರು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಹೆಚ್ಚಿಸಿ ಪ್ರಕಟಿಸಲಾಗಿತ್ತು. ಕ್ವಿಂಟಲ್‌ ಗೋಧಿಗೆ 110 ರೂ. ಹೆಚ್ಚಿಸಿದರೆ, ಸಾಸಿವೆಗೆ 400 ರೂಪಾಯಿ ಏರಿಕೆ ಮಾಡಲಾಗಿತ್ತು.

ಪಾಕಿಸ್ತಾನದಲ್ಲಿ ಗೋಧಿಗಾಗಿ ಹಾಹಾಕಾರ:ಪಾಕಿಸ್ತಾನದಲ್ಲಿ ಗೋಧಿ ಮತ್ತು ಅದರ ಹಿಟ್ಟಿಗಾಗಿ ಹಾಹಾಕಾರ ಉಂಟಾಗಿದೆ. ಖೈಬರ್ ಪಖ್ತುಂಖ್ವಾ, ಸಿಂಧ್ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟು ಪಡೆಯಲು ನೂಕುನುಗ್ಗಲು ಉಂಟಾಗಿ ಕಾಲ್ತುಳಿತದ ಘಟನೆಗಳು ವರದಿಯಾಗಿವೆ. ಮಾರುಕಟ್ಟೆಯಲ್ಲಿ ಸಿಗುವ ಸಬ್ಸಿಡಿ ಹಿಟ್ಟಿನ ಚೀಲಗಳನ್ನು ಪಡೆದುಕೊಳ್ಳಲು ಜನತೆ ಪ್ರತಿದಿನ ಹತ್ತಾರು ಗಂಟೆಗಳ ಕಾಲ ಸರದಿಯಲ್ಲಿ ನಿಲ್ಲುತ್ತಿದ್ದಾರೆ.

ಶಸ್ತ್ರಸಜ್ಜಿತ ಯೋಧರ ಬೆಂಗಾವಲಿನಲ್ಲಿ ಮಿನಿ ಟ್ರಕ್‌ಗಳು ಮತ್ತು ವ್ಯಾನ್‌ಗಳು ಹಿಟ್ಟು ಹಂಚಲು ಹೋಗುತ್ತಿರುವಾಗ ವಾಹನಗಳ ಸುತ್ತಲೂ ಜನರು ಜಮಾಯಿಸಿ ಪರಸ್ಪರ ತಳ್ಳಾಟ ನಡೆಸಿರುವ ದೃಶ್ಯಗಳು ಕಂಡುಬಂದಿವೆ. ಹಿಟ್ಟಿನ ವ್ಯಾಪಾರ ಕೇಂದ್ರಗಳು ಮತ್ತು ತಂದೂರ್‌ಗಳಲ್ಲಿ ಘರ್ಷಣೆಗಳು ನಡೆದ ಬಗ್ಗೆಯೂ ವರದಿಯಾಗಿವೆ. ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಗೋಧಿ ಮತ್ತು ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ.

ಇದನ್ನೂ ಓದಿ:ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ತೀವ್ರ: ಗೋಧಿ ಹಿಟ್ಟಿಗಾಗಿ ಪ್ರಾಣವನ್ನೇ ಪಣಕ್ಕಿಡುವ ಜನ!

ABOUT THE AUTHOR

...view details