ಕರ್ನಾಟಕ

karnataka

ETV Bharat / bharat

ಸಂಪ್ರದಾಯದ ಉಗಮ.. ಮೊದಲ ರಾಷ್ಟ್ರಪತಿಗಳ ಪ್ರಮಾಣದ ಕುರಿತು ಕುತೂಹಲದ ಮಾಹಿತಿ - ಪತ್ರಿಕಾ ಮಾಹಿತಿ ಬ್ಯೂರೋ ಟ್ವಿಟ್​

ಪತ್ರಿಕಾ ಮಾಹಿತಿ ಬ್ಯೂರೋ(ಪಿಐಬಿ) 'ಸಂಪ್ರದಾಯದ ಹುಟ್ಟಿನ ಒಂದು ನೋಟ ಇಲ್ಲಿದೆ' ಎಂಬ ಶೀರ್ಷಿಕೆಯಡಿ ಮೊದಲ ರಾಷ್ಟ್ರಪತಿಗಳ ಪ್ರಮಾಣ ವಚನ ಸಮಾರಂಭದ ಪ್ರಕಟಣೆಯನ್ನು ಹಂಚಿಕೊಂಡಿದೆ.

Rashtrapati Bhavan
ರಾಷ್ಟ್ರಪತಿ ಭವನ

By

Published : Jul 25, 2022, 10:38 AM IST

ನವದೆಹಲಿ: ಭಾರತದ 15ನೇ ರಾಷ್ಟ್ರಪತಿಗಳ ಪ್ರಮಾಣ ವಚನ ಸಮಾರಂಭದ ಸಂದರ್ಭದಲ್ಲಿ ದೇಶದ ಮೊಟ್ಟ ಮೊದಲ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಿದ ಆ ದಿನ ಹೇಗಿತ್ತು ಅನ್ನೋದನ್ನು ನೋಡೋಣ.

15 ಆಗಸ್ಟ್ 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಆದರೆ ಆರಂಭದಲ್ಲಿ ಕಾಮನ್​ ವೆಲ್ತ್ ರಾಷ್ಟ್ರದೊಳಗಿನ ಒಂದು ಅಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶವನ್ನು ಪ್ರತಿನಿಧಿಸಿದ್ದರು. (ಲಾರ್ಡ್ ಮೌಂಟ್​​ ಬ್ಯಾಟನ್). ಇದಾದ ನಂತರ, ಡಾ.ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ ಭಾರತದ ಸಂವಿಧಾನ ರಚನಾ ಸಭೆ ದೇಶಕ್ಕೆ ಸಂವಿಧಾನ ರಚಿಸುವ ಕಾರ್ಯಕ್ಕೆ ಮುಂದಾಯಿತು. ಅಂತಿಮವಾಗಿ 26 ಜನವರಿ 1950 ಭಾರತ ಸಂವಿಧಾನ ಜಾರಿಗೆ ಬಂದಿತು. ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ರಾಷ್ಟ್ರಪತಿ ಪದವಿ ಸೃಷ್ಟಿಯಾಯಿತು.

ಮೊದಲ ಪ್ರಮಾಣವಚನ ಸಮಾರಂಭ:1950 ಜನವರಿ 25 ರಂದು ಬೆಳಗ್ಗೆ 9-50ಕ್ಕೆ ದರ್ಬಾರ್‌ ಹಾಲ್​​ನಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮೊದಲ ರಾಷ್ಟ್ರಪತಿಯಾಗಿ ಬಾಬು ರಾಜೇಂದ್ರ ಪ್ರಸಾದ್ ಅವರು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು. ಗವರ್ನರ್-ಜನರಲ್ ಲಾರ್ಡ್ ಮೌಂಟ್​​ ಬ್ಯಾಟನ್ ದೇಶವನ್ನು ಪ್ರತಿನಿಧಿಸಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿಗಳು ಪ್ರಮಾಣವಚನ ಬೋಧಿಸಿದ್ದರು.

ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮತ್ತು ಅವರ ನಂತರ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಸರ್ವಪಲ್ಲಿ ರಾಧಾಕೃಷ್ಣನ್, ಝಾಕಿರ್ ಹುಸೇನ್ ಮತ್ತು ಫಕ್ರುದ್ದೀನ್ ಆಲಿ ಅಹ್ಮದ್ ಬೇರೆ ದಿನಾಂಕಗಳಂದು ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜೇಂದ್ರ ಪ್ರಸಾದ್ ಅವರು ಭಾರತದ ಗಣರಾಜ್ಯೋತ್ಸವ ದಿನವಾದ ಜನವರಿ 26, 1950ರಂದು ಅಧಿಕಾರ ಸ್ವೀಕರಿಸಿದ್ದರು. 2ನೇ ಅವಧಿಗೂ ಅವರೇ ಅಧಿಕಾರದಲ್ಲಿ ಮುಂದುವರಿದರು. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೇ 13, 1962ರಂದು ರಾಷ್ಟ್ರಪತಿ ಸ್ಥಾನ ಅಲಂಕರಿಸಿದರು. ಮೇ 13, 1967ರವರೆಗೂ ಅವರು ಅಧಿಕಾರದಲ್ಲಿದ್ದರು. ನಂತರ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಝಾಕಿರ್ ಹುಸೇನ್ ಮತ್ತು ಫಕ್ರುದ್ದೀನ್ ಆಲಿ ಅಹ್ಮದ್ ಅಧಿಕಾರದಲ್ಲಿದ್ದಾಗಲೇ ಮೃತಪಟ್ಟಿದ್ದರು. ಹೀಗಾಗಿ ರಾಷ್ಟ್ರಪತಿ ಸ್ಥಾನಕ್ಕೆ ಅವಧಿಪೂರ್ವ ಚುನಾವಣೆಗಳು ನಡೆಯಬೇಕಾಯಿತು.

ಜು. 25ರಂದೇ ಪ್ರತಿಜ್ಞಾವಿಧಿ ಏಕೆ?: ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯು ಪ್ರತಿಬಾರಿಯಂತೆ ಈ ಬಾರಿಯೂ ಜುಲೈ 25ರಂದೇ ನಡೆಯುತ್ತಿದೆ. ನಿರ್ದಿಷ್ಟವಾಗಿ ಇದೇ ದಿನಾಂಕದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಬೇಕು ಎನ್ನುವ ಲಿಖಿತ ನಿಯಮ ಭಾರತದಲ್ಲಿ ಇಲ್ಲ. ಆದರೆ 1977ರಿಂದ ಇದೇ ದಿನಾಂಕದಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ನಡೆದಿರುವುದು ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದು ಬರುತ್ತದೆ.

ಭಾರತದ 6ನೇ ರಾಷ್ಟ್ರಪತಿಯಾಗಿ ಜುಲೈ 25, 1977ರಂದು ನೀಲಂ ಸಂಜೀವ ರೆಡ್ಡಿ ಅಧಿಕಾರ ಸ್ವೀಕರಿಸಿದರು. ನಂತರ ಈ ಪದವಿಗೆ ಬಂದ ಗಿಯಾನಿ ಜೈಲ್ ಸಿಂಗ್, ಆರ್.ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ, ಕೆ.ಆರ್.ನಾರಾಯಣನ್, ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಮತ್ತು ರಾಮನಾಥ್ ಕೋವಿಂದ್ ಅವರು ಅದೇ ದಿನಾಂಕದಂದು ಅಂದರೆ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. 1977ರಿಂದ ಈವರೆಗೆ ಜುಲೈ 25ರಂದೇ ರಾಷ್ಟ್ರಪತಿಗಳು ಪ್ರತಿಜ್ಞಾವಿಧಿ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಇಂದಿನ ಪ್ರಮಾಣವಚನ ಸಮಾರಂಭ: ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಇಂದು ಪ್ರಮಾಣವಚನ ಸಮಾರಂಭ ನಡೆದಿದೆ. 10:14ಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರು ಚುನಾಯಿತ ರಾಷ್ಟ್ರಪತಿಗೆ ಪ್ರಮಾಣ ವಚನ ಬೋಧಿಸಿದರು. ಈ ಪ್ರಕ್ರಿಯೆಯ ನಂತರ ರಾಷ್ಟ್ರಪತಿ ಪದವಿಯ ಕುರ್ಚಿಯನ್ನು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಿಟ್ಟುಕೊಡಲಿದ್ದಾರೆ.

ಇದನ್ನೂ ಓದಿ:ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ ಸ್ವೀಕಾರ

ABOUT THE AUTHOR

...view details