ಕಡಪ (ಆಂಧ್ರಪ್ರದೇಶ): ಕೊಲೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಆಂಧ್ರ ಪ್ರದೇಶದ ಇಬ್ಬರು ಕೈದಿಗಳು ದೂರ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಕೈದಿಗಳಾದ ಸುರೇಶ್ ರೆಡ್ಡಿ ಹಾಗೂ ರಮೇಶ್ ಬಾಬು ಎಂಬುವವರೇ ಜೈಲಿನಲ್ಲಿ ಇದ್ದುಕೊಂಡೇ ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾರೆ.
ಸುರೇಶ್ ರೆಡ್ಡಿ ಮತ್ತು ರಮೇಶ್ ಬಾಬು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಕಡಪ ಸೆಂಟ್ರಲ್ ಜೈಲು ಸೇರಿದ್ದರು. ಪದವೀಧರರಾಗಿದ್ದ ಈ ಇಬ್ಬರು ಕೂಡ ಜೈಲು ಪಾಲಾದ ಮೇಲೂ ಓದುವ ಇಚ್ಛೆ ಹೊಂದಿದ್ದರು. ಅಂತೆಯೇ, ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ಜೈಲಾಧಿಕಾರಿಗಳು ಅನುಮತಿಸಿದ್ದರು. ಇದೀಗ ಎರಡು ವರ್ಷಗಳ ಪಿಜಿ ಮುಗಿಸಿರುವ ಇಬ್ಬರು ಕೂಡ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿರುವುದು ಮಾತ್ರವಲ್ಲದೇ ಚಿನ್ನದ ಪದಕ ಕೂಡ ಗಿಟ್ಟಿಸಿಕೊಂಡಿದ್ದಾರೆ.
ರಮೇಶ್ ಬಾಬುಗೆ 1,000ಕ್ಕೆ 767 ಅಂಕ: ವೈಎಸ್ಆರ್ ಜಿಲ್ಲೆ ಚೆನ್ನೂರಿನ ರಮೇಶ್ ಬಾಬು 2017ರಲ್ಲಿ ಕೊಲೆ ಪ್ರಕರಣದಲ್ಲಿ ಕಡಪ ಸೆಂಟ್ರಲ್ ಜೈಲು ಸೇರಿದ್ದರು. ಪದವೀಧರನಾಗಿದ್ದ ರಮೇಶ್ ಬಾಬು ಜೈಲಿಗೆ ಬಂದ ಮೇಲೆ ಸುಮ್ಮನಿರಲು ಮನಸ್ಸಾಗದ ಕಾರಣ ಜೈಲಿನಲ್ಲಿ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಸ್ನಾತಕೋತ್ತರ ಪದವಿ ಓದು ಆರಂಭಿಸಿದ್ದರು. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ರಮೇಶ್ ಬಾಬು 1,000ಕ್ಕೆ 767 ಅಂಕ ಪಡೆದಿದ್ದಾರೆ. ಆದ್ದರಿಂದ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯ ಚಿನ್ನದ ಪದಕ ಘೋಷಿಸಿದೆ.