ಕರ್ನಾಟಕ

karnataka

ಪಂಚಭೂತಗಳಲ್ಲಿ ಲೀನರಾದ ವೀರಪುತ್ರ ರಾವತ್​: ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ, ಪುತ್ರಿಯರಿಂದ ಅಂತಿಮ ವಿಧಿವಿಧಾನ

By

Published : Dec 10, 2021, 5:55 PM IST

Updated : Dec 10, 2021, 8:52 PM IST

ಸೇನಾ ಹೆಲಿಕಾಪ್ಟರ್​​ ಪತನ ದುರ್ಘಟನೆಯಲ್ಲಿ ಹುತಾತ್ಮರಾದ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​​ ಅವರು ಸಕಲ ಸೇನಾ ಗೌರವಗಳೊಂದಿಗೆ ಪಂಚಭೂತಗಳಲ್ಲಿ ಲೀನರಾದರು.

General Bipin Rawat Cremated
General Bipin Rawat Cremated

ನವದೆಹಲಿ:ತಮಿಳುನಾಡಿನ ಕೂನೂರಿನಲ್ಲಿ ಎರಡು ದಿನಗಳ ಹಿಂದೆ ನಡೆದ ಹೆಲಿಕಾಪ್ಟರ್​ ಅಪಘಾತದಲ್ಲಿ ಮೃತಪಟ್ಟ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಅಂತ್ಯಕ್ರಿಯೆ ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ನಡೆಯಿತು. ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ದೇಶದ ಮೊದಲ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ(CDS) ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಪಂಚಭೂತಗಳಲ್ಲಿ ಲೀನರಾದರು.

ಪಂಚಭೂತಗಳಲ್ಲಿ ಲೀನರಾದ ವೀರಪುತ್ರ ರಾವತ್

ನಿನ್ನೆ ಸುಲೂರು ಏರ್​​ಬೇಸ್​​ನಿಂದ ದೆಹಲಿಯ ಪಾಲಂ ಏರ್​ಬೇಸ್​ಗೆ ಪಾರ್ಥಿವ ಶರೀರ ತೆಗೆದುಕೊಂಡು ಬರಲಾಗಿತ್ತು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​, ಸೇನಾ ಮುಖ್ಯಸ್ಥ ನರಾವಣೆ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದ್ದರು. ಇಂದು ಬೆಳಗ್ಗೆ ದೆಹಲಿಯ ರಾವತ್​​​ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದಾದ ನಂತರ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸೇನಾ ಮುಖ್ಯಸ್ಥರ ಅಂತ್ಯಕ್ರಿಯೆಗೂ ಮುಂಚಿತವಾಗಿ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ನಡೆಸಲಾಯಿತು. ಈ ವೇಳೆ, 800 ಸೇವಾ ಸಿಬ್ಬಂದಿ ಪಾಲ್ಗೊಂಡಿದ್ದರು. ಅಗಲಿದ ಸೇನಾ ಮುಖ್ಯಸ್ಥರಿಗೆ 17 ಬಾರಿ ಗನ್​ ಸೆಲ್ಯೂಟ್ ನೀಡಲಾಯಿತು.

ಪುತ್ರಿಯರಿಂದ ಅಂತಿಮ ವಿಧಿ-ವಿಧಾನ

ಹೆಲಿಕಾಪ್ಟರ್​ ದುರಂತದಲ್ಲಿ ವೀರ ಮರಣವನ್ನಪ್ಪಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್​​ ಅವರ ಪುತ್ರಿಯರಾದ ಕೃತಿಕಾ ಹಾಗೂ ತಾರಿಣಿ ಅವರಿಂದ ಅಂತಿಮ ವಿಧಿ ವಿಧಾನಗಳು ನಡೆದವು. ಜೊತೆಗೆ ಅಗಲಿದ ತಂದೆ - ತಾಯಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಂತ್ಯಕ್ರಿಯೆ ವೇಳೆ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾನೂನು ಸಚಿವ ಕಿರಣ್ ರಿಜಿಜು, ಫ್ರಾನ್ಸ್​ನ ಭಾರತದ ರಾಯಭಾರಿ ಇಮ್ಯಾನುಯೆಲ್ ಲೆನೈನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಗಂಗೆಯಲ್ಲಿ ಅಸ್ಥಿ ವಿಸರ್ಜನೆ

ವಿಧಿವಶರಾಗಿರುವ ಬಿಪಿನ್​​ ರಾವತ್​​ ಅವರ ಅಸ್ಥಿಯನ್ನ ಉತ್ತರ ಪ್ರದೇಶದ ಹರಿದ್ವಾರದಲ್ಲಿರುವ ಗಂಗೆಯಲ್ಲಿ ವಿಸರ್ಜನೆ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದು, ನಾಳೆ ಅಲ್ಲಿಗೆ ತೆರಳಿ ಅಗಲಿರುವ ವೀರಪುತ್ರನ ಅಸ್ಥಿ ವಿಸರ್ಜನೆ ಮಾಡಲಿದ್ದಾರೆ.

ಇದನ್ನೂ ಓದಿರಿ:ಅಮಾನವೀಯ ಘಟನೆ: 'ನರಿಕ್ಕುರವ' ಸಮುದಾಯದವರೆಂಬ ಕಾರಣಕ್ಕಾಗಿ ಬಸ್​​​ನಿಂದ ಕೆಳಗಿಸಿದ್ರು.. ಮುಂದಾಗಿದ್ದೇನು?

Last Updated : Dec 10, 2021, 8:52 PM IST

ABOUT THE AUTHOR

...view details