ನವದೆಹಲಿ: 2021ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಯನ್ನು ಗೋರಖ್ಪುರದ ಗೀತಾ ಪ್ರೆಸ್ಗೆ ಭಾಜನವಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಭಾನುವಾರ ತಿಳಿಸಿದೆ. ಅಹಿಂಸಾತ್ಮಕ ಮತ್ತು ಇತರ ಗಾಂಧಿವಾದಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಅದರ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಗಾಂಧಿ ಶಾಂತಿ ಪ್ರಶಸ್ತಿ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಮಹಾತ್ಮ ಗಾಂಧಿಯವರ 125ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗಾಂಧಿಯವರು ಪ್ರತಿಪಾದಿಸಿದ ಆದರ್ಶಗಳಿಗೆ ಗೌರವವಾಗಿ 1995ರಲ್ಲಿ ಕೇಂದ್ರ ಸರ್ಕಾರವು ವಾರ್ಷಿಕ ಗಾಂಧಿ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಿತ್ತು. ಈ ಪ್ರಶಸ್ತಿಯು ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲ ವ್ಯಕ್ತಿಗಳಿಗೆ ನೀಡಲಾಗುತ್ತದೆ. 1 ಕೋಟಿ ರೂಪಾಯಿ ನಗದು ಮೊತ್ತ, ಪ್ರಶಸ್ತಿಪತ್ರ, ಫಲಕ ಮತ್ತು ಸಾಂಪ್ರದಾಯಿಕ ಕರಕುಶಲ ಹಾಗೂ ಕೈಮಗ್ಗದ ವಸ್ತುವನ್ನು ಪ್ರಶಸ್ತಿ ಒಳಗೊಂಡಿದೆ.
ಪ್ರಧಾನಿ ಮೋದಿ ನೇತೃತ್ವದ ತೀರ್ಪುಗಾರರ ಸಮಿತಿಯು ಜೂನ್ 18ರಂದು ಚರ್ಚೆ ನಡೆಸಿದ ನಂತರ ಗೋರಖ್ಪುರದ ಗೀತಾ ಪ್ರೆಸ್ಅನ್ನು 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿದೆ. 1923ರಲ್ಲಿ ಸ್ಥಾಪನೆಯಾದ ಗೀತಾ ಪ್ರೆಸ್ ವಿಶ್ವದ ಅತಿದೊಡ್ಡ ಪ್ರಕಾಶಕರಲ್ಲಿ ಒಂದಾಗಿದೆ. 16.21 ಕೋಟಿ ಶ್ರೀಮದ್ ಭಗವದ್ಗೀತೆ ಸೇರಿದಂತೆ 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದೆ. ಸಂಸ್ಥೆಯು ಆದಾಯಕ್ಕಾಗಿ ತನ್ನ ಜಾಹೀರಾತನ್ನು ಎಂದಿಗೂ ಅವಲಂಬಿಸಿಲ್ಲ. ಗೀತಾ ಪ್ರೆಸ್ ತನ್ನ ಅಂಗಸಂಸ್ಥೆಗಳೊಂದಿಗೆ ಜೀವನದ ಉನ್ನತಿಗಾಗಿ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಶ್ರಮಿಸುತ್ತದೆ. ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಗಾಂಧಿ ಆದರ್ಶಗಳನ್ನು ಪ್ರಚಾರ ಮಾಡುವಲ್ಲಿ ಗೀತಾ ಪ್ರೆಸ್ ಕೊಡುಗೆಯನ್ನು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ಗೀತಾ ಮುದ್ರಣಾಲಯ ಸ್ಥಾಪನೆಯಾಗಿ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗಾಂಧಿ ಶಾಂತಿ ಪ್ರಶಸ್ತಿ ಪ್ರದಾನ ಮಾಡಿರುವುದು ಸಂಸ್ಥೆಯು ಸಮಾಜ ಸೇವೆಯಲ್ಲಿ ಮಾಡಿರುವ ಕಾರ್ಯವನ್ನು ಗುರುತಿಸಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಗಾಂಧಿ ಶಾಂತಿ ಪ್ರಶಸ್ತಿ - 2021 ಮಾನವೀಯತೆಯ ಸಾಮೂಹಿಕ ಉನ್ನತಿಗೆ ಕೊಡುಗೆ ನೀಡುವಲ್ಲಿ ಗೀತಾ ಪ್ರೆಸ್ನ ಪ್ರಮುಖ ಮತ್ತು ಸಾಟಿಯಿಲ್ಲದ ಕೊಡುಗೆಯನ್ನು ಗುರುತಿಸುತ್ತದೆ. ಇದು ಗಾಂಧಿವಾದಿ ಜೀವನವನ್ನು ನಿಜವಾದ ಅರ್ಥದಲ್ಲಿ ನಿರೂಪಿಸುತ್ತದೆ ಎಂದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.