ಕರ್ನಾಟಕ

karnataka

ಕಳ್ಳತನ ಮಾಡಲು ಗಣಿಗೆ ಇಳಿದ ನಾಲ್ವರು: ಉಸಿರುಗಟ್ಟಿ ಸಾವು

By

Published : Jan 27, 2023, 10:10 PM IST

ಆರು ವರ್ಷಗಳಿಂದ ಮುಚ್ಚಲಾಗಿದ್ದ ಗಣಿ ಪ್ರದೇಶಕ್ಕೆ ಅದಿರು ಕದಿಯಲು ಇಳಿದ ನಾಲ್ವರು ಸಾವನ್ನಪ್ಪಿದ್ದು, ಕಾವಲಿಗೆ ನಿಂತಿದ್ದವನಿಂದ ಮರಣದ ಮಾಹಿತಿ ಬಹಿರಂಗ.

four-youths-enters-coal-mine
ಕಳ್ಳತನ ಮಾಡಲು ಗಣಿಗೆ ಇಳಿದ ನಾಲ್ವರು

ಶಹದೋಲ್ (ಮಧ್ಯಪ್ರದೇಶ): ಹಣ ಆಸೆಗೆ ಬಲಿಯಾದರೆ ಮನುಷ್ಯ ಎಂತಹ ಕೃತ್ಯಗಳನ್ನು ಎಸಗಲು ಸಿದ್ಧನಿರುತ್ತಾನೆ. ಹೀಗೆ ಹಣದ ಲೋಭಕ್ಕೆ ಒಳಗಾದ ಐವರು ಕಳ್ಳತನ ಮಾಡಲು ಹೋಗಿ, ನಾಲ್ಕು ಜನ ಪ್ರಾಣಕಳೆದುಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ಜರುಗಿದೆ. ಕಳ್ಳತನಕ್ಕಾಗಿ ಕಲ್ಲಿದ್ದಲು ಗಣಿಗೆ ಹೊಕ್ಕ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಹೊರಗೆ ಕಾವಲಿಗೆ ನಿಂತಿದ್ದವನು ಬದುಕುಳಿದಿದ್ದಾನೆ.

ಲೋಹಗಳನ್ನು ಕದಿಯಲು ಮುಚ್ಚಿದ ಕಲ್ಲಿದ್ದಲು ಗಣಿಯಲ್ಲಿ ನುಸುಳಿದ್ದ ನಾಲ್ವರು ಯುವಕರು ಗುರುವಾರ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಧನಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾವಲಿಗಾಗಿ ನಿಂತಿದ್ದ ಮೃತರ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಜಾರಿ ಕೋಲ್ (30), ಕಪಿಲ್ ವಿಶ್ವಕರ್ಮ (21), ರಾಜ್ ಮಹತೋ (20) ಮತ್ತು ರಾಹುಲ್ ಕೋಲ್ (23) ಮೃತ ನಾಲ್ವರು ಎಂದು ಪೊಲೀಸರು ಗುರುತಿಸಿದ್ದಾರೆ.

ಅದಿರು ಕದಿಯಲು ಇಳಿದ ನಾಲ್ವರು ಸಾವು, ಮೃತ ದೇಹ ತೆಗೆಯಲು ನಾಲ್ಕು ಗಂಟೆ ಕಾರ್ಯಾಚರಣೆ ಮಾಡಿದ ಪೊಲೀಸರು.

ಕಬ್ಬಿಣದ ಆಸೆಗಾಗಿ ಗಣಿಹೊಕ್ಕ ನಾಲ್ವರ ದುರಂತ ಅಂತ್ಯವಾಗಿದೆ. ಸದ್ಯಕ್ಕೆ ಕಂಡು ಬಂದಿರುವ ಮಾಹಿತಿಯಂತೆ ಗಣಿ ಒಳಗೆ ಇಳಿದಾಗ ನಾಲ್ವರಿಗೆ ಉಸಿರಾಟಕ್ಕೆ ತೊಂದರೆಯಾಗಿ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಪೊಲೀಸ್​ ಕಾರ್ಯಾಚರಣೆ ಮೂಲಕ ಹೊರತೆಗೆಯಲಾದ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಯ ನಂತರ ಸಾವಿನ ನಿಜ ಕಾರಣ ತಿಳಿಯಲಿದೆ. ಪೊಲೀಸರು ಕಲೆ ಹಾಕಿರುವ ಪ್ರಾಥಮಿಕ ಮಾಹಿತಿಯಂತೆ ಕಳ್ಳತನಕ್ಕೆ ತೆರಳಿದ್ದ ಗಣಿ ಪ್ರದೇಶವನ್ನು ಆರು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಯುವಕರು ಅಲ್ಲಿಗೆ ಯಾವ ಉದ್ದೇಶದಿಂದ ಹೋಗಿದ್ದರು ಎಂಬುದರ ಬಗ್ಗೆ ಕಾವಲಿಗೆ ನಿಂತಿದ್ದ ಮೃತರ ಸ್ನೇಹಿತನ ವಿಚಾರಣೆ ನಂತರ ತಿಳಿದು ಬರಲಿದೆ.

ಪೊಲೀಸರು ಹೇಳುವುದೇನು? :ಎಸ್‌ಪಿ ಕುಮಾರ್ ಪ್ರತೀಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸೋಹಾಗ್‌ಪುರ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್ ಎಸ್‌ಇಸಿಎಲ್ ವ್ಯಾಪ್ತಿಯಲ್ಲಿರುವ ಧನ್‌ಪುರಿ ಗಣಿಯನ್ನು ಸುಮಾರು ಆರು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಗುರುವಾರ ಐದು ಯುವಕರು ಗಣಿಯಲ್ಲಿನ ಲೋಹಗಳನ್ನು ಕದಿಯಲು ಬಂದಿದ್ದಾರೆ. ಅವರಲ್ಲಿ ಒಬ್ಬ ಪ್ರವೇಶದ್ವಾರದಲ್ಲಿ ನಿಂತಿದ್ದರು. ಅವರಲ್ಲಿ ನಾಲ್ವರು ಗಣಿ ಪ್ರವೇಶಿಸಿದರು. ನಾಲ್ವರು ಯುವಕರು ಬಹಳ ಸಮಯದ ನಂತರ ಹೊರಗೆ ಬಾರದೇ ಇದ್ದಾಗ, ಕಾವಲಿಗೆ ಇದ್ದ ಸ್ನೇಹಿತ ಏನೋ ಅಹಿತಕರ ಘಟನೆ ನಡೆದಿದೆ ಎಂದು ಹೆದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿಸಿದ್ದಾರೆ.

ನಮಗೆ ರಾತ್ರಿ 12 ಗಂಟೆಗೆ ಮಾಹಿತಿ ಸಿಕ್ಕಿದೆ. ನಮ್ಮ ತಂಡವು ಸ್ಥಳಕ್ಕೆ ಧಾವಿಸಿ ಸುಮಾರು ನಾಲ್ಕು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ. ಕಾವಲಿಗೆ ನಿಂತಿದ್ದ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಸೋಹಾಗ್‌ಪುರ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್ ನಿರ್ವಹಣೆಯನ್ನು ಪ್ರಶ್ನಿಸಲಾಗುವುದು ಎಂದು ಇದೇ ವೇಳೆ ತಿಳಿಸಿದ್ದಾರೆ.

ಗಣಿ ಒಳಗೆ ನುಗ್ಗಿದಾಗ ನಾಲ್ವರು ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಶವಪರೀಕ್ಷೆ ವರದಿ ಬಂದ ನಂತರ ಅವರ ಸಾವಿಗೆ ಕಾರಣ ತಿಳಿಯಲಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಕುಸ್ತಿ ಪಂದ್ಯದಲ್ಲಿ ಎದುರಾಳಿಯ ಕುತ್ತಿಗೆ ತಿರುವಿ ಪಂದ್ಯ ಗೆದ್ದ ಎದುರಾಳಿ.. ಸ್ಥಳದಲ್ಲೇ ಕ್ರೀಡಾಪಟು ಸಾವು, ಆಯೋಜಕರು ಪರಾರಿ

ABOUT THE AUTHOR

...view details