ಕರ್ನಾಟಕ

karnataka

ಮುಳುಗುತ್ತಿದ್ದ ನಾಲ್ವರು ಯುವಕರ ರಕ್ಷಣೆಗಾಗಿ ಈಜುಗಾರರೊಂದಿಗೆ ಸಮುದ್ರಕ್ಕೆ ಹಾರಿದ ಶಾಸಕ!

By

Published : Jun 1, 2023, 7:02 PM IST

ಗುಜರಾತ್​ನ ಅಮ್ರೇಲಿ ಜಿಲ್ಲೆಯ ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕರ ರಕ್ಷಣೆಗಾಗಿ ಶಾಸಕ ಹೀರಾ ಸೋಲಂಕಿ ಸಮುದ್ರಕ್ಕೆ ಹಾರಿದ ಸಾಹಸ ಮೆರೆದಿದ್ದಾರೆ.

Four youths drowned in Rajula sea in Amreli MLA Heera Solanki joined the rescue team
ಮುಳುಗುತ್ತಿದ್ದ ನಾಲ್ವರು ಯುವಕರ ರಕ್ಷಣೆಗಾಗಿ ಈಜುಗಾರರೊಂದಿಗೆ ಸಮುದ್ರಕ್ಕೆ ಹಾರಿದ ಶಾಸಕ

ಅಮ್ರೇಲಿ (ಗುಜರಾತ್​):ಸಮುದ್ರದಲ್ಲಿ ಮುಳುಗುತ್ತಿದ್ದ ನಾಲ್ವರು ಯುವಕರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರಕ್ಷಣಾ ತಂಡದೊಂದಿಗೆ ಶಾಸಕರೊಬ್ಬರು ಸಹ ಸಮುದ್ರಕ್ಕೆ ಹಾರಿದ ಸಾಹಸ ಮೆರೆದ ಘಟನೆ ಗುಜರಾತ್​ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ. ಇದರಲ್ಲಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರೂ ಓರ್ವ ಸಮುದ್ರದ ಪಾಲಾಗಿ ಪ್ರಾಣ ಕಳೆದುಕೊಂಡಿದ್ದಾನೆ.

ಅಮ್ರೇಲಿ ಜಿಲ್ಲೆಯ ಪಟ್ವಾ ಗ್ರಾಮದ ಬಳಿ ರಾಜುಲಾ ಸಮುದ್ರದಲ್ಲಿ ಸ್ನಾನಕ್ಕೆಂದು ಜೀವನ್ ಗುಜ್ರಿಯಾ, ಕಲ್ಪೇಶ್ ಶಿಯಾಲ್, ವಿಜಯ್ ಗುಜ್ರಿಯಾ ಮತ್ತು ನಿಕುಲ್ ಗುಜ್ರಿಯಾ ಎಂಬ ನಾಲ್ವರು ಯುವಕರು ಇಳಿದಿದ್ದರು. ಈ ವೇಳೆ, ಸಮುದ್ರದ ಸೆಳೆತ ಹೆಚ್ಚಾಗಿ ಎಲ್ಲರೂ ಮುಳುಗಲು ಪ್ರಾರಂಭಿಸಿದ್ದರು. ಅಂತೆಯೇ, ಈ ಯುವಕರು ಸಹಾಯಕ್ಕಾಗಿ ಕಿರುಚಲು ಶುರು ಸಹ ಮಾಡಿದ್ದರು. ಇದನ್ನು ಸಮುದ್ರ ತೀರದಲ್ಲಿದ್ದ ಜನರ ಗಮನಿಸಿ ರಕ್ಷಣೆ ಧಾವಿಸಿದ್ದರು.

ಇದೇ ವೇಳೆ, ಸುದ್ದಿ ತಿಳಿದ ಶಾಸಕ ಹೀರಾ ಸೋಲಂಕಿ ತಕ್ಷಣವೇ ಸಮುದ್ರದ ತೀರಕ್ಕೆ ದೌಡಾಯಿಸಿದ್ದಾರೆ. ಜೊತೆಗೆ ಸುತ್ತಮುತ್ತಲಿನ ಗ್ರಾಮಗಳ ಜನರು ಕೂಡ ಕಡಲತೀರಕ್ಕೆ ಬಂದಿದ್ದಾರೆ. ಆಗ ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕ ರಕ್ಷಣೆಗಾಗಿ ಇತರ ಈಜುಗಾರರೊಂದಿಗೆ ಶಾಸಕ ಹೀರಾ ಸೋಲಂಕಿ ಕೂಡ ಸಮುದ್ರಕ್ಕೆ ಹಾರಿದ್ದಾರೆ. ನಾಪತ್ತೆಯಾದವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿ ಮೂವರನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ.

ಆದರೆ, ದುರಾದೃಷ್ಟವಶಾತ್ ಜೀವನ್ ಗುಜ್ರಿಯಾ ಎಂಬ ಯುವಕನನ್ನು ಜೀವಂತವಾಗಿ ರಕ್ಷಿಸಲು ಸಾಧ್ಯವಾಗಿಲ್ಲ. ಎರಡು ಗಂಟೆಗಳ ಹುಡುಕಾಟದ ಬಳಿಕ ಜೀವನ್ ಗುಜ್ರಿಯಾ ಶವ ಪತ್ತೆಯಾಗಿದೆ. ಈ ಬಗ್ಗೆ ಹೀರಾ ಸೋಲಂಕಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದು, ಮೃತನ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ನಂದಿ ಬೆಟ್ಟಕ್ಕೆ ಜಾಲಿ ರೈಡ್ ಬಂದಿದ್ದ ನಾಲ್ವರು ಯುವಕರು ಕೆರೆಯಲ್ಲಿ ಮುಳುಗಿ ಸಾವು

ಉತ್ತರ ಪ್ರದೇಶದ ಘಟನೆ ನೆನಪು:ಇತ್ತೀಚೆಗೆ ಉತ್ತರ ಪ್ರದೇಶದ ಬುದೌನ್ ​​ಜಿಲ್ಲೆಯಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಮೂವರು ಎಂಬಿಬಿಎಸ್​​ ವಿದ್ಯಾರ್ಥಿಗಳು ಮೃತಪಟ್ಟಿದ್ದ ಘಟನೆ ನಡೆದಿತ್ತು. ಸರ್ಕಾರಿ ವೈದ್ಯಕೀಯ ಕಾಲೇಜಿನ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಮೀಪದ ಕಛ್ಲಾ ಗಂಗಾ ಘಾಟ್​ಗೆ ಬಂದಿದ್ದರು. ಆದರೆ, ಐವರು ಸಹ ಗಂಗಾ ಸ್ನಾನದ ಮಾಡಲೆಂದು ಆಳದ ನೀರಿಗೆ ಇಳಿದು ನಾಪತ್ತೆಯಾಗಿದ್ದರು.

ಆಗ ತಕ್ಷಣವೇ ಸ್ಥಳೀಯ ಈಜುಗಾರರು ರಾಜಸ್ಥಾನದ ಭರತ್‌ಪುರದ ನಿವಾಸಿ ಅಂಕುಶ್ ಗೆಹ್ಲೋಟ್ ಮತ್ತು ಗೋರಖ್‌ಪುರದ ಪ್ರಮೋದ್ ಯಾದವ್​ ಎಂಬ ಯುವಕರನ್ನು ರಕ್ಷಣೆ ಮಾಡಿದ್ದರು. ಮತ್ತೊಂದೆಡೆ, ಸುಮಾರು ಎಂಟು ಗಂಟೆ ಕಾಲಗಳ ಈ ಶೋಧ ಕಾರ್ಯಾಚರಣೆ ಬಳಿಕ ಜೈ ಮೌರ್ಯ, ಪವನ್ ಯಾದವ್​ ಮತ್ತು ನವೀನ್ ಸೆಂಗರ್ ಮೃತದೇಹಗಳು ಪತ್ತೆಯಾಗಿದ್ದವು.

ಐವರು ವಿದ್ಯಾರ್ಥಿಗಳು ಸಹ 2019ರ ಎಂಬಿಬಿಎಸ್​ ಬ್ಯಾಚ್‌ನವರಾಗಿದ್ದು, ಮೂರನೇ ವರ್ಷದಲ್ಲಿ ಓದುತ್ತಿದ್ದರು. ಆದರೆ, ಎಲ್ಲರೂ ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ನೀಡದೇ ನದಿಯಲ್ಲಿ ಸ್ನಾನ ಮಾಡಲು ಬಂದಿದ್ದರು. ಈ ವೇಳೆ ಮೊದಲಿಗೆ ಒಬ್ಬ ಯುವಕ ಮಾತ್ರ ನೀರಿನಲ್ಲಿ ಮುಳುಗಿದ್ದ. ಇದರ ನಂತರ ಆತನನ್ನು ರಕ್ಷಣೆ ಮಾಡಲೆಂದು ಇತರ ನಾಲ್ವರು ಹೋಗಿದ್ದರು. ಆದರೆ, ಎಲ್ಲರೂ ಸಹ ನೀರಿನಲ್ಲಿ ಮುಳುಗಲು ಶುರು ಮಾಡಿದ್ದಾಗ ಇಬ್ಬರನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿತ್ತು.

ಇದನ್ನೂ ಓದಿ:ಗಂಗಾ ನದಿಯಲ್ಲಿ ಮುಳುಗಿದ ಐವರು ಎಂಬಿಬಿಎಸ್​​ ವಿದ್ಯಾರ್ಥಿಗಳು: ಇಬ್ಬರ ರಕ್ಷಣೆ, ಮೂವರ ಶವಗಳು ಪತ್ತೆ

ABOUT THE AUTHOR

...view details