ಕರ್ನಾಟಕ

karnataka

ETV Bharat / bharat

ಮಾಜಿ ಕೇಂದ್ರ ಸಚಿವ, 7 ಸಲ MP, ಹಿರಿಯ ಸಮಾಜವಾದಿ ನಾಯಕ ಶರದ್ ಯಾದವ್ (75) ಇನ್ನಿಲ್ಲ

ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯಾದವ್ 75ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದು, ತಂದೆಯ ನಿಧನದ ಸುದ್ದಿಯನ್ನು ಪುತ್ರಿ ಖಚಿತಪಡಿಸಿದ್ದಾರೆ.

By

Published : Jan 13, 2023, 7:19 AM IST

Updated : Jan 13, 2023, 7:51 AM IST

sharad yadav
ಶರದ್ ಯಾದವ್

ನವದೆಹಲಿ: ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಮತ್ತು ಜೆಡಿಯು ಮಾಜಿ ಅಧ್ಯಕ್ಷ ಶರದ್ ಯಾದವ್ (75) ಗುರುವಾರ ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಹಿರಿಯ ನಾಯಕನ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಂದೆಯ ಸಾವಿನ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಗಳು ಸುಭಾಷಿಣಿ ಶರದ್‌ ಯಾದವ್‌ ಟ್ವಿಟರ್‌ ಪೋಸ್ಟ್​ ಮಾಡಿದ್ದಾರೆ. 'ನನ್ನ ತಂದೆ ಇನ್ನಿಲ್ಲ' ಎಂದು ಭಾವುಕರಾಗಿ ಟ್ವೀಟ್​ ಮಾಡುವ ಮೂಲಕ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. "ಯಾದವ್ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ತುರ್ತು ವಿಭಾಗಕ್ಕೆ ಕರೆತರಲಾಯಿತು. ಪರೀಕ್ಷೆ ಬಳಿಕ ಅವರ ರಕ್ತದೊತ್ತಡ ಮತ್ತು ನಾಡಿಮಿಡಿತ ನಿಂತಿರುವುದು ತಿಳಿದುಬಂತು. ಎಷ್ಟೇ ಪ್ರಯತ್ನ ಮಾಡಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾತ್ರಿ 10.19 ಕ್ಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು" ಎಂದು ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಹಿರಿಯ ಜೆಡಿಯು ನಾಯಕ ದೀರ್ಘಕಾಲದವರೆಗೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಗುರುವಾರ ರಾತ್ರಿ ಅವರ ಛತ್ತರ್‌ಪುರ ನಿವಾಸದಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಯಾದವ್ ಅವರ ಸಂಬಂಧಿಯೊಬ್ಬರು ಮಾಹಿತಿ ನೀಡಿದರು.

ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ: ಮಾಜಿ ಕೇಂದ್ರ ಸಚಿವ ಯಾದವ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. "ಶ್ರೀ ಶರದ್ ಯಾದವ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ನೋವಾಗಿದೆ. ಸುದೀರ್ಘ ವರ್ಷಗಳ ಕಾಲ ಅವರು ಸಾರ್ವಜನಿಕ ಜೀವನದಲ್ಲಿ ಸಂಸದರಾಗಿ ಮತ್ತು ಸಚಿವರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಡಾ. ಲೋಹಿಯಾ ಅವರ ಆದರ್ಶಗಳಿಂದ ಹೆಚ್ಚು ಪ್ರೇರಿತರಾಗಿದ್ದರು. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ಬರಿಸುವ ಶಕ್ತಿಯನ್ನು ದೇವರು ನೀಡಲಿ, ಯಾದವ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್​ ನಾಯಕರಿಂದ​ ಸಂತಾಪ:ಶರದ್‌ ಯಾದವ್ ಅವರ ನಿಧನವು ಭಾರತದ ರಾಜಕೀಯಕ್ಕೆ ತುಂಬಲಾರದ ನಷ್ಟ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಂತಾಪ ಸೂಚಿಸಿದ್ದು, ಗುಣಮಟ್ಟದ ರಾಜಕಾರಣವನ್ನು ಅವರು ಬಲಪಡಿಸಿದ್ದರು ಎಂದಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಯಾದವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ವಿರುದ್ಧ ಸಮರ ಸಾರಿದ ಕೆಸಿಆರ್​​​: ಎನ್​ಡಿಎ ವಿರೋಧಿಗಳು ಒಗ್ಗೂಡಲು ಕರೆ

ಶರದ್‌ ಯಾದವ್ ರಾಜಕೀಯ ಹಾದಿ: 1947ರ ಜುಲೈ 1ರಂದು ಮಧ್ಯಪ್ರದೇಶದ ಹೋಶಂಗಾಬಾದ್ ಬಳಿಯ ಒಂದು ಸಣ್ಣ ಹಳ್ಳಿಯಲ್ಲಿ ರೈತರ ಕುಟುಂಬದಲ್ಲಿ ಜನಿಸಿದ ಶರದ್‌ ಯಾದವ್, ಜಬಲ್ಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಜಬಲ್ಪುರದ ರಾಬರ್ಟ್ಸನ್ ಮಾಡೆಲ್ ಸೈನ್ಸ್ ಕಾಲೇಜಿನಲ್ಲಿ ಪದವಿ ಗಳಿಸಿದರು. ನಂತರ ಯುವ ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡರು. 1974 ರಲ್ಲಿ ಜಬಲ್ಪುರದಿಂದ ಕಾಂಗ್ರೆಸ್ ವಿರುದ್ಧ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಯ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ವಿರುದ್ಧ ರಾಜಕೀಯ ಹೋರಾಟವನ್ನು ಪ್ರಾರಂಭಿಸಿದರು.

2003ರಲ್ಲಿ ಜೆಡಿಯು ಸ್ಥಾಪನೆಯಾದಾಗ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಲೋಕಸಭೆಗೆ 7 ಬಾರಿ ಹಾಗೂ ರಾಜ್ಯಸಭೆಗೆ 3 ಬಾರಿ ಜೆಡಿಯು ಮೂಲಕ ಆಯ್ಕೆಯಾಗಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರನ್ನು ಪಕ್ಷದ ನಾಯಕತ್ವದ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಅನಂತರ ಅವರು 2018ರಲ್ಲಿ ನೂತನ ಪಕ್ಷ ಲೋಕತಾಂತ್ರಿಕ್ ಜನತಾ ದಳ (ಎಲ್‌ಜೆಡಿ) ಸ್ಥಾಪಿಸಿದ್ದರು. 2020ರ ಮಾರ್ಚ್‌ನಲ್ಲಿ ಎಲ್‌ಜೆಡಿ ಪಕ್ಷವನ್ನು ಲಾಲೂ ಯಾದವ್‌ ಅವರ ಆರ್‌ಜೆಡಿ ಪಕ್ಷದೊಂದಿಗೆ ವಿಲೀನಗೊಳಿಸಿದರು. ಶರದ್ ಯಾದವ್ ಮಧ್ಯಪ್ರದೇಶದಲ್ಲಿ ಹುಟ್ಟಿ ಅಲ್ಲಿಂದ ರಾಜಕೀಯ ಜೀವನ ಆರಂಭಿಸಿದರೂ ಬಿಹಾರ ಅವರ ಕರ್ಮಭೂಮಿಯಾಗಿತ್ತು.

ಇದನ್ನೂ ಓದಿ:ಮಂಗಳೂರು: ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ನಿಧನ

Last Updated : Jan 13, 2023, 7:51 AM IST

ABOUT THE AUTHOR

...view details