ಕರ್ನಾಟಕ

karnataka

ಭಯೋತ್ಪಾದಕರಿಂದ ಬೆದರಿಕೆ: ಕಾಶ್ಮೀರದಲ್ಲಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ ಪತ್ರಕರ್ತರು

By

Published : Nov 16, 2022, 12:50 PM IST

ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದಕರಿಂದ ಬೆದರಿಕೆ. ಕಾಶ್ಮೀರದ ಸ್ಥಳೀಯ ಪತ್ರಿಕೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಐವರು ಪತ್ರಕರ್ತರಿಂದ ಕೆಲಸಕ್ಕೆ ರಾಜೀನಾಮೆ.

Representative image
ಸಾಂದರ್ಭಿಕ ಚಿತ್ರ

ಶ್ರೀನಗರ: ಕಾಶ್ಮೀರದ ಸ್ಥಳೀಯ ಪತ್ರಿಕೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಐವರು ಪತ್ರಕರ್ತರು ತಮ್ಮ ನೌಕರಿಗೆ ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಭಯೋತ್ಪಾದಕರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ 12 ಮಂದಿ ಪತ್ರಕರ್ತರ ಪಟ್ಟಿಯನ್ನು ಹಾಕಿದ್ದರು. ಅವರು ಭದ್ರತಾ ಪಡೆಗಳ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪಟ್ಟಿಯಲ್ಲಿರುವ ಹೆಸರುಗಳು ಸ್ಥಳೀಯ ಪತ್ರಿಕೆಗಳ ಇಬ್ಬರು ಸಂಪಾದಕರನ್ನು ಒಳಗೊಂಡಿವೆ. ಮಂಗಳವಾರ ರಾಜೀನಾಮೆ ನೀಡಿದ ಪತ್ರಕರ್ತರ ಪೈಕಿ ಮೂವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿಯೇ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ.

ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಈ ಬೆದರಿಕೆಗಳ ಹಿಂದೆ ಇದೆ. ಬೆದರಿಕೆಗಳ ವಿಷಯಗಳು ಭಯೋತ್ಪಾದಕರು ಮತ್ತು ದೇಶ ವಿರೋಧಿ ಅಂಶಗಳ ಉದ್ದೇಶವನ್ನು ಬಿಂಬಿಸುತ್ತವೆ. ಸಾರ್ವಜನಿಕವಾಗಿ ಭ್ರಷ್ಟರೆಂದು ಕರೆದು ನೇರವಾಗಿ ಬೆದರಿಕೆ ಹಾಕುವ ಮೂಲಕ ಜನರ, ಅದರಲ್ಲೂ ವಿಶೇಷವಾಗಿ ಮಾಧ್ಯಮದವರ ಪ್ರಾಣಕ್ಕೆ ಅಪಾಯ ತಂದೊಡ್ಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಸುಮಾರು 10ಕ್ಕೂ ಅಧಿಕ ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ದೇಶದ ಗಡಿಯೊಳಗೆ ನುಗ್ಗಲು 135 ಉಗ್ರರ ಸಂಚು.. ಗಣರಾಜ್ಯೋತ್ಸವ ಹಿನ್ನೆಲೆ ಬೆದರಿಕೆ ಕರೆ, ಸೇನೆ ಹೈಅಲರ್ಟ್​

ABOUT THE AUTHOR

...view details