ಉತ್ತರಕಾಶಿ (ಉತ್ತರಾಖಂಡ) :ಬ್ಮಾಹ್ಮಣರಿಗೆ ಹೆಚ್ಚಾಗಿ ಸೀಮಿತವಾಗಿದ್ದ ಇಲ್ಲಿನ ವಿಶ್ವನಾಥ ಸಂಸ್ಕೃತ ಕಾಲೇಜಿನಲ್ಲಿ ಹೊಸ ಮನ್ವಂತರ ಶುರುವಾಗಿದೆ. 70 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ವಿವಿಯಲ್ಲಿ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಯ (ಎಸ್ಸಿ) ವಿದ್ಯಾರ್ಥಿಯೊಬ್ಬ ಪ್ರವೇಶ ಪಡೆದಿದ್ದಲ್ಲದೇ, 2 ದಶಕಗಳ ಬಳಿಕ ವಿದ್ಯಾರ್ಥಿನಿಯರೂ ಸೇರಿದ್ದಾರೆ. ಈ ಮೂಲಕ ಕಾಲೇಜು ಸರ್ವಜನಾಂಗಕ್ಕೆ ತನ್ನನ್ನು ತೆರೆದುಕೊಂಡಿದೆ. ಇವರಿಗೆ ವೇದಾಧ್ಯಯನ, ಜ್ಯೋತಿಷ್ಯವನ್ನು ಬೋಧಿಸಲಾಗುತ್ತದೆ.
ಈ ಹಿಂದೆ ಮುಸ್ಲಿಂ ವಿದ್ಯಾರ್ಥಿಗಳು ಕೂಡ ಇಲ್ಲಿ ವೇದಾಧ್ಯಯನ ಮಾಡಿದ್ದಾರೆ. ಇದೀಗ ಪ್ರಪ್ರಥಮ ಬಾರಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿ ಪ್ರವೇಶ ಪಡೆದಿದ್ದಾನೆ. ಜೊತೆಗೆ ವಿದ್ಯಾರ್ಥಿನಿಯರೂ ಮರಳಿದ್ದು, ಕಾಲೇಜಿನಲ್ಲಿ ಈಗ ಯಾವುದೇ ಜಾತಿ ಮತ್ತು ಧರ್ಮದ ವಿದ್ಯಾರ್ಥಿಗಳು ಸಂಸ್ಕೃತ ಶಿಕ್ಷಣವನ್ನು ಪಡೆಯಬಹುದು.
ಕಾಲೇಜಿನ ಇತಿಹಾಸ:ಉತ್ತರಕಾಶಿ ಜಿಲ್ಲಾ ಕೇಂದ್ರದಲ್ಲಿರುವ ಶ್ರೀ ವಿಶ್ವನಾಥ ಸಂಸ್ಕೃತ ಕಾಲೇಜನ್ನು 1953 ರಲ್ಲಿ ಬ್ರಹ್ಮಸ್ವರೂಪಾನಂದರು 8 ಬ್ರಾಹ್ಮಣ ವಿದ್ಯಾರ್ಥಿಗಳೊಂದಿಗೆ ಸ್ಥಾಪಿಸಿದ್ದರು. ಇಲ್ಲಿ ಮೊದಲು ಬ್ರಾಹ್ಮಣ ಸಮುದಾಯದ ಮಕ್ಕಳಿಗೆ ಮಾತ್ರ ಸಂಸ್ಕೃತ ಶಿಕ್ಷಣವನ್ನು ಹೇಳಿಕೊಡಲಾಗುತ್ತಿತ್ತು. ಕಾಲಾನಂತರದಲ್ಲಿ ಹೆಣ್ಣು ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು. ಇಲ್ಲಿ 6 ನೇ ತರಗತಿಯಿಂದ ಶಿಕ್ಷಣ ಲಭ್ಯವಿದೆ. ಶಾಸ್ತ್ರಿ ಮತ್ತು ಆಚಾರ್ಯ ಎಂಬ ಎರಡು ವಿಭಾಗಗಳಲ್ಲಿ ಶಿಕ್ಷಣ ಬೋಧಿಸಲಾಗುತ್ತದೆ. ಸದ್ಯ ಸಂಸ್ಕೃತ ಕಾಲೇಜಿನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಎಸ್ಸಿ ವಿದ್ಯಾರ್ಥಿ ಪ್ರವೇಶ:ಸಮಾಜದ ಕೆಳವರ್ಗ ಎಂದೇ ಗುರುತಿಸಲಾಗುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬ ಸಂಸ್ಕೃತ ಅಧ್ಯಯನಕ್ಕೆ ಪ್ರವೇಶ ಪಡೆದಿದ್ದು, ಕಾಲೇಜು ಇತಿಹಾಸದಲ್ಲಿ ಇದೇ ಮೊದಲಾಗಿದೆ. ಇದಲ್ಲದೇ, 2 ದಶಕಗಳ ಬಳಿಕ 7 ವಿದ್ಯಾರ್ಥಿನಿಯರು ಕೂಡ ಮರಳಿದ್ದಾರೆ. ಶಾಸ್ತ್ರಿ ವಿಭಾಗದ ಪ್ರಥಮ ವರ್ಷದಲ್ಲಿ ಮೂವರು, ದ್ವಿತೀಯ ವರ್ಷಕ್ಕೆ ಇಬ್ಬರು ಸೇರಿಕೊಂಡಿದ್ದಾರೆ. ಆಚಾರ್ಯ ವಿಭಾಗದಲ್ಲಿ ಇಬ್ಬರಿದ್ದಾರೆ.