ಕರ್ನಾಟಕ

karnataka

ಒಂದು ದೇಶ ಒಂದು ಚುನಾವಣೆ: ಸೆಪ್ಟೆಂಬರ್​ 23 ರಂದು ಅಧ್ಯಕ್ಷ ಕೋವಿಂದ್​ ನೇತೃತ್ವದ ಸಮಿತಿಯ ಮೊದಲ ಸಭೆ

By ETV Bharat Karnataka Team

Published : Sep 16, 2023, 4:21 PM IST

ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ ಅಧ್ಯಯನಕ್ಕೆ ರಚಿಸಲಾಗಿರುವ ಸಮಿತಿಯ ಮೊದಲ ಅಧಿಕೃತ ಸಭೆ ಸೆಪ್ಟೆಂಬರ್​ 23 ರಂದು ನಡೆಯಲಿದೆ.

ಅಧ್ಯಕ್ಷ ಕೋವಿಂದ್​ ನೇತೃತ್ವದ ಸಮಿತಿಯ ಮೊದಲ ಸಭೆ
ಅಧ್ಯಕ್ಷ ಕೋವಿಂದ್​ ನೇತೃತ್ವದ ಸಮಿತಿಯ ಮೊದಲ ಸಭೆ

ನವದೆಹಲಿ:ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣಾ ಸಮಿತಿ ರಚಿಸಲಾಗಿದ್ದು, ಅದರ ಅಧಿಕೃತ ಮೊದಲ ಸಭೆ ಸೆಪ್ಟೆಂಬರ್ 23 ರಂದು ನಡೆಯಲಿದೆ.

ಈ ಬಗ್ಗೆ ಸಮಿತಿಯ ಅಧ್ಯಕ್ಷ ರಾಮನಾಥ್ ಕೋವಿಂದ್ ಅವರು ಶನಿವಾರ ಮಾಹಿತಿ ನೀಡಿದ್ದು, ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಮುಗಿದ ಒಂದು ದಿನದ ನಂತರ ಸಭೆ ನಡೆಯಲಿದೆ. ಈಗಾಗಲೇ ಕಾನೂನು ಇಲಾಖೆ ಅಧಿಕಾರಿಗಳು ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಸೆಪ್ಟೆಂಬರ್​ 23 ರಂದು ಮೊದಲ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಸಮಿತಿ ಹೀಗಿದೆ:'ಒಂದು ರಾಷ್ಟ್ರ, ಒಂದು ಚುನಾವಣೆ' ಪರಿಕಲ್ಪನೆಯು ದೇಶಕ್ಕೆ ಸಾಧುವೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ 8 ಸದಸ್ಯರ ಸಮಿತಿಯನ್ನು ರಚಿಸಿದೆ. ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು ಸಮಿತಿಯ ಅಧ್ಯಕ್ಷರಾಗಿದ್ದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಮಾಜಿ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್, 15 ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಅವರು ಸದಸ್ಯರಾಗಿದ್ದಾರೆ.

ಕಾಂಗ್ರೆಸ್​ ನಿರಾಕರಣೆ:ಆದರೆ, ಲೋಕಸಭೆಯ ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌಧರಿ ಅವರು ಸಮಿತಿಯ ಸದಸ್ಯರಾಗಿರಲು ನಿರಾಕರಿಸಿದ್ದಾರೆ. ಈ ಬಗ್ಗೆ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರೂ ಆಗಿರುವ ಅಧಿರ್ ರಂಜನ್‌ ಚೌಧರಿ, ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಘೋಷಿಸಿರುವ ಉನ್ನತ ಮಟ್ಟದ ಸಮಿತಿಯಲ್ಲಿ ನಾನು ಸದಸ್ಯನಾಗಿರಲು ಬಯಸುವುದಿಲ್ಲ. ಇದೆಲ್ಲವೂ ದೊಡ್ಡ ವಂಚನೆ ಎಂದು ನಾನು ಭಾವಿಸುತ್ತೇನೆ. ಸಮಿತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೇರಿಸದೇ ಇರುವುದು ದೊಡ್ಡ ಅವಮಾನ. ಇದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉದ್ದೇಶಪೂರ್ವಕವಾಗಿ ಮಾಡಿದ ಅವಮಾನ. ಹೀಗಾಗಿ, ನಾನು ಸಮಿತಿಯಲ್ಲಿ ಇರುವುದಿಲ್ಲ ಎಂದು ಉಲ್ಲೇಖಿಸಿದ್ದರು.

ಇದಾದ ಬಳಿಕ ಕೇಂದ್ರ ಸರ್ಕಾರ 8 ಜನರ ಸಮಿತಿಯ ಸದಸ್ಯರನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ಈ ಸಮಿತಿಯು ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ, ವಿವಿಧ ರಾಜ್ಯಗಳ ವಿಧಾನಸಭೆಗಳು, ಪುರಸಭೆಗಳು, ಪಂಚಾಯತ್‌ಗಳಿಗೆ ಚುನಾವಣೆ ನಡೆಸುವ ಬಗ್ಗೆ ಅಧ್ಯಯನ ನಡೆಸಲಿದೆ. ಸಮಿತಿಯು ಅತಂತ್ರ ಫಲಿತಾಂಶ, ಅವಿಶ್ವಾಸ ನಿರ್ಣಯ, ಪಕ್ಷಾಂತರ ಸೇರಿದಂತೆ ಏಕಕಾಲದ ಚುನಾವಣೆಗಳಿಗೆ ಸಂಬಂಧಿಸಿದ ಸಂಭಾವ್ಯ ಸಮಸ್ಯೆ ಮತ್ತು ಅವುಗಳಿಗೆ ಪರಿಹಾರಗಳನ್ನು ವಿಶ್ಲೇಷಿಸಿ, ಶಿಫಾರಸು ಮಾಡಬೇಕು. (ಐಎಎನ್​ಎಸ್​)

ಇದನ್ನೂ ಓದಿ:'ದೇಶದ ಹೆಸರು ಬದಲಾವಣೆ.. ಒಂದು ರಾಷ್ಟ್ರ, ಒಂದು ಚುನಾವಣೆಯ ಮಸೂದೆ ತಂದರೆ ರಾಜ್ಯಸಭೆಯಲ್ಲಿ ತಡೆ'

ABOUT THE AUTHOR

...view details