ಔರಂಗಾಬಾದ್(ಮಹಾರಾಷ್ಟ್ರ):ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಗಡುವು ಹಾಕಿದ್ದಲ್ಲದೇ, ಪ್ರಚೋದನಾತ್ಮಕ ಭಾಷಣ ಮಾಡಿದ್ದ ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ವಿರುದ್ಧ ಔರಂಗಾಬಾದ್ನ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರ ಸಂಸ್ಥಾಪನಾ ದಿನದಂದು ಔರಂಗಾಬಾದ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪೊಲೀಸರು ವಿಧಿಸಿದ್ದ 16 ಷರತ್ತುಗಳ ಪೈಕಿ 12 ಷರತ್ತು ಉಲ್ಲಂಘನೆ ಮಾಡಿದ್ದಕ್ಕಾಗಿ ರಾಜ್ ಠಾಕ್ರೆ ಮತ್ತು ಸಂಘಟಿಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಎಂಎನ್ಎಸ್ ಕಾರ್ಯಕರ್ತರಿಗೆ ನೋಟಿಸ್: ಔರಂಗಾಬಾದ್ನಲ್ಲಿ ರಾಜ್ ಠಾಕ್ರೆ ಭಾಷಣದ ನಂತರ ಎಂಎನ್ಎಸ್ ಕಾರ್ಯಕರ್ತರಿಗೆ ಮುಂಬೈ ಪೊಲೀಸರು ನೋಟಿಸ್ ಸಹ ನೀಡಲು ಪ್ರಾರಂಭಿಸಿದ್ದಾರೆ. ಮೇ. 4ರ ನಂತರ ರಾಜ್ಯದ ಮಸೀದಿಗಳ ಮುಂದೆ ಹನುಮಾನ್ ಚಾಲೀಸ್ ನುಡಿಸಲಾಗುವುದು ಎಂದು ಈಗಾಗಲೇ ಠಾಕ್ರೆ ಘೋಷಣೆ ಮಾಡಿರುವ ಕಾರಣ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನೋಟಿಸ್ ಜಾರಿ ಮಾಡ್ತಿದ್ದಾರೆ.
ಇದನ್ನೂ ಓದಿ:ರಾಜ್ ಠಾಕ್ರೆ ಪ್ರಚೋದನಾತ್ಮಕ ಭಾಷಣ ಆರೋಪ: ಕ್ರಮದ ಸುಳಿವು ನೀಡಿದ ಮಹಾರಾಷ್ಟ್ರ ಗೃಹ ಸಚಿವ
ಎಂಎನ್ಎಸ್ ಜೊತೆಗೆ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರಿಗೆ ನೋಟಿಸ್ ನೀಡಲಾಗಿದ್ದು, ಮೇ 2ರಿಂದ ಮೇಲೆ 17ರವರೆಗೆ ಮುಂಬೈ ತೊರೆಯುವಂತೆ ಸೂಚನೆ ನೀಡಲಾಗಿದೆ. ರಾಜ್ ಠಾಕ್ರೆ ಭಾಷಣದ ವೇಳೆ 'ರಾಜ್ಯದಲ್ಲಿ ಜಾತಿ ರಾಜಕಾರಣ ನಡೆಯುತ್ತಿದ್ದು, ಸರ್ಕಾರಕ್ಕೆ 'ಹಿಂದೂ' ಪದದ ಬಗ್ಗೆಯೇ ಅಲರ್ಜಿ ಇದೆ ಎಂದು ಹೇಳಿದ್ದರು.
ಇವರ ಭಾಷಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ, ರಾಜ್ ಠಾಕ್ರೆ ಮಾಡಿದ ಭಾಷಣವು ಸಮಾಜವನ್ನು ವಿಘಟಿಸುವ ಗುರಿ ಹೊಂದಿದೆ. ಅಲ್ಲದೇ, ಶಿವಸೇನೆ ಮತ್ತು ಕಾಂಗ್ರೆಸ್ನೊಂದಿಗೆ ಅಧಿಕಾರ ಹಂಚಿಕೊಂಡಿರುವ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಮೇಲೆ ದಾಳಿ ಮಾಡುವುದೇ ಇದರ ಉದ್ದೇಶವಾಗಿತ್ತು ಎಂದು ಆರೋಪಿಸಿದ್ದರು. ಜೊತೆಗೆ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂನ್ ತಿಂಗಳಲ್ಲಿ ರಾಜ್ ಠಾಕ್ರೆ ಅಯೋಧ್ಯೆ ಪ್ರವಾಸ: ಕುಟುಂಬ ಸಮೇತವಾಗಿ ಜೂನ್ 4ರಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅಯೋಧ್ಯೆ ಪ್ರವಾಸ ಕೈಗೊಳ್ಳಲಿದ್ದು, ಮಹಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನ ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ.