ಕರ್ನಾಟಕ

karnataka

By ETV Bharat Karnataka Team

Published : Oct 21, 2023, 7:44 PM IST

ETV Bharat / bharat

Explained: 'ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ': ಕೆನಡಾದ ರಾಜತಾಂತ್ರಿಕರನ್ನು ಹೊರಗಿಡಲು ಭಾರತ ಬಯಸಿದ್ದೇಕೆ?

ಭಾರತವು ಕೆನಡಾದಲ್ಲಿ ಕೇವಲ 21 ಮಾನ್ಯತೆ ಪಡೆದ ರಾಜತಾಂತ್ರಿಕರನ್ನು ಹೊಂದಿದ್ದರೆ, ಕೆನಡಾವು ಭಾರತದಲ್ಲಿ 62 ಮಂದಿಯನ್ನು ಹೊಂದಿದೆ. ಎರಡೂ ದೇಶಗಳಲ್ಲಿನ ರಾಜತಾಂತ್ರಿಕರ ಸಂಖ್ಯೆಯಲ್ಲಿ ಸಮಾನತೆ ಇರಬೇಕು ಎಂದು ಭಾರತವು 41 ರಾಜತಾಂತ್ರಿಕರಿಗೆ ರಾಜತಾಂತ್ರಿಕ ವಿನಾಯಿತಿ ರದ್ದುಪಡಿಸಿದೆ.

Etv Bharat
Etv Bharat

ನವದೆಹಲಿ: ತನ್ನ ದೇಶದ 41 ರಾಜತಾಂತ್ರಿಕರಿಗೆ ರಾಜತಾಂತ್ರಿಕ ವಿನಾಯಿತಿಯನ್ನು ಹಿಂತೆಗೆದುಕೊಳ್ಳುವಿಕೆಯು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂಬ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಆರೋಪವನ್ನು ಭಾರತ ತಳ್ಳಿಹಾಕಿದೆ. ತನ್ನ ಕ್ರಮವು ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗಿದೆ ಎಂದು ತಿಳಿಸಿದೆ.

ನಮ್ಮ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕೆನಡಾದ ರಾಜತಾಂತ್ರಿಕರು ಮತ್ತು ನಮ್ಮ ಆಂತರಿಕ ವ್ಯವಹಾರಗಳಲ್ಲಿ ಅವರ ನಿರಂತರ ಹಸ್ತಕ್ಷೇಪ ಕಾರಣಕ್ಕೆ ಇದು ನವದೆಹಲಿ ಮತ್ತು ಒಟ್ಟಾವಾದಲ್ಲಿ ಪರಸ್ಪರ ರಾಜತಾಂತ್ರಿಕ ಉಪಸ್ಥಿತಿಯಲ್ಲಿ ಸಮಾನತೆಯನ್ನು ಖಾತರಿಪಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಸಮಾನತೆಯನ್ನು ತರುವ ವಿಧಾನಗಳನ್ನು ರೂಪಿಸುವ ಸಲುವಾಗಿ ಭಾರತವು ಕಳೆದ ತಿಂಗಳಿನಿಂದ ಕೆನಡಾದೊಂದಿಗೆ ಚರ್ಚೆಯಲ್ಲಿ ತೊಡಗಿಸಿಕೊಂಡಿದೆ. ಇದನ್ನು ಕಾರ್ಯಗತಗೊಳಿಸುವಲ್ಲಿನ ನಮ್ಮ ಕ್ರಮಗಳು ರಾಜತಾಂತ್ರಿಕ ಸಂಬಂಧಗಳ ಮೇಲಿನ ವಿಯೆನ್ನಾ ಕನ್ವೆನ್ಶನ್​ನ ಆರ್ಟಿಕಲ್ 11.1ಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ ಎಂದು ಹೇಳಿದೆ. ಜೊತೆಗೆ ಭಾರತವು ಕೆನಡಾದಲ್ಲಿ ಕೇವಲ 21 ಮಾನ್ಯತೆ ಪಡೆದ ರಾಜತಾಂತ್ರಿಕರನ್ನು ಹೊಂದಿದ್ದರೆ, ಕೆನಡಾವು ಭಾರತದಲ್ಲಿ 62 ಮಂದಿಯನ್ನು ಹೊಂದಿದ್ದು, ನವದೆಹಲಿಯಲ್ಲಿನ ತನ್ನ ಹೈಕಮಿಷನ್ ಮತ್ತು ಮುಂಬೈ, ಚಂಡೀಗಢ ಮತ್ತು ಬೆಂಗಳೂರಿನ ಕಾನ್ಸುಲೇಟ್‌ಗಳಲ್ಲಿ ಕೆನಡಾದ ರಾಜತಾಂತ್ರಿಕರು ಹರಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್​ದೀಪ್​ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪದ ನಂತರ ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ಇದರ ನಡುವೆ ಕೆನಡಾದ ರಾಜತಾಂತ್ರಿಕರಿಗೆ ರಾಜತಾಂತ್ರಿಕ ವಿನಾಯಿತಿ ಹಿಂತೆಗೆದುಕೊಳ್ಳುವಿಕೆಯ ಕ್ರಮ ತೆಗೆದುಕೊಳ್ಳಲಾಗಿದೆ.

ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಜಸ್ಟಿನ್ ಟ್ರುಡೊ, ನವದೆಹಲಿಯಿಂದ ಹಿಂದಿರುಗಿದ ಕೂಡಲೇ ಸೆಪ್ಟೆಂಬರ್ 18ರಂದು ಕೆನಡಾದ ಹೌಸ್ ಆಫ್ ಕಾಮನ್ಸ್​ನಲ್ಲಿ ಭಾರತದ ವಿರುದ್ಧ ನಿಜ್ಜರ್ ಕೊಲೆಯಲ್ಲಿ ಕೈವಾಡದ ಆರೋಪ ಮಾಡಿದ್ದರು. ಟ್ರೂಡೊ ಆರೋಪದ ಜೊತೆಗೆ ಕೆನಡಾದ ವಿದೇಶಾಂಗ ಸಚಿವ ಜೋಲಿ, ಕೆನಡಾದಲ್ಲಿರುವ ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕುವುದಾಗಿ ಘೋಷಿಸಿದ್ದರು. ಅಲ್ಲದೇ, ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಉಲ್ಲಂಘಿಸಿ, ರಾಜತಾಂತ್ರಿಕರ ಹೆಸರನ್ನೂ ಬಹಿರಂಗಪಡಿಸಿದ್ದರು.

ಇದಕ್ಕೆ ಪ್ರತಿಯಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತದಲ್ಲಿನ ಕೆನಡಾದ ಹೈಕಮಿಷನರ್ ಕ್ಯಾಮರೂನ್ ಮ್ಯಾಕೆ ಅವರಿಗೆ ಸಮನ್ಸ್​ ನೀಡಿತ್ತು. ನವದೆಹಲಿಯಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಲು ಆದೇಶಿಸಿತ್ತು. ಅಷ್ಟೇ ಅಲ್ಲ, ಜಸ್ಟಿನ್ ಟ್ರುಡೊ ಮಾಡಿದ್ದ ಆರೋಪಗಳನ್ನು ಅಸಂಬದ್ಧ ಮತ್ತು ಪ್ರೇರಿತ ಎಂದು ತಿರುಗೇಟು ಕೊಟ್ಟಿತ್ತು.

ಇಂತಹ ಆಧಾರರಹಿತ ಆರೋಪಗಳು ಕೆನಡಾದಲ್ಲಿ ಆಶ್ರಯ ಪಡೆದಿರುವ ಮತ್ತು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಮೇಲಿನ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ. ಈ ವಿಷಯದಲ್ಲಿ ಕೆನಡಾದ ಸರ್ಕಾರದ ನಿಷ್ಕ್ರಿಯತೆಯು ದೀರ್ಘಕಾಲದ ಮತ್ತು ನಿರಂತರ ಕಳವಳಕಾರಿ ವಿಷಯವಾಗಿದೆ. ಕೆನಡಾದ ರಾಜಕೀಯ ವ್ಯಕ್ತಿಗಳು ಅಂತಹ ಅಂಶಗಳಿಗೆ ಬಹಿರಂಗವಾಗಿ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ ಎಂಬುದು ಸಹ ಸಾಕಷ್ಟು ಚಿಂತಿಸುವ ವಿಷಯವಾಗಿದೆ ಎಂದು ಹೇಳಿತ್ತು.

ಇಷ್ಟೇ ಅಲ್ಲ, ಟ್ರೂಡೊ ಆರೋಪದ ಭಾರತವು ಕೆನಡಾದಲ್ಲಿನ ಭಾರತೀಯ ಮಿಷನ್‌ಗಳಲ್ಲಿ ತನ್ನ ರಾಜತಾಂತ್ರಿಕರ ಸುರಕ್ಷತೆಯನ್ನು ಉಲ್ಲೇಖಿಸಿ ಎಲ್ಲ ಕೆನಡಾದ ನಾಗರಿಕರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದಲ್ಲದೇ, ಎರಡೂ ದೇಶಗಳಲ್ಲಿನ ರಾಜತಾಂತ್ರಿಕರ ಸಂಖ್ಯೆಯಲ್ಲಿ ಸಮಾನತೆ ಇರಬೇಕು ಎಂದು ಭಾರತವು 41 ಕೆನಡಾದ ರಾಜತಾಂತ್ರಿಕರ ರಾಜತಾಂತ್ರಿಕ ವಿನಾಯಿತಿಯನ್ನು ವಾಪಸ್​ ಪಡೆದಿದೆ.

ಇದನ್ನೂ ಓದಿ:ರಾಜತಾಂತ್ರಿಕ ಉದ್ವಿಗ್ನತೆಯ ಮಧ್ಯೆಯೇ ಭಾರತದಿಂದ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದ ಕೆನಡಾ

For All Latest Updates

TAGGED:

India Canada

ABOUT THE AUTHOR

...view details