ಕರ್ನಾಟಕ

karnataka

By

Published : Jan 10, 2022, 8:00 PM IST

Updated : Jan 10, 2022, 8:17 PM IST

ETV Bharat / bharat

ಸೋನು ಸೂದ್​ ಜೊತೆ Etv Bharat Exclusive: ರಾಜಕೀಯ ಸೇರುವ ಬಗ್ಗೆ ಹೇಳಿದ್ದೇನು?

ಕೋವಿಡ್​ ಸಮಯದಲ್ಲಿ ಲಕ್ಷಾಂತರ ಜನರ ಪಾಲಿಗೆ ರಿಯಲ್​ ಹೀರೋ ಆಗಿರುವ ನಟ ಸೋನು ಸೂದ್​ ಈಟಿವಿ ಭಾರತ್​ ಜೊತೆ ತಮ್ಮ ಮನದಾಳ ಹಂಚಿಕೊಂಡರು.

exclusive interview of sonu sood
exclusive interview of sonu sood

ನವದೆಹಲಿ:ಸಾಮಾಜಿಕ ಕಾರ್ಯಗಳಿಂದ ಜನಪ್ರಿಯತೆ ಗಳಿಸಿರುವ ಬಾಲಿವುಡ್ ನಟ ಸೋನು ಸೂದ್, ಮುಂದಿನ ಯೋಜನೆಗಳು​, ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳು ಹಾಗು ರಾಜಕೀಯ ಸೇರುವ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.

1.ಕೋವಿಡ್‌ಗೂ ಮೊದಲು ಕೇವಲ ಸೋನು ಸೂದ್​ ಆಗಿದ್ರಿ, ಇದೀಗ ನಿಮಗೆ ಸೂಪರ್​ ಮ್ಯಾನ್​ ಅಂತಾರಲ್ಲಾ?

ನಾನು ತುಂಬಾ ಸಾಮಾನ್ಯ ವ್ಯಕ್ತಿ. ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದಿದಾಗ ಮಾತ್ರ ನೈಜತೆ ಗೊತ್ತಾಗುತ್ತದೆ. ಅಗತ್ಯವಿರುವವರಿಗೆ ಸಹಾಯ ಮಾಡಿರುವುದು ನೆಮ್ಮದಿ ನೀಡಿದೆ. ಯಾರು, ಯಾವ ಹೆಸರಿಟ್ಟರು ಎಂಬುದು ಮುಖ್ಯವಲ್ಲ. ಅವರು ನಿಮ್ಮನ್ನು ತಮ್ಮವರೆಂದು ಪರಿಗಣಿಸಿದರೆ ಸಾಕು.


2. ಜನರು ನಿಮ್ಮ ಮೇಲಿಟ್ಟಿರುವ ನಂಬಿಕೆ ಈಡೇರಿಸಿದ್ದೀರಿ, ಮುಂದಿನ ಯೋಜನೆಗಳೇನು?

ಬಡವರಿಗೆ ಸಹಾಯ ಯಾವಾಗಲೂ ಅಗತ್ಯವಿದೆ. ಕೊರೊನಾ ಸಂದರ್ಭದಲ್ಲಿ ಜನರ ಸಮಸ್ಯೆಗಳು ಬೆಳಕಿಗೆ ಬಂದವು. ವಲಸೆ ಕಾರ್ಮಿಕರು ತಮ್ಮ ಮಕ್ಕಳೊಂದಿಗೆ ನಡೆದುಕೊಂಡು ಹೋಗುವುದನ್ನು ನೋಡಿದ್ದೇವೆ. ಈ ವೇಳೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜನರು ತೊಂದರೆ ಅನುಭವಿಸಿದ್ದಾರೆ. ಅವರಿಗೆ ನನ್ನಿಂದಾದ ಸಹಾಯ ಮಾಡಿರುವ ನೆಮ್ಮದಿ ಇದೆ. ಯಾವುದೇ ಮುಂದಾಲೋಚನೆ ಇಟ್ಟುಕೊಂಡು ಈ ಕೆಲಸ ಮಾಡಿಲ್ಲ.

3. ಸರ್ಕಾರಗಳೇ ಆರ್ಥಿಕತೆ ತೊಂದರೆ ಅನುಭವಿಸಿದಾಗ ನಿಮ್ಮ ಬಳಿ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಕೇಳಿ ಬಂತಲ್ಲಾ?

ಸಹಾಯ ಮಾಡಲು ನಾನು ನನ್ನದೇ ಆದ ಹಾದಿ ಮಾಡಿಕೊಂಡಿದ್ದೇನೆ. ನನಗಿಂತಲೂ ಹೆಚ್ಚಿನ ಸಂಪನ್ಮೂಲ ಹೊಂದಿರುವ ಜನರು ನನ್ನ ಸುತ್ತಲೂ ಇದ್ದಾರೆ. ಅವರು ಸಹ ನನ್ನೊಂದಿಗೆ ಕೈ ಜೋಡಿಸಿದ್ದಾರೆ.

4. ಇಷ್ಟೊಂದು ಜನಮನ್ನಣೆ ಪಡೆದುಕೊಂಡಿರುವ ನೀವು ಚುನಾವಣೆಯಲ್ಲಿ ಏಕೆ ಸ್ಪರ್ಧಿಸಬಾರದು?

ರಾಜಕೀಯ ಒಂದು ಅದ್ಭುತ ಕ್ಷೇತ್ರ. ಆದರೆ, ಅಲ್ಲಿ ಸೇವೆ ಸಲ್ಲಿಸುತ್ತಿರುವ ಜನರಿಗೆ ವಿವಿಧ ರೀತಿಯ ಹೆಸರು ನೀಡಿದ್ದಾರೆ. ನಾನು ರಾಜಕೀಯ ವಿರೋಧಿಯಲ್ಲ. ಆದರೆ, ನಟನಾಗಿ ಇನ್ನೂ ಬಹಳಷ್ಟು ಮಾಡಬೇಕಾಗಿರುವುದು ಬಾಕಿ ಉಳಿದಿದೆ. ಅದಕ್ಕಾಗಿ ಸ್ವಂತ ಹಾದಿ ನಿರ್ಮಿಸಿಕೊಂಡು ನಂತರ ನಿರ್ಧಾರ ಕೈಗೊಳ್ಳುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಸೇರಲು ನಾನು ಸಿದ್ಧಗೊಂಡಿಲ್ಲ. ಈಗಲೂ ಜನರಿಗೆ ಸಹಾಯ ಮಾಡಲು ಸಿದ್ಧನಿದ್ದೇನೆ. ಆದರೆ, ರಾಜಕಾರಣಿಯಾಗುವಷ್ಟರ ಮಟ್ಟಿಗೆ ರೆಡಿಯಾಗಿಲ್ಲ.

5. ಸರ್ಕಾರಗಳಿಗಿಂತಲೂ ಜನರಿಗೆ ನಿಮ್ಮ ಮೇಲೆ ಹೆಚ್ಚಿನ ನಂಬಿಕೆ ಇದೆ, ಏನಂತೀರಿ?

ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದೇನಿಲ್ಲ. ಆದರೆ, ಅದನ್ನು ಪ್ರಶ್ನೆ ಮಾಡಬೇಕು. ನಮಗೆ ಆ ಹಕ್ಕಿದೆ. ಜನರಿಗೆ ಹತ್ತಿರವಾದಾಗ ಅವರ ನಿರೀಕ್ಷೆಗಳು ಹೆಚ್ಚಾಗುತ್ತವೆ.

6. ರಾಜಕೀಯ ಸೇರಿಕೊಂಡರೆ ಯಾವ ರಾಜ್ಯದಿಂದ ಸ್ಪರ್ಧಿಸುವಿರಿ?

ಎಲ್ಲ ರಾಜ್ಯಗಳು ಒಂದೇ ಎಂಬುದು ನನ್ನ ಭಾವನೆ. ಎಲ್ಲೆಡೆಯಿಂದ ಪ್ರೀತಿ ಸಿಕ್ಕಿದೆ. ಆದರೆ ನಾನು ಪಂಜಾಬ್​​ನವನು. ಮಹಾರಾಷ್ಟ್ರದಲ್ಲಿ ವಾಸವಾಗಿದ್ದೇನೆ. ಇದೀಗ ಕರ್ನಾಟಕದಲ್ಲಿ ಆಕ್ಸಿಜನ್​ ಪ್ಲಾಂಟ್​ ಓಪನ್ ಮಾಡಲಿದ್ದೇನೆ. ನನಗೆ ಯಾವುದೇ ಧರ್ಮ, ಜಾತಿ, ರಾಜ್ಯ ಎಂಬುದಿಲ್ಲ.

7. ಸಿನಿಮಾಗಳಿಗಿಂತಲೂ ಇದೀಗ ಸಮಾಜಸೇವೆಯಲ್ಲೇ ಹೆಚ್ಚು ತೊಡಗಿದ್ದೀರಿ?

ಅನೇಕ ಜನರು ಸಹಾಯ ಕೇಳಿಕೊಂಡು ಬರುತ್ತಾರೆ. ಕೆಲವರಿಗೆ ಚಿಕಿತ್ಸೆ ಅವಶ್ಯಕತೆ ಇದೆ. ಕೆಲವರಿಗೆ ಉದ್ಯೋಗದ ಅಗತ್ಯವಿದೆ. ಅದಕ್ಕಾಗಿ ಒಂದೊಂದು ತಂಡ ಮಾಡಿಕೊಂಡಿದ್ದೇನೆ. ಕೆಲವರು ವೈದ್ಯಕೀಯ ಸಹಾಯ ನೋಡಿಕೊಂಡರೆ, ಇನ್ನೂ ಹಲವರು ಇತರೆ ಕೆಲಸ ನೋಡಿಕೊಳ್ಳುತ್ತಾರೆ.

8. ಪದ್ಮ ವಿಭೂಷಣ, ಭಾರತ ರತ್ನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ? ಕೆಲವರು ನೀವೂ ಪ್ರಧಾನಿಯಾಗಬೇಕು ಎಂದಿದ್ದಾರೆ, ಏನನ್ನಿಸುತ್ತೆ?

ಕೊರೊನಾ ಅವಧಿಯಲ್ಲಿ ನಾನು ಮಾಡಿರುವ ಕೆಲಸದಿಂದ ಅನೇಕರು ಈ ರೀತಿಯಾಗಿ ಮಾತನಾಡಿಕೊಳ್ಳುತ್ತಾರೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಅದಕ್ಕಾಗಿ ಹೊಸ ಹೊಸ ಮಾರ್ಗ ಕಂಡುಕೊಂಡು ಸಹಾಯ ಮಾಡಿದ್ದೇನೆ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಆಭಾರಿ. ಅದಕ್ಕೆ ನಾನು ಅರ್ಹನೋ, ಇಲ್ಲವೋ ಗೊತ್ತಿಲ್ಲ.

9. UPSC ಪರೀಕ್ಷೆಗೋಸ್ಕರ ಉಚಿತ ಕೋಚಿಂಗ್​ ನೀಡುವ ಕೆಲಸ ಮಾಡ್ತಿದ್ದೀರಲ್ಲಾ?

ನಾನು ಬಡ ಕುಟುಂಬದಿಂದ ಬಂದಿದ್ದೇನೆ. ಜನರು ಸಹಾಯ ಮಾಡಲು ಶುರು ಮಾಡಿದಾಗ ಅನೇಕ ಸಂದೇಶಗಳು ಬರುತ್ತಿದ್ದವು. ಕಳೆದ ವರ್ಷ 2400 ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಿದ್ದೇವೆ. ಆದರೆ ಇದರಿಂದ ಕೆಲ ಅರ್ಹರು ಹೊರಗುಳಿಯುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಕೋಚಿಂಗ್​ ಪ್ರಾರಂಭಿಸಿದ್ದೇವೆ.

ಇದನ್ನೂ ಓದಿ:ಜಲ್ಲಿಕಟ್ಟು ಆಯೋಜಿಸಲು ಗ್ರೀನ್‌ ಸಿಗ್ನಲ್‌: ಕಂಡೀಶನ್ಸ್‌ ಅಪ್ಲೈ ಎಂದ ತಮಿಳುನಾಡು ಸರ್ಕಾರ

Last Updated : Jan 10, 2022, 8:17 PM IST

ABOUT THE AUTHOR

...view details