ಕರ್ನಾಟಕ

karnataka

ETV Bharat / bharat

ಚುನಾವಣಾ ಆಯುಕ್ತರ ನೇಮಕಾತಿ: ಸುಧಾರಣೆಗೆ ಇದು ಸೂಕ್ತ ಸಮಯ

ಚುನಾವಣೆಗಳನ್ನು ಅತ್ಯಂತ ಭಕ್ತಿ-ಶ್ರದ್ದೆ ಹಾಗೂ ಪಾರದರ್ಶಕವಾಗಿ ನಡೆಸಬೇಕು. ದುರದೃಷ್ಟವಶಾತ್, ಇದು ಮಾತ್ರ ನಮ್ಮಲ್ಲಿ ಕಂಡು ಬರುತ್ತಿಲ್ಲ. ಬದಲಿಗೆ, ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ ವರುಷಗಳುರುಳಿದಂತೆ ಕುಗ್ಗುತ್ತಿದೆ.

Election commission
ಚುನಾವಣಾ ಆಯುಕ್ತರ ನೇಮಕಾತಿ

By

Published : Mar 17, 2021, 11:37 AM IST

ಪ್ರಜಾಪ್ರಭುತ್ವದ ಹಬ್ಬ ಎಂದೇ ಚುನಾವಣೆಗಳನ್ನು ಕರೆಯಲಾಗುತ್ತದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ, ಚುನಾವಣೆ ಸಂಭ್ರಮ ಕುಂಭಮೇಳಕ್ಕಿಂತ ಕಡಿಮೆ ಇರುವುದಿಲ್ಲ. ಪ್ರಜಾಭುತ್ವವನ್ನು ದೇಶದಲ್ಲಿ ಇನ್ನಷ್ಟು ಪ್ರಬಲಗೊಳಿಸಲು, ಈ ಚುನಾವಣೆಗಳನ್ನು ಅತ್ಯಂತ ಭಕ್ತಿ-ಶ್ರದ್ದೆ ಹಾಗೂ ಪಾರದರ್ಶಕವಾಗಿ ನಡೆಸಬೇಕು. ದುರದೃಷ್ಟವಶಾತ್, ಇದು ಮಾತ್ರ ನಮ್ಮಲ್ಲಿ ಕಂಡು ಬರುತ್ತಿಲ್ಲ. ಬದಲಿಗೆ, ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ ವರುಷಗಳುರುಳಿದಂತೆ ಕುಗ್ಗುತ್ತಿದೆ.

ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಬದಲಿಗೆ, ಪ್ರತಿ ಚುನಾವಣೆ ಸಂದರ್ಭದಲ್ಲೂ ಅದರ ಮೌಲ್ಯಗಳನ್ನು ಮಣ್ಣು ಪಾಲು ಮಾಡಲಾಗುತ್ತಿದೆ. 1990ರ ಅವಧಿಯಲ್ಲಿ ಟಿ.ಎನ್. ಶೇಷನ್ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರಕ್ಕೇರುವ ವೇಳೆಗೆ, ಚುನಾವಣಾ ವ್ಯವಸ್ಥೆ ಸಾಕಷ್ಟು ಕುಸಿದು ಹೋಗಿತ್ತು. ಶೇಷನ್ ಮತ್ತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತರಲು ಸಾಕಷ್ಟು ಶ್ರಮಿಸಿದರು. ಇದರ ಪರಿಣಾಮ ಈ ವ್ಯವಸ್ಥೆ ಒಂದಿಷ್ಟು ಬದಲಾವಣೆ ಆಗಿದೆ.

ಆದರೆ, ಈಗಿನ ಅತಿ ದೊಡ್ಡ ಸವಾಲೆಂದರೆ, ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ರಾಜಕೀಯ ಪರಿಗಣನೆಗಳನ್ನು ನೋಡಿಕೊಂಡು ಆಯ್ಕೆ ಮಾಡುವುದು. ಈ ಹಿನ್ನೆಲೆಯಲ್ಲಿ, ಗೋವಾ ಸರಕಾರ ರಾಜ್ಯದ ಕಾನೂನು ಕಾರ್ಯದರ್ಶಿಗೆ ಹೆಚ್ಚುವರಿಯಾಗಿ ಚುನಾವಣಾ ಆಯೋಗದ ಆಯುಕ್ತ ಜವಾಬ್ದಾರಿಯನ್ನು ನೀಡಿದ ಆದೇಶವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್​ನ ಮೂವರು ನ್ಯಾಯಮೂರ್ತಿಗಳು ಪಟ್ಟಿರುವ ಅಭಿಪ್ರಾಯ ಅತಿ ಮಹತ್ವ ಪಡೆದಿದೆ.

ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ, ರಾಜ್ಯ ಚುನಾವಣಾ ಆಯೋಗ ಸಹ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಕೇಂದ್ರ ಚುನಾವಣಾ ಆಯೋಗ ಹೊಂದಿರುವಷ್ಟೇ ಅಧಿಕಾರ ಹಾಗೂ ಜವಾಬ್ದಾರಿ ಹೊಂದಿದೆ ಎಂದು ಅಭಿಪ್ರಾಯ ಪಟ್ಟಿದೆ.

ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹಲವು ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದೆ. ಈ ಎಲ್ಲಾ ಅಂಶಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ನಿರ್ಣಾಯಕ ಅಂಶಗಳು. ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್, ಪ್ರಜಾಪ್ರಭುತ್ವ ವ್ಯವಸ್ಥೆಯ ಅರಂಭಿಕ ಹಂತದ ಚುನಾಯಿತ ವ್ಯವಸ್ಥೆಯಾದ ಪಂಚಾಯತ್​ಗಳು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯುವಲ್ಲಿ ರಾಜ್ಯ ಚುನಾವಣಾ ಆಯೋಗಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಆಯೋಗಗಳ ಕಾರ್ಯ ನಿರ್ವಹಣೆಯಲ್ಲಿ ರಾಜ್ಯ ಚುನಾವಣಾ ಆಯುಕ್ತರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಹಿನ್ನಲೆಯಲ್ಲಿ, ದುಷ್ಟ ರಾಜಕೀಯ ಶಕ್ತಿಗಳು ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ಪಾವಿತ್ರ್ಯವನ್ನು ಹಾಳುಗೆಡವಲು, ಈ ವ್ಯವಸ್ಥೆಯನ್ನು ಆಕ್ರಮಿಸಿಕೊಳ್ಳಲು ಬಿಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಖಡಾಖಂಡಿತವಾಗಿ ಹೇಳಿದೆ. ಇದರ ಜೊತೆಗೆ, ಪ್ರಸ್ತುತ ಹೆಚ್ಚುವರಿಯಾಗಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯ ಚುನಾವಣಾ ಆಯುಕ್ತರಿಗೆ ತಮ್ಮ ಹುದ್ದೆ ತೊರೆಯುವಂತೆ ಹೇಳಿದೆ. ಇದರ ಜೊತೆಗೆ, ಸರ್ಕಾರಿ ನೌಕರ ಅಥವಾ ಅಧಿಕಾರಿ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಬಾರದು ಎಂದು ಕೂಡ ಸುಪ್ರೀಂ ಕೋರ್ಟ್ ತಿಳಿಸಿದೆ. ಸರ್ಕಾರಿ ನೌಕರರನ್ನು, ಚುನಾವಣಾ ಆಯೋಗದ ಆಯುಕ್ತ ಹುದ್ದೆಗೆ ನೇಮಕ ಮಾಡುವುದನ್ನು ಅಸಿಂಧು ಎಂದು ಘೋಷಿಸಿದೆ.

ಸುಪ್ರೀಂಕೋರ್ಟ್‌ನ ಈ ಮಹತ್ವದ ಅವಲೋಕನ- ತೀರ್ಪಿನ ಹಿನ್ನಲೆಯಲ್ಲಿ ಹೇಳುವುದಾದರೆ, ಸ್ಥಳೀಯ ಸಂಸ್ಥೆಗಳಿಗೆ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳನ್ನು ನಡೆಸಲು ಹಾಗೂ ಇಡೀ ಚುನಾವಣಾ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುವ ರಾಜ್ಯ ಚುನಾವಣಾ ಆಯೋಗಗಳ ಸ್ವಾತಂತ್ರ್ಯದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ಸಾಧ್ಯವಾಗಬೇಕೆದ್ದರೆ, ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಬಹಳಷ್ಟು ಸುಧಾರಣೆಗಳನ್ನು ತರಬೇಕಿದೆ.

ಭಾರತ ಸಂವಿಧಾನದ ನಿರ್ಮಾತೃ ಡಾ. ಬಿ.ಆರ್ ಅಂಬೇಡ್ಕರ್ ಅವರು ಈ ಬಗ್ಗೆ ಅಂದೇ ಯೋಚಿಸಿದ್ದರು. ಚುನಾವಣಾ ಆಯೋಗದ ನೇಮಕಾತಿಗಾಗಿ ವಿಶೇಷ ವ್ಯವಸ್ಥೆಯೊಂದನ್ನು ರೂಪಿಸುವ ಚಿಂತನೆ ಅವರದಾಗಿತ್ತು. ಅಂದು ಅವರ ಮಾತಿಗೆ ಕಿವಿಗೊಡದ ಪರಿಣಾಮ ಇಂದು ಚುನಾವಣಾ ಆಯೋಗದ ನೇಮಕಾತಿಗಳಲ್ಲಿ ನಾವು ಇಂತಹ ಸಮಸ್ಯೆ ಎದುರಿಸುವಂತಾಗಿದೆ.

ಚುನಾವಣಾ ಆಯೋಗದ ಸ್ವಾಯತ್ತತೆ-ಸ್ವಾತಂತ್ರ್ಯ ಕಾರ್ಯನಿರ್ವಹಣೆ ಬಗ್ಗೆ ಈ ಹಿಂದೆ ಹಲವಾರು ಬಾರಿ ಚರ್ಚೆ ನಡೆದಿದೆ. ದೇಶದ ಈ ಹಿಂದಿನ ಮುಖ್ಯ ಚುನಾವಣಾ ಆಯುಕ್ತರಾದ ಎಂ.ಎಸ್. ಗಿಲ್ ಅವರು ಈ ಸಂಬಂಧ ರಾಜಕೀಯ ಪಕ್ಷಗಳ ಜವಾಬ್ದಾರಿಯ ಬಗ್ಗೆ ಕಿವಿಮಾತು ಹೇಳಿದ್ದಾರೆ. ಅವರ ಪ್ರಕಾರ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ತಮ್ಮ ಸುತ್ತಲೂ ವೃತ್ತವನ್ನು ಎಳೆದುಕೊಳ್ಳಬೇಕು ಮತ್ತು ಅದನ್ನು ಅವು ಯಾವತ್ತೂ ಕೂಡ ಮೀರಬಾರದು. ರಾಜಕೀಯ ಪಕ್ಷಗಳು ಸದಾ ತಮ್ಮ ಸಾಂವಿಧಾನಿಕ ಮತ್ತು ನೈತಿಕ ಕಟ್ಟುಪಾಡುಗಳನ್ನು ಮೀರದೆ ಸಾಂವಿಧಾನಿಕ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಈಗ ನೈತಿಕವಾಗಿ ಅತಿ ಎತ್ತರದಲ್ಲಿರುವ ವ್ಯಕ್ತಿಗಳನ್ನು ಚುನಾವಣಾ ಆಯುಕ್ತರಾಗಿ ಆಯ್ಕೆ ಮಾಡಲು ಅಗತ್ಯ ನೀತಿ ನಿಯಮಗಳಿಲ್ಲ. ಇದು ರಾಜಕೀಯ ಪಕ್ಷಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಿದೆ. ತಮ್ಮ ಮಾತಿಗೆ ಯಸ್ ಎನ್ನುವ ಹೌದಪ್ಪ ಗಳನ್ನೂ ಈ ಸೂಕ್ಷ್ಮ ಸಂವಿಧಾನಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ರಾಜಕೀಯ ಪಕ್ಷಗಳಿಗೆ ಇದು ಅನುವು ಮಾಡಿಕೊಟ್ಟಿದೆ. ಇದು ಚುನಾವಣಾ ವ್ಯವಸ್ಥೆಯ ಮುಂದಿರುವ ಅತಿ ದೊಡ್ಡ ಸವಾಲು.

ಇದರ ಜೊತೆಗೆ, ಸದ್ಯಕ್ಕೆ ಈ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತರಲು ಸರ್ಕಾರ ಸಿದ್ದ ಇದ್ದಂತಿಲ್ಲ. ಈ ಸಾಂವಿಧಾನಿಕ ನಿರ್ಣಾಯಕ ಸ್ಥಾನಕ್ಕೆ ನೇಮಕ ಮಾಡುವ ಸಂದರ್ಭದಲ್ಲಿ ಉಳಿದ ರಾಜಕೀಯ ಪಕ್ಷಗಳ ಸಲಹೆ ಪಡೆಯುವ ಅಥವಾ ಕೊಲಿಜಿಯಂ ವ್ಯವಸ್ಥೆ ರೂಪಿಸುವ ಯಾವುದೇ ಪ್ರಸ್ತಾಪನೆ ಸರ್ಕಾರದ ಮುಂದಿಲ್ಲ ಎಂದು 2017 ರಲ್ಲಿ ಕೇಂದ್ರ ಸರ್ಕಾರ ಸಂಸತ್​ನಲ್ಲಿ ಸ್ಪಷ್ಟಪಡಿಸಿತ್ತು. ಅಂದರೆ ಈಗಿನ ರಾಜಕೀಯ ಪಕ್ಷಗಳ ಹಸ್ತಕ್ಷೇಪದ ವ್ಯವಸ್ಥೆಯೇ ಇನ್ನು ಮುಂದುವರಿಯುವುದು ಖಚಿತವಾದಂತಿದೆ.

ಸ್ವತಂತ್ರ, ಸ್ವಾಯತ್ತ ಚುನಾವಣಾ ಆಯೋಗದ ಬಗ್ಗೆ ಈ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಸ್ವತಃ 2012 ರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಈಗ ಇರುವ ವ್ಯವಸ್ಥೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಆಯ್ಕೆ ಪ್ರಕ್ರಿಯೆಯು ಬಹಳಷ್ಟು ಅಕ್ರಮಗಳಿಗೆ ಅವಕಾಶ ನೀಡುತ್ತಿದೆ. ಈ ಆಯ್ಕೆಯಲ್ಲಿ ವಿರೋಧ ಪಕ್ಷಗಳಿಗೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದರು. ಸಿಎಜಿ ಮತ್ತು ಸಿಇಸಿಯ ನೇಮಕಾತಿ ಪ್ರಕ್ರಿಯೆಯಲ್ಲಿನ ಬದಲಾವಣೆ ಬಗ್ಗೆ ಅವರು ಒತ್ತಿ ಹೇಳಿದ್ದರು.

2006ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಂಡನ್, 2009 ರಲ್ಲಿ ಈ ಹುದ್ದೆಗೇರಿದ ಗೋಪಾಲ ಸ್ವಾಮಿ ಕೂಡ ಇದೇ ಒತ್ತಾಯ ಮಾಡಿದ್ದರು. 2015ರಲ್ಲಿ, ಕಾನೂನು ಆಯೋಗವು, ಪ್ರಧಾನಿ, ಪ್ರತಿಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಕೊಲಿಜಿಯಂ ಮೂಲಕ ಚುನಾವಣಾ ಆಯುಕ್ತರ ನೇಮಕಕ್ಕೆ ಸಲಹೆ ನೀಡಿತ್ತು.

ಆಡಳಿತ ಪಕ್ಷ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ದೊಡ್ಡ ಇತಿಹಾಸವೇ ಇದೆ. ತನ್ನ ಅಧಿಕಾರವನ್ನು ಆಡಳಿತ ಪಕ್ಷ ಸಾಕಷ್ಟು ಬಾರಿ ದುರುಪಯೋಗ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಆಡಳಿತ ಪಕ್ಷದ ಏಕಸ್ವಾಮಿತ್ವ ತೆಗೆದು ಹಾಕಬೇಕೆಂಬ ಒತ್ತಡ ಹೆಚ್ಚುತ್ತಿದೆ.

ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾದರೆ ಚುನಾವಣಾ ಆಯೋಗವನ್ನು ಸ್ವತಂತ್ರಗೊಳಿಸುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ಅನುಸರಿಸಲಾಗುತ್ತಿರುವ ಮಾದರಿಗಳನ್ನು ನಮ್ಮಲ್ಲಿ ಅಳವಡಿಸಬಹುದು. ಉದಾಹರಣೆಗೆ, ಕೆನಡಾದಲ್ಲಿ ಹೌಸ್ ಆಫ್ ಕಾಮನ್ಸ್ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತದೆ. ಹೌಸ್ ಆಫ್ ಕಾಮನ್ಸ್​ನಿಂದ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಮುಖ್ಯ ಚುನಾವಣಾ ಆಯುಕ್ತರು ಹೌಸ್ ಆಫ್ ಕಾಮನ್ಸ್​ಗೆ ಮಾತ್ರ ಜವಾಬ್ದಾರರಾಗಿರುತ್ತಾರೆ. ಇದೇ ಮಾದರಿಯನ್ನು ಭಾರತದಲ್ಲಿಯೂ ಅಳವಡಿಸಲು ಯೋಚಿಸಬಹುದು. ಏಕೆಂದರೆ ಚುನಾವಣಾ ಪ್ರಕ್ರಿಯೆಯ ಮೇಲಿನ ಜನರ ನಂಬಿಕೆ ಈಗ ದಿನ ಕಳೆದಂತೆ ಕಡಿಮೆ ಆಗುತ್ತಿದೆ. ಹೀಗೆ ಕಳೆದು ಹೋಗುತ್ತಿರುವ ಜನರ ನಂಬಿಕೆಯನ್ನು ಪುನಃಸ್ಥಾಪಿಸಬೇಕಾದರೆ, ಚುನಾವಣಾ ಆಯೋಗವನ್ನು ಮೊದಲಿಗೆ ಸರ್ವ ಸ್ವತಂತ್ರಗೊಳಿಸಬೇಕು. ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಸುಧಾರಣೆ ಜಾರಿಯಾಗಬೇಕು.

ಸ್ವತಂತ್ರ ಚುನಾವಣಾ ಆಯುಕ್ತರ ನೇಮಕ ಪದ್ಧತಿ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಈ ಆಯುಕ್ತರು ದೇಶದ ಸಂವಿಧಾನಕ್ಕೆ ಮಾತ್ರ ನಿಷ್ಠರಾಗಿರುವವರಾಗಿರಬೇಕು. ಇದು ಆದಾಗ ಮಾತ್ರ ನಮ್ಮ ಜನ ಸಾಮಾನ್ಯರಿಗೆ ಚುನಾವಣೆಯಲ್ಲಿ ಸಂಪೂರ್ಣ ವಿಶ್ವಾಸ ಮತ್ತೆ ಬರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದುವರಿಯಬೇಕಿದೆ.

ABOUT THE AUTHOR

...view details