ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 3 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಜಾರ್ಖಂಡ್ನ ರಾಂಚಿ ಮೂಲದ ಪ್ರಾದೇಶಿಕ ಕಚೇರಿ ಮುಂದೆ 11.30 ರೊಳಗೆ ಹಾಜರಾಗುವಂತೆ ಸೊರೆನ್ ಅವರಿಗೆ ಇಡಿ ಸೂಚಿಸಿದೆ. ಸೊರೆನ್ ಅವರ ಆಪ್ತ ಸಹಚರ ಪಂಕಜ್ ಮಿಶ್ರಾ ಮನೆಯಿಂದ ಮುಖ್ಯಮಂತ್ರಿಯವರಿಗೆ ಸಂಬಂಧಿಸಿದ ಎರಡು ಸಹಿ ಮಾಡಿದ ಚೆಕ್ ಸೇರಿದಂತೆ ಪಾಸ್ಬುಕ್ ಮತ್ತು ಚೆಕ್ಬುಕ್ ಅನ್ನು ವಶಪಡಿಸಿಕೊಂಡ ಸುಮಾರು ಒಂದು ತಿಂಗಳ ನಂತರ ಇಡಿ ಈ ಕ್ರಮ ಕೈಗೊಂಡಿದೆ.
ಹೇಮಂತ್ ಸೊರೆನ್ ಅವರ ರಾಜಕೀಯ ಪ್ರತಿನಿಧಿ ಪಂಕಜ್ ಮಿಶ್ರಾ ಅವರು ರಾಜಕೀಯ ಪ್ರಭಾವವನ್ನ ಬಳಸಿಕೊಂಡು ಅಕ್ರಮ ಗಣಿಗಾರಿಕೆ ಮೇಲೆ ಸಾಕಷ್ಟು ನಿಯಂತ್ರಣ ಹೊಂದಿದ್ದಾರೆ. ತನ್ನ ಸಹಚರರ ಮೂಲಕ ಸಾಹೇಬ್ಗಂಜ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ವ್ಯಾಪಾರ ಮತ್ತು ಒಳನಾಡಿನ ದೋಣಿ ಸೇವೆಗಳ ಮೇಲೆ ಹಿಡಿತ ಸಾಧಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ಪ್ರಕರಣ.. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆಪ್ತ ಬಂಧನ
ಕಳೆದ ಜುಲೈನಲ್ಲಿ ಭಾರತದ್ಯಾಂತ ಇಡಿ ದಾಳಿ ನಡೆಸಿ, 5.34 ಕೋಟಿ ಮೊತ್ತದ ಹಣವನ್ನು ವಶಪಡಿಸಿಕೊಂಡಿತ್ತು. ಜೊತೆಗೆ 13.32 ಕೋಟಿ ಮೊತ್ತದ ಬ್ಯಾಂಕ್ ಬ್ಯಾಲೆನ್ಸ್ಗಳನ್ನು ಫ್ರೀಜ್ ಮಾಡಿ, 5 ಸಂಖ್ಯೆಯ ಸ್ಟೋನ್ ಕ್ರಷರ್ಗಳು, ಎಕೆ 47 ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪಂಕಜ್ ಮಿಶ್ರಾ, ಬಚ್ಚು ಯಾದವ್ ಮತ್ತು ಪ್ರೇಮ್ ಪ್ರಕಾಶ್ ವಿರುದ್ಧ ಜಾರ್ಖಂಡ್ನ ರಾಜಧಾನಿ ರಾಂಚಿಯ ವಿಶೇಷ ನ್ಯಾಯಾಲಯದಲ್ಲಿ 2002 ರ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದ ನಂತರ ಇಡಿ ಈ ವಿಷಯವನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ:ಅಕ್ರಮ ಗಣಿಗಾರಿಕೆ: ಸಿಎಂ ಹೇಮಂತ್ ಸೊರೇನ್ ಆಪ್ತನಿಗೆ ಸೇರಿದ 30 ಕೋಟಿ ಮೌಲ್ಯದ ಹಡಗು ಜಪ್ತಿ
ಜುಲೈ 19 ರಂದು ಪಂಕಜ್ ಮಿಶ್ರಾ, ಆಗಸ್ಟ್ 4 ರಂದು ಬಚ್ಚು ಯಾದವ್ ಮತ್ತು ಆಗಸ್ಟ್ 25 ರಂದು ಪ್ರೇಮ್ ಪ್ರಕಾಶ್ ಅವರನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ ಬಂಧಿತರಾಗಿರುವ ಎಲ್ಲಾ ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೊತೆಗೆ ಪಂಕಜ್ ಮಿಶ್ರಾ ಅಕ್ರಮವಾಗಿ ಕೂಡಿಟ್ಟಿದ್ದ ಭಾರಿ ಸಂಪತ್ತನ್ನು ವಶಪಡಿಸಿಕೊಂಡಿದ್ದು, ಈವರೆಗೆ 42 ಕೋಟಿ ರೂಪಾಯಿ ಲೆಕ್ಕ ಸಿಕ್ಕಿದೆ ಎಂದು ಇಡಿ ಮಾಹಿತಿ ನೀಡಿದೆ.