ರಾಂಚಿ(ಜಾರ್ಖಂಡ್):ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆಪ್ತರು ಎಂದು ಹೇಳಲಾಗ್ತಿರುವ ಉದ್ಯಮಿ ಪ್ರೇಮ್ ಪ್ರಕಾಶ್ ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿತು. ಈ ವೇಳೆ ಅಚ್ಚರಿ ಎಂಬಂತೆ, ಎರಡು ಎಕೆ 47 ರೈಫಲ್ಸ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ ನಡೆದಿರುವ 100 ಕೋಟಿ ರೂ ಮೌಲ್ಯದ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಪ್ರೇಮ್ ಪ್ರಕಾಶ್ ಮನೆ ಸೇರಿದಂತೆ ವಿವಿಧೆಡೆ ಏಕಕಾಲದಲ್ಲಿ ಈ ದಾಳಿ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, 20 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಪಕ್ಕದ ರಾಜ್ಯಗಳಾಗಿರುವ ಬಿಹಾರ, ತಮಿಳುನಾಡು ಮತ್ತು ದೆಹಲಿ ಎನ್ಸಿಆರ್ನಲ್ಲೂ ಪರಿಶೀಲನೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.