ಕರ್ನಾಟಕ

karnataka

By

Published : Jun 16, 2022, 7:01 AM IST

Updated : Jun 16, 2022, 7:31 AM IST

ETV Bharat / bharat

ಕೈ ಕಾರ್ಯಕರ್ತರನ್ನು ಬಲವಂತವಾಗಿ ಎಳೆದೊಯ್ದ ಫೋಟೋಗಳು ವೈರಲ್: 30 ಗಂಟೆಗಳ ಕಾಲ ರಾಹುಲ್​ಗೆ ಡ್ರಿಲ್​.. ಶುಕ್ರವಾರ ಮತ್ತೆ ವಿಚಾರಣೆ

ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕ್ರಮವನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಬಲವಂತವಾಗಿ ಹೊತ್ತೊಯ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್
ಕಾಂಗ್ರೆಸ್

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸತತವಾಗಿ ಮೂರು ದಿನಗಳಿಂದ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇಂದು ಯಾವುದೇ ವಿಚಾರಣೆ ಇರುವುದಿಲ್ಲ. ಆದರೆ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ರಾಹುಲ್​ ಗಾಂಧಿಗೆ ಇಡಿ ಸಮನ್ಸ್​ ನೀಡಿದೆ. ಹೀಗಾಗಿ ರಾಹುಲ್​ ಶುಕ್ರವಾರ ವಿಚಾರಣೆಗೆ ಮತ್ತೆ ಹಾಜರಾಗುವ ಸಾಧ್ಯತೆ ಇದೆ.

ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯ(ಇಡಿ) ಕೇಂದ್ರ ಕಚೇರಿಗೆ ಬೆಳಗ್ಗೆ ಹಾಜರಾದ 51 ವರ್ಷದ ರಾಹುಲ್ ಗಾಂಧಿ ಅವರು ಸುಮಾರು 8 ಗಂಟೆಗಳ ಕಾಲ ವಿಚಾರಣೆ ಎದುರಿಸಿ ರಾತ್ರಿ 9:30ರ ಸುಮಾರಿಗೆ ಕಚೇರಿಯಿಂದ ನಿರ್ಗಮಿಸಿದರು.

ರಾಹುಲ್ ಗಾಂಧಿ ಕಳೆದ ಮೂರು ದಿನಗಳಿಂದ ನೀಡಿರುವ ಹೇಳಿಕೆಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಅನೇಕ ಸೆಷನ್‌ಗಳಲ್ಲಿ ದಾಖಲಿಸಲಾಗಿದೆ. ನಿನ್ನೆ ನಡೆದ ವಿಚಾರಣೆ ಸೇರಿ ರಾಹುಲ್ ಗಾಂಧಿ ಇಡಿ ತನಿಖಾಧಿಕಾರಿಗಳೊಂದಿಗೆ ಸುಮಾರು 30 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಇಂದು ಒಂದು ದಿನದ ವಿನಾಯ್ತಿ ನೀಡಿರುವ ಜಾರಿ ನಿರ್ದೇಶನಾಲಯ ಜೂನ್ 17ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಮುಂದುವರಿದ ಕಾಂಗ್ರೆಸ್​ ಪ್ರತಿಭಟನೆ- ಆಕ್ರೋಶ:ಇನ್ನೊಂದೆಡೆ ದೇಶಾದ್ಯಂತ ಕಾಂಗ್ರೆಸ್​​​​​​​​​​ ಭಾರಿ ಪ್ರತಿಭಟನೆ ನಡೆಸುತ್ತಿದೆ. ಇಡಿ ವಿಚಾರಣೆಗೆ ವಿರೋಧ ವ್ಯಕ್ತಪಡಿಸಿರುವ ಪಕ್ಷದ ಕಾರ್ಯಕರ್ತರು ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿ ಮತ್ತು ಇಡಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ಕೈ ಕಾರ್ಯಕರ್ತರು ಇಡಿ ಕ್ರಮವನ್ನು " ರಾಜಕೀಯ ಪ್ರೇರಿತ" ಎಂದು ಆರೋಪಿಸಿದರು.

ದೆಹಲಿಯ 24, ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯ ಆವರಣದೊಳಗೆ ಪ್ರವೇಶಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ಬಲವಂತವಾಗಿ ಎಳೆದೊಯ್ಯುವ ದೃಶ್ಯಗಳು ಕಂಡು ಬಂದಿತು. ಮಹಿಳೆಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಲವಂತವಾಗಿ ಹೊತ್ತೊಯ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದು ಕೇಂದ್ರದ ಗೂಂಡಾ ವರ್ತನೆ ಎಂದ ಸುರ್ಜೇವಾಲಾ:ಈ ಬೆಳವಣಿಗೆಯಿಂದ ಕೆರಳಿದ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಮಾಧ್ಯಮಗಳ ಮುಂದೆ ಆಕ್ರೋಶ ಹೊರಹಾಕಿದರು. ಮೋದಿ ಸರ್ಕಾರದ ನಿದರ್ಶನದ ಮೇರೆಗೆ ದೆಹಲಿ ಪೊಲೀಸರು ಕಾಂಗ್ರೆಸ್‌ನ ರಾಷ್ಟ್ರೀಯ ಕೇಂದ್ರ ಕಚೇರಿಗೆ ಪ್ರವೇಶಿಸಿ ಬಲವಂತವಾಗಿ ಪಕ್ಷದ ಕಾರ್ಯಕರ್ತರನ್ನು ಥಳಿಸಿದ್ದಾರೆ. ಇದೊಂದು ಕ್ರಿಮಿನಲ್ ಅತಿಕ್ರಮಣ, ಗೂಂಡಾ ವರ್ತನೆಯ ಪರಮಾವಧಿ ಎಂದು ಆರೋಪಿಸಿದರು.

ನಾವು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಆದರೆ, ಈ ಗೂಂಡಾವಾದವನ್ನು ಸಹಿಸುವುದಿಲ್ಲ. ಮೋದಿ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿರುವ ಎಲ್ಲಾ ಪೊಲೀಸ್ ಅಧಿಕಾರಿಗಳು ಅವರ ಯಜಮಾನರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಐಎನ್‌ಸಿಯ ಪ್ರಧಾನ ಕಚೇರಿಗೆ ಬಲವಂತವಾಗಿ ಪ್ರವೇಶಿಸುವ ಮೂಲಕ ಕಾರ್ಯಕರ್ತರನ್ನು ಎಳೆದೊಯ್ದ ದೆಹಲಿಯ ಎಲ್ಲ ಪೊಲೀಸ್​ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಇನ್ನು ಈ ಆರೋಪಗಳನ್ನು ಅಲ್ಲಗೆಳೆದಿರುವ ದೆಹಲಿ ಪೊಲೀಸರು, ಇದು ಸುಳ್ಳು ಸುದ್ದಿ. ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದಿದ್ದಾರೆ.

ಶುಕ್ರವಾರ ಮತ್ತೆ ವಿಚಾರಣೆ: ಸತತ ಮೂರು ದಿನಗಳ ಕಾಲ ರಾಹುಲ್ ಗಾಂಧಿಯನ್ನು ಇಡಿ ಗ್ರಿಲ್ ಮಾಡಿದ್ದು ಇಂದು ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಅಧಿಕೃತವಾಗಿ ತಿಳಿದುಬಂದಿದೆ. ಅವರಿಗೆ ಒಂದು ದಿನದ ವಿಶ್ರಾಂತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ED ಅಂದ್ರೆ ಎಕ್ಸಾಮಿನೇಶನ್ ಇನ್ ಡೆಮಾಕ್ರಸಿ : ಪ್ರತಿಪಕ್ಷದವರು ಪಾಸು ಮಾಡ್ಲೇಬೇಕು.. ಅಖಿಲೇಶ್‌ ಯಾದವ್

Last Updated : Jun 16, 2022, 7:31 AM IST

ABOUT THE AUTHOR

...view details