ಕರ್ನಾಟಕ

karnataka

ETV Bharat / bharat

ನನ್ನ ಜಾತಿ ಮುಚ್ಚಿಡಲು ಬಯಸುವುದಿಲ್ಲ, ಅದನ್ನು ಬಳಸಿ ರಾಜಕೀಯ ಮಾಡಿಲ್ಲ: ಶರದ್ ಪವಾರ್ - Nationalist Congress Party

Sharad Pawar caste certificate viral: ಕಳೆದ ಎರಡು ದಿನಗಳಿಂದ ಶರದ್ ಪವಾರ್ ಒಬಿಸಿ ಸಮುದಾಯಕ್ಕೆ ಸೇರಿದವರು ಎಂಬ ಸುದ್ದಿ ಹರಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಜಾತಿ ಪ್ರಮಾಣ ಪತ್ರ ವೈರಲ್ ಆಗಿರುವುದು ಇದಕ್ಕೆ ಕಾರಣ.

Sharad Pawar
ಶರದ್ ಪವಾರ್

By ANI

Published : Nov 15, 2023, 9:18 AM IST

ಬಾರಾಮತಿ(ಮಹಾರಾಷ್ಟ್ರ): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರು ಎಂದು ತೋರಿಸುವ ಪ್ರಮಾಣಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಟೀಕೆಗೆ ಶರದ್ ಪವಾರ್ ನೇರ ಉತ್ತರ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ನನ್ನ ಜಾತಿಯನ್ನು ಮರೆಮಾಡಲು ಬಯಸುವುದಿಲ್ಲ. ಅದನ್ನು ಮಾಧ್ಯಮವಾಗಿ ಬಳಸಿಕೊಂಡು ಎಂದಿಗೂ ರಾಜಕೀಯ ಮಾಡಿಲ್ಲ. ಇಡೀ ಜಗತ್ತಿಗೆ ನನ್ನ ಜಾತಿ ಯಾವುದೆಂದು ತಿಳಿದಿದೆ. ನಾನು ಜಾತಿ ಆಧಾರಿತ ರಾಜಕೀಯ ಮಾಡಿಲ್ಲ, ಎಂದಿಗೂ ಮಾಡಲಾರೆ. ಆದರೆ, ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ. ಒಬಿಸಿ ಸಮುದಾಯದ ಬಗ್ಗೆ ನನಗೆ ಗೌರವವಿದೆ" ಎಂದು ಪವಾರ್ ಹೇಳಿದರು.

ಮರಾಠ ಸಮುದಾಯದ ಕೋಟಾ ಕುರಿತು ಮಾತನಾಡಿದ ಎನ್‌ಸಿಪಿ ಸಂಸ್ಥಾಪಕ, "ಮೀಸಲಾತಿ ನೀಡುವ ಅಧಿಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವ್ಯಾಪ್ತಿಯಲ್ಲಿದೆ. ಮೀಸಲಾತಿ ಕುರಿತು ಯುವ ಪೀಳಿಗೆಯ ಭಾವನೆ ತೀವ್ರವಾಗಿದ್ದು ಅದನ್ನು ನಿರ್ಲಕ್ಷಿಸುವಂತಿಲ್ಲ. ಆದರೆ, ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಮತ್ತು ಕೇಂದ್ರಕ್ಕಿದೆ" ಎಂದರು.

ಎನ್‌ಸಿಪಿ ಸಂಸದೆ ಮತ್ತು ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಈ ದಾಖಲೆಯನ್ನು ನಕಲಿ ಎಂದು ಕರೆದಿದ್ದಾರೆ. ಹಾಗೆಯೇ, ಎನ್‌ಸಿಪಿ ನಾಯಕ ವಿಕಾಸ್ ಪಾಸಲ್ಕರ್ ಕೂಡ ಪ್ರತಿಕ್ರಿಯೆ ನೀಡಿ, ಇದು ನಕಲಿ ಎಂದು ಹೇಳಿದ್ದಾರೆ. ಅಲ್ಲದೆ, ಶರದ್ ಪವಾರ್ ಅವರ ಶಾಲೆ ಬಿಟ್ಟ ಪ್ರಮಾಣ ಪತ್ರವನ್ನು ಮಾಧ್ಯಮಗಳ ಮುಂದಿಟ್ಟು, ಈ ಪ್ರಮಾಣಪತ್ರದಲ್ಲಿ 'ಮರಾಠ' ಎಂದು ನಮೂದಿಸಲಾಗಿದೆ ಅಂತಾ ತೋರಿಸಿ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್ ಪವಾರ್, "ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಹಿಂದೂ-ಮುಸ್ಲಿಮರ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದೆ. ಸಾಮಾನ್ಯ ಜನರ ಮುಖ್ಯ ಸಮಸ್ಯೆಗಳನ್ನು ಬದಿಗಿಟ್ಟು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ನಾಗ್ಪುರ್ಕರ್ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಈ ಎಲ್ಲಾ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಅಲ್ಲದೇ, ಶರದ್ ಪವಾರ್ ಅವರಿಗೆ ಸಂಬಂಧಿಸಿದ ನಕಲಿ ಜಾತಿ ಪ್ರಮಾಣಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸುಳ್ಳು. ಈ ನಿಟ್ಟಿನಲ್ಲಿ ನಮ್ಮ ನಾಯಕರು ಬಂದು ಮಾಧ್ಯಮದ ಮುಂದೆ ಸೂಕ್ತ ವಿವರಣೆ ನೀಡಲಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ:ಒಬಿಸಿಗಳ ಮೀಸಲಾತಿ ಮುಟ್ಟದೇ ಮರಾಠರಿಗೆ ಮೀಸಲಾತಿ ನೀಡಿ : ಶರದ್​ ಪವಾರ್

ಇನ್ನೊಂದೆಡೆ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಮರಾಠ ಸಮುದಾಯ ಒತ್ತಾಯಿಸುತ್ತಿದೆ. ಈ ಮೀಸಲಾತಿ ವಿಚಾರವಾಗಿ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಇತ್ತೀಚೆಗೆ ಕೆಲವೆಡೆ ಹೋರಾಟ ಹಿಂಸಾಚಾರಕ್ಕೂ ತಿರುಗಿತ್ತು.

ಇದನ್ನೂ ಓದಿ:ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ಪ್ರಚಾರಕ್ಕಾಗಿ ನೂತನ ಸಂಸತ್​ ಭವನಕ್ಕೆ ನಟಿಯರಿಗೆ ಆಹ್ವಾನ: ಎನ್​ಸಿಪಿ ಟೀಕೆ

ABOUT THE AUTHOR

...view details