ನವದೆಹಲಿ :ಹೊಸ ಸಂಸತ್ತು ಭವನದಲ್ಲಿ ನಡೆಯುತ್ತಿದ್ದ ಕಲಾಪದ ವೇಳೆ ಉಂಟಾದ ಭದ್ರತಾ ಲೋಪವು ದೇಶದಲ್ಲೆಡೆ ಭಾರೀ ಸಂಚಲನ ಮೂಡಿಸಿದೆ. ಈ ಘಟನೆಯಿಂದಾಗಿ ಸಂಸತ್ತಿನ ಭದ್ರತಾ ವ್ಯವಸ್ಥೆ ಮತ್ತು ಸಂಸದರಿಂದ ಸಂದರ್ಶಕರ ಹೇಗೆ ಪಾಸ್ಗಳನ್ನು ಪಡೆದುಕೊಳ್ಳುತ್ತಾರೆ ಎಂಬ ಕಾರ್ಯವಿಧಾನಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟುಕೊಂಡಿವೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಲಾಪ ನಡೆಯುವ ವೇಳೆ ಸಾರ್ವಜನಿಕ ಗ್ಯಾಲರಿಯಿಂದ ಯುವಕನೊಬ್ಬ ಸದನದೊಳಗೆ ನುಗ್ಗಿ ಹಳದಿ ಬಣ್ಣದ ಸ್ಮೋಕ್ ಕ್ರ್ಯಾಕರ್ವೊಂದನ್ನು ಸ್ಪ್ರೇ ಮಾಡಿದ್ದಾನೆ. ಇನ್ನೊಬ್ಬ ಯುವಕ ಕೂಡ ಸದನದೊಳಗೆ ಜಿಗ್ಗಿಯಲು ಯತ್ನಿಸಿದ್ದಾನೆ. ತಕ್ಷಣ ಸಂಸದರೇ ಸ್ಪ್ರೇ ಮಾಡಿದ ಯುವಕನನ್ನು ಹಿಡಿದಿದ್ದು, ಕೂಡಲೇ ಭದ್ರತಾ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಕಲಾಪಕ್ಕೆ ಅಡ್ಡಿಯಾದ ಕಾರಣ ಮುಂದೂಡಲಾಗಿತ್ತು.
ಅಲ್ಲದೇ, ಸಂಸತ್ತಿನ ಹೊರಗೆ ನುಗ್ಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಹರಿಯಾಣದ ಹಿಸಾರ್ ಮೂಲದ 42 ವರ್ಷದ ನೀಲಂ ಹಾಗೂ ಮಹಾರಾಷ್ಟ್ರದ ಲಾತೂರ್ ಮೂಲದ 25 ವರ್ಷದ ಅಮೋಲ್ ಶಿಂಧೆ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಲೋಕಸಭೆಗೆ ನುಗ್ಗಿದ ಆರೋಪಿಯನ್ನು ಮನೋರಂಜನ್ ಹಾಗು ಮತ್ತೊಬ್ಬನನ್ನು ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ಬಂಧಿತರಲ್ಲಿ ಒಬ್ಬನಾಗಿರುವಸಾಗರ ಶರ್ಮಾ, ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದು ವೀಕ್ಷಕರಾಗಿ ಗ್ಯಾಲರಿಗೆ ಬಂದಿದ್ದರು ಎಂಬುದಾಗಿ ತಿಳಿದುಬಂದಿದೆ.
ಸಂಸತ್ತಿಗೆ ಸಂದರ್ಶಕರ ಪಾಸ್ಗಳನ್ನು ಹೇಗೆ ನೀಡಲಾಗುತ್ತದೆ : ಸಂದರ್ಶಕರ ಪ್ರವೇಶವನ್ನು ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 386 ರ ಮೂಲಕ ನಿಯಂತ್ರಿಸಲಾಗುತ್ತದೆ. ಸಾಮಾನ್ಯವಾಗಿ, ಒಂದೇ ದಿನದಲ್ಲಿ ಒಬ್ಬ ಸಂಸದರು ತನಗೆ ವೈಯಕ್ತಿಕವಾಗಿ ತಿಳಿದಿರುವ ಇಬ್ಬರಿಗೆ ಸಂದರ್ಶಕರ ಪಾಸ್ಗಳನ್ನು ನೀಡಬಹುದು. ಈ ಪ್ರಕ್ರಿಯೆ ಹೊಸ ಸಂಸತ್ತಿನಲ್ಲಿ ಮಾತ್ರ ಜಾರಿಯಲ್ಲಿದೆ. ಈ ಹಿಂದೆ ಹಳೆಯ ಸಂಸತ್ತಿನ ಕಟ್ಟಡಕ್ಕೆ ಭೇಟಿ ನೀಡಲು ಜನರು ಡಿಜಿಟಲ್ಸಂಸದ್ ವೆಬ್ಸೈಟ್ಮೂಲಕ ಅರ್ಜಿ ಸಲ್ಲಿಸಬೇಕಿತ್ತು.
ಸಂದರ್ಶಕರ ಪಾಸ್ಗಳಿಗೆ ಅರ್ಜಿ ಸಲ್ಲಿಸುವಾಗ, ಸಂಸದರು ಮೇಲಿನ ಹೆಸರಿನ ಸಂದರ್ಶಕರು ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಪ್ರಮಾಣಪತ್ರ ನೀಡಬೇಕು. ಜೊತೆಗೆ ಭದ್ರತಾ ಕಾರಣಗಳ ದೃಷ್ಟಿಯಿಂದ ಸಂದರ್ಶಕರು ಫೋಟೋ ಇರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಸಂದರ್ಶಕರ ತನ್ನ ಹೆಸರೊಂದಿಗೆ ತಂದೆ ಅಥವಾ ಗಂಡನ ಹೆಸರನ್ನು ಪೂರ್ಣವಾಗಿ ನೀಡಬೇಕು. ಇದಾದ ನಂತರ ಸಂಸದರ ಕೋರಿಕೆ ಮೇರೆಗೆ ಪಾಸ್ಗಳನ್ನು ನೀಡಲಾಗುತ್ತದೆ. ಪಾಸ್ ಹೊಂದಿರುವ ಸಂದರ್ಶಕರಿಂದ ಏನಾದರೂ ಗ್ಯಾಲರಿಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಸಂಸದರೇ ಸಂಪೂರ್ಣ ಜವಾಬ್ದಾರರು ಎಂದು ತಿಳಿಸಲಾಗಿರುತ್ತದೆ.