ಕರ್ನಾಟಕ

karnataka

By

Published : Feb 23, 2022, 9:06 AM IST

ETV Bharat / bharat

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆ ಜಯಭೇರಿ, 21 ಪಾಲಿಕೆಗಳ ಚುಕ್ಕಾಣಿ

ಗ್ರೇಟರ್ ಚೆನ್ನೈ ಕಾರ್ಪೊರೇಶನ್ ಸೇರಿದಂತೆ ಎಲ್ಲಾ 21 ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ಡಿಎಂಕೆ ಬಹುಮತ ಸಂಪಾದಿಸಿದೆ. ಇದಲ್ಲದೇ, 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸಿ ಗಮನಾರ್ಹ ಸಾಧನೆ ಮಾಡಿದೆ. ಬಿಜೆಪಿಯೂ ನಿಧಾನವಾಗಿ ಬೇರೂರುತ್ತಿರುವುದು ಫಲಿತಾಂಶದ ವಿಶೇಷತೆ.

DMK notches
ಡಿಎಂಕೆಗೆ ಭರ್ಜರಿ ಜಯ

ಚೆನ್ನೈ(ತಮಿಳುನಾಡು):ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಅವರ ಜನಪರ ಆಡಳಿತಕ್ಕೆ ತಮಿಳುನಾಡಿನಲ್ಲಿ ಯಶಸ್ಸು ಸಿಕ್ಕಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು, ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು 12,800ಕ್ಕೂ ಅಧಿಕ ಸ್ಥಾನಗಳಲ್ಲಿ ಗೆದ್ದು 21 ಮಹಾನಗರ ಪಾಲಿಕೆಗಳ ಅಧಿಕಾರದ ಚುಕ್ಕಾಣಿ ಹಿಡಿದಿವೆ.

ಗ್ರೇಟರ್ ಚೆನ್ನೈ ಕಾರ್ಪೊರೇಶನ್ ಸೇರಿದಂತೆ ಎಲ್ಲಾ 21 ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ಡಿಎಂಕೆ ಬಹುಮತ ಸಂಪಾದಿಸಿದೆ. ಇದಲ್ಲದೇ, 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸಿ ಗಮನಾರ್ಹ ಸಾಧನೆ ಮಾಡಿದೆ.

ಮಾಜಿ ಮುಖ್ಯಮಂತ್ರಿಗಳಾದ ಕೆ.ಪಳನಿಸ್ವಾಮಿ (ಎಡಪ್ಪಾಡಿ, ಸೇಲಂ ಜಿಲ್ಲೆ) ಮತ್ತು ಓ.ಪನ್ನೀರಸೆಲ್ವಂ (ಪೆರಿಯಕುಲಂ, ತೇನಿ ಜಿಲ್ಲೆ) ಸೇರಿದಂತೆ ಎಐಎಡಿಎಂಕೆ ನಾಯಕರ ಕ್ಷೇತ್ರಗಳಲ್ಲಿ 946 ಪಾಲಿಕೆ ಸ್ಥಾನ, 2,360 ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ 4,388 ವಾರ್ಡ್‌ಗಳಲ್ಲಿ ಆಡಳಿತ ಪಕ್ಷ ಡಿಎಂಕೆ ಗೆದ್ದಿದೆ. ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ 2,000 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನ ಪಡೆದುಕೊಂಡಿದೆ.

ಕಮಾಲ್​ ಮಾಡದ ಕಮಲ್​:ಬಹುಭಾಷಾ ನಟ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮೈಯ್ಯಂ ಪಕ್ಷ ಮಹಾನಗರ ಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಲ್ಲಿ ಒಂದೂ ಸ್ಥಾನದಲ್ಲಿ ಗೆಲುವು ಸಾಧಿಸದೇ ಭಾರೀ ಹಿನ್ನಡೆ ಅನುಭವಿಸಿದೆ.

ಅರಳಿದ ಬಿಜೆಪಿ:ಇನ್ನು ಪ್ರಾದೇಶಿಕ ಪಕ್ಷಗಳ ಬಾಹುಳ್ಯದ ರಾಜ್ಯವಾದ ತಮಿಳುನಾಡಿನಲ್ಲಿ ಬಿಜೆಪಿ ನಿಧಾನವಾಗಿ ಬೇರೂರುತ್ತಿದೆ. ಎಐಡಿಎಂಕೆ ಜೊತೆ ಒಪ್ಪಂದ ಕಡಿದುಕೊಂಡ ಬಳಿಕ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ನಗರಸಭೆಯಲ್ಲಿ 22, ಪುರಸಭೆಗಳಲ್ಲಿ 56 ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ 230 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ, ಯಾವುದೇ ಸ್ಥಳೀಯ ಸಂಸ್ಥೆಯಲ್ಲಿ ಸ್ವಂತ ಬಲದಿಂದ ಬಹುಮತ ಗಳಿಸಿ ಅಧಿಕಾರಿ ಹಿಡಿಯುವಲ್ಲಿ ಸಫಲವಾಗಿಲ್ಲ.

ಪ್ರಾದೇಶಿಕ ಪಕ್ಷಗಳಾದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ, ಪಿಎಂಕೆ, ನಾಮ್ ತಮಿಜರ್ ಕಚ್ಚಿ, ಮತ್ತು ವಿಜಯಕಾಂತ್ ನೇತೃತ್ವದ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷಗಳಿಗಿಂತಲೂ ಹೆಚ್ಚಿನ ಸಾಧನೆ ಮಾಡಿದ್ದು ಗಮನಾರ್ಹವಾಗಿದೆ.

15 ಮತಗಳ ಅಂತರದಿಂದ ಗೆದ್ದ ಮಂಗಳಮುಖಿ:ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೆಲ್ಲೂರು ಮಹಾನಗರ ಪಾಲಿಕೆಗೆ ಸ್ಪರ್ಧಿಸಿದ್ದ ಡಿಎಂಕೆ ಅಭ್ಯರ್ಥಿ, ಮಂಗಳಮುಖಿಯಾಗಿರುವ ಆರ್. ಗಂಗಾ ಅವರು 15 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಖ್ಯಾತ ಮಲಯಾಳಂ ನಟಿ ಕೆಪಿಎಸಿ ಲಲಿತಾ ನಿಧನ

ABOUT THE AUTHOR

...view details