ಕರ್ನಾಟಕ

karnataka

By

Published : Feb 5, 2023, 4:10 PM IST

ETV Bharat / bharat

ಬಜೆಟ್​ನಲ್ಲಿ ಹಣದುಬ್ಬರ, ಮನರೇಗಾ ಉಲ್ಲೇಖವೇ ಇಲ್ಲ.. ಇದು ಮಿತ್ರರ ಬಜೆಟ್​ ಎಂದ ರಾಹುಲ್ ಗಾಂಧಿ

ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಕೇಂದ್ರ ಬಜೆಟ್​ನಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಮನರೇಗಾ ಯೋಜನೆಗಳ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವ ಬಗ್ಗೆ ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ. ಇದು ಅಮೃತ ಕಾಲ್ ಬಜೆಟ್​ ಅಲ್ಲ, ಇದು ಮಿತ್ರ ಕಾಲ್ ಬಜೆಟ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

Cong targets govts friends with benefits slams MGNREGA budget cut
Cong targets govts friends with benefits slams MGNREGA budget cut

ನವದೆಹಲಿ:ಹೊಸ ತೆರಿಗೆ ಸ್ಲ್ಯಾಬ್​ಗಳ ಮೂಲಕ ಸಮಾಜದ ಕೆಳವರ್ಗದ ಜನತೆಗೆ ಅಗತ್ಯ ಅನುಕೂಲ ಮಾಡಿಕೊಟ್ಟಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿರುವ ಮಧ್ಯೆ ಕಾಂಗ್ರೆಸ್​ ಈ ಬಜೆಟ್ ಅನ್ನು ಟೀಕಿಸಿದೆ. ಬಜೆಟ್​ನಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಮನರೇಗಾ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವ ಬಗ್ಗೆ ಪಕ್ಷ ವಾಗ್ದಾಳಿ ನಡೆಸಿದೆ. ಈ ಕುರಿತು ಮಾತನಾಡಿದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಪಿಎಂ ಕಿಸಾನ್‌ ಯೋಜನೆಯು ಮನರೇಗಾ ಯೋಜನೆಯ ಸೌಲಭ್ಯಗಳನ್ನು ಅತಿಕ್ರಮಿಸುತ್ತಿದೆ ಮತ್ತು ವೃದ್ಧಾಪ್ಯ ಪಿಂಚಣಿಯು ಮನರೇಗಾ ಯೋಜನೆಯನ್ನು ಅತಿಕ್ರಮಿಸುತ್ತಿದೆ. ಇಂಥ ಹತ್ತಾರು ಅತಿಕ್ರಮಣಗಳಿವೆ ಎಂದು ಆರೋಪಿಸಿದ್ದಾರೆ.

ಬಜೆಟ್​ ಅನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದನ್ನು 'ಮಿತ್ರ್ ಕಾಲ್' ಬಜೆಟ್ ಎಂದು ಬಣ್ಣಿಸಿದ್ದಾರೆ. 'ಅಮೃತ್ ಕಾಲ' ಬಜೆಟ್​ ಎಂದ ಸರ್ಕಾರದ ವಿರುದ್ಧ ಮಿತ್ರಕಾಲ್ ಪದ ಬಳಸಿ ರಾಹುಲ್ ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ ಮಂಡಿಸಿದ ಬಜೆಟ್ ಮಿತ್ರರಿಗಾಗಿ ಮಂಡಿಸಿದ ಬಜೆಟ್ ಎಂದು ರಾಹುಲ್ ಹೇಳಿದ್ದಾರೆ. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವ ಬಜೆಟ್ ಎಂದು ಪರೋಕ್ಷವಾಗಿ ರಾಹುಲ್ ಹೇಳಿದ್ದಾರೆ.

ಈ ಬಗ್ಗೆ ಟ್ವಿಟರ್​ನಲ್ಲಿ ಬರೆದಿರುವ ರಾಹುಲ್, ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಮಿತ್ರಕಾಲ್ ಬಜೆಟ್​ಗೆ ಯಾವುದೇ ದೃಷ್ಟಿಕೋನ ಇಲ್ಲ. ಹಣದುಬ್ಬರ ನಿಭಾಯಿಸಲು ಯಾವುದೇ ಯೋಜನೆ ಇಲ್ಲ. ಅಸಮಾನತೆಯನ್ನು ತಡೆಯುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಶೇಕಡಾ 1 ರಷ್ಟು ಶ್ರೀಮಂತರು ಶೇಕಡಾ 40 ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಶೇಕಡಾ 50 ರಷ್ಟು ಬಡವರು ಶೇಕಡಾ 64 ರಷ್ಟು ಜಿಎಸ್‌ಟಿ ಪಾವತಿಸುತ್ತಾರೆ. ಶೇಕಡಾ 42 ರಷ್ಟು ಯುವಕರು ನಿರುದ್ಯೋಗಿಗಳು. ಆದರೂ ಪ್ರಧಾನಿಗೆ ಈ ಬಗ್ಗೆ ಕಾಳಜಿಯೇ ಇಲ್ಲ. ಭಾರತದ ಭವಿಷ್ಯವನ್ನು ನಿರ್ಮಿಸಲು ಸರ್ಕಾರ ಯಾವುದೇ ದೂರದೃಷ್ಟಿಯನ್ನು ಹೊಂದಿಲ್ಲ ಎಂಬುದನ್ನು ಈ ಬಜೆಟ್ ಸಾಬೀತುಪಡಿಸುತ್ತದೆ ಎಂದು ರಾಹುಲ್ ಟ್ವೀಟ್​ ನಲ್ಲಿ ಬರೆದಿದ್ದಾರೆ.

ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿರುವ ಪಿ. ಚಿದಂಬರಂ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಶಿಕ್ಷಣ ಸಾಲದ ಸಹಾಯಧನ ನೀಡುವುದು ಸಂಪೂರ್ಣವಾಗಿ ತರ್ಕಹೀನವಾಗಿದೆ ಮತ್ತು ಇದು ಬೇಕಾಬಿಟ್ಟಿ ನಿರ್ಧಾರವಾಗಿದೆ ಎಂದಿದ್ದಾರೆ.

ಒಂದರ ಮೇಲೊಂದು ಅತಿಕ್ರಮಿಸುವ ಯೋಜನೆಗಳಿವೆ ಎಂದು ಒಪ್ಪಿಕೊಂಡರೂ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಮತ್ತು ಸಬ್ಸಿಡಿ ಯೋಜನೆಗಳು ಮಾತ್ರ ಮತ್ತೊಂದು ಯೋಜನೆಯೊಂದಿಗೆ ಅತಿಕ್ರಮಿಸುವ ಯೋಜನೆಯಾಗಿವೆಯೇ? ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಜೀವನವನ್ನು ಇನ್ನಷ್ಟು ಕಷ್ಟಕರವಾಗಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಸರ್ಕಾರವು ತನ್ನ ಅಲ್ಪಸಂಖ್ಯಾತ ವಿರೋಧಿ ನೀತಿಯನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿದೆ. ಇದು ನಾಚಿಕೆಗೇಡು ಎಂದು ಅವರು ಟೀಕಿಸಿದರು.

ಬಜೆಟ್ ಕುರಿತು ಪ್ರತಿಕ್ರಿಯಿಸಿದ ಚಿದಂಬರಂ- ನಿರುದ್ಯೋಗ, ಬಡತನ, ಅಸಮಾನತೆ ಅಥವಾ ಸಮಾನತೆ ಎಂಬ ಪದಗಳನ್ನು ವಿತ್ತ ಸಚಿವರು ತನ್ನ ಭಾಷಣದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಆರೋಪಿಸಿದರು. ಕರುಣೆಯಿಂದ ಅವರು ತಮ್ಮ ಭಾಷಣದಲ್ಲಿ ಬಡವರು ಎಂಬ ಪದವನ್ನು ಎರಡು ಬಾರಿ ಉಲ್ಲೇಖಿಸಿದ್ದಾರೆ. ಸರ್ಕಾರ ಯಾರ ಬಗ್ಗೆ ಕಾಳಜಿ ಹೊಂದಿದೆ ಮತ್ತು ಯಾರ ಬಗ್ಗೆ ಕಾಳಜಿ ಹೊಂದಿಲ್ಲ ಎಂಬುದನ್ನು ಭಾರತದ ಜನರು ಗಮನಿಸುತ್ತಿದ್ದಾರೆ ಎಂದು ಚಿದಂಬರಂ ಹೇಳಿದರು.

ಇದನ್ನೂ ಓದಿ: ರಾಹುಲ್​-ಖರ್ಗೆ ನಾಯಕತ್ವ ಕಾಂಗ್ರೆಸ್​ ಪಕ್ಷವನ್ನು ಬಲಪಡಿಸುತ್ತಿದೆ: ಕಾಂಗ್ರೆಸ್​ ನಾಯಕರು

ABOUT THE AUTHOR

...view details