ಧನ್ಬಾದ್ (ಜಾರ್ಖಂಡ್):ಧನ್ಬಾದ್ ನ್ಯಾಯಾಧೀಶರ ಕೊಲೆ ಪ್ರಕರಣದ ಸಂಚುಕೋರರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸಿಬಿಐ (ಕೇಂದ್ರ ತನಿಖಾ ದಳ) ತಿಳಿಸಿದೆ.
ಜುಲೈ 28 ರ ಮುಂಜಾನೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಜಾಗಿಂಗ್ಗೆ ಹೋಗಿದ್ದಾಗ ಹಿಂಬದಿಯಿಂದ ಆಟೋವೊಂದು ಡಿಕ್ಕಿ ಹೊಡೆದಿದ್ದು, ಚಾಲಕ ಪರಾರಿಯಾಗಿದ್ದ. ಸ್ಥಳೀಯರು, ಗಾಯಾಳು ನ್ಯಾಯಾಧೀಶರನ್ನು ಆಸ್ಪತ್ರೆಗೆ ಸಾಗಿಸಿದ್ರೂ, ಬದುಕುಳಿಯಲಿಲ್ಲ. ಈ ಕೊಲೆ ಪ್ರಕರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಜಾರ್ಖಂಡ್ ಪೊಲೀಸರು ಆಟೋ ಚಾಲಕ ಲಖನ್ ವರ್ಮಾನನ್ನು ಬಂಧಿಸಿದ್ದರು. ಸದ್ಯ ಈ ಪ್ರಕರಣವು ಸಿಬಿಐಗೆ ವರ್ಗಾವಣೆಯಾಗಿದೆ. ಆರೋಪಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.