ಕರ್ನಾಟಕ

karnataka

By ETV Bharat Karnataka Team

Published : Nov 26, 2023, 10:06 AM IST

ETV Bharat / bharat

ತಹಬದಿಗೆ ಬಂದ ದೆಹಲಿ ವಾಯು ಗುಣಮಟ್ಟ: ಕಲ್ಲಿದ್ದಲು ವಿದ್ಯುತ್​ ಸ್ಥಾವರಗಳೇ 'ವಿಷಗಾಳಿಯ ಜನಕ'- ಅಧ್ಯಯನ

Delhi's air quality sees slight improvement: ದೆಹಲಿಯ ಗಾಳಿ ವಿಷವಾಗಲು ರೈತರು ಸುಡುವ ತ್ಯಾಜ್ಯ ವಸ್ತುವಲ್ಲದೇ, ಸರ್ಕಾರ-ಖಾಸಗಿಯವರು ನಡೆಸುವ ಕಲ್ಲಿದ್ದಲು ಆಧರಿತ ವಿದ್ಯುತ್​ ಸ್ಥಾವರಗಳೂ ಕಾರಣ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.

ತಹಬದಿಗೆ ಬಂದ ದೆಹಲಿ ವಾಯು ಗುಣಮಟ್ಟ
ತಹಬದಿಗೆ ಬಂದ ದೆಹಲಿ ವಾಯು ಗುಣಮಟ್ಟ

ನವದೆಹಲಿ:ಚೇಂಬರ್​ ಗ್ಯಾಸ್​ ಆಗಿ ಮಾರ್ಪಾಟಾಗಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ವಾಯುಗುಣಮಟ್ಟ ತುಸು ತಹಬದಿಗೆ ಬರುತ್ತಿದೆ. ಆದರೂ, ಗಾಳಿಯು ಅತ್ಯಂತ ಕಳಪೆಯಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 393 ದಾಖಲಾಗಿದೆ. ಇನ್ನೊಂದೆಡೆ, ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರಗಳು ಗಾಳಿಯನ್ನು ವಿಷಮಯ ಮಾಡುತ್ತಿವೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

ಭಾನುವಾರ ಬೆಳಗ್ಗೆ 7 ಗಂಟೆಗೆ ಮಾಹಿತಿಯ ಪ್ರಕಾರ, ಆನಂದ್ ವಿಹಾರ್‌ನಲ್ಲಿ 433, ಅಶೋಕ್ ವಿಹಾರ್‌ನಲ್ಲಿ 434, ಬವಾನಾದಲ್ಲಿ 437, ಜಹಾಂಗೀರ್ಪುರಿಯಲ್ಲಿ 450 ಎಕ್ಯೂಐ ದಾಖಲಾಗಿದೆ. ಇವೆಲ್ಲವೂ ತೀವ್ರ ಕಳಪೆ ವರ್ಗಕ್ಕೆ ಸೇರಿವೆ. ದೆಹಲಿಯ ಕೇಂದ್ರ ಭಾಗದಲ್ಲಿ ಎಕ್ಯೂಐ 382 (ಅತ್ಯಂತ ಕಳಪೆ) ಇದ್ದರೆ, ಅಂತರರಾಷ್ಟ್ರೀಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಪ್ರದೇಶದಲ್ಲಿ 360 (ಅತ್ಯಂತ ಕಳಪೆ) ಎಕ್ಯೂಐ ಹೊಂದಿದೆ.

ವಾರದಿಂದೀಚೆಗೆ ರಾಜಧಾನಿಯಲ್ಲಿ ಒಟ್ಟಾರೆ ಎಕ್ಯೂಐನಲ್ಲಿ ಗಮನಾರ್ಹ ಸುಧಾರಣೆ ಕಂಡು ಬರುತ್ತಿದೆ. ವಾಯು ಗುಣಮಟ್ಟ ನಿರ್ವಹಣಾ ಆಯೋಗ ಗ್ಯಾಪ್​ 4 ಅಡಿಯಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಹಂತ ಹಂತವಾಗಿ ಹಿಂಪಡೆಯುತ್ತಿದೆ. ಬಿಎಸ್​-3 ಮತ್ತು ಬಿಎಸ್​- 4 ಪೆಟ್ರೋಲ್ ಮತ್ತು ಡೀಸೆಲ್ ಹೊರತುಪಡಿಸಿದ ಟ್ರಕ್‌ಗಳು ಮತ್ತು ಬಸ್‌ಗಳಿಗೆ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ನಿರ್ಮಾಣ ಚಟುವಟಿಕೆಗಳ ಮೇಲಿನ ನಿಷೇಧವನ್ನೂ ಸಡಿಲ ಮಾಡಲಾಗಿದೆ. ಆದರೂ, ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್​ನ 1 ರಿಂದ 3 ಹಂತಗಳ ನಿರ್ಬಂಧಗಳು ಜಾರಿಯಲ್ಲಿವೆ.

ವಿಷಗಾಳಿಗೆ 'ಕಲ್ಲಿದ್ದಲು' ಎಫೆಕ್ಟ್​:ಹೊಸ ವಿಶ್ಲೇಷಣೆಯ ಪ್ರಕಾರ, ದೆಹಲಿ ಮತ್ತು ಅದರ ಸುತ್ತಮುತ್ತಲಿನ ಕಲ್ಲಿದ್ದಲು ಚಾಲಿತ ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೊರಸೂಸುವ ಹೊಗೆಯಿಂದಾಗಿ ಗಾಳಿ ವಿಷವಾಗುತ್ತಿದೆ. ಸ್ಥಾವರಗಳು ವಿಧಿಸಿದ ಮಾನದಂಡಗಳನ್ನು ಅನುಸರಿಸದೇ ಇರುವುದು ವಾಯು ಮಾಲಿನ್ಯ ಗಣನೀಯವಾಗಿ ಕುಸಿತಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್​ವಿರಾನ್‌ಮೆಂಟ್ (ಸಿಎಸ್‌ಇ) ಅಧ್ಯಯನವು, ದಿಲ್ಲಿ- ಎನ್‌ಸಿಆರ್‌ನಲ್ಲಿರುವ 11 ಥರ್ಮಲ್ ಪವರ್ ಪ್ಲಾಂಟ್‌ಗಳಿಂದ ಹೊರಸೂಸುವ ಕಣಗಳು, ನೈಟ್ರೋಜನ್ ಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್ ಮೇಲೆ ಅಧ್ಯಯನ ನಡೆಸಿದೆ. ಏಪ್ರಿಲ್ 2022 ರಿಂದ ಆಗಸ್ಟ್ 2023 ರವರೆಗಿನ ಅಧ್ಯಯನವಾಗಿದೆ. ಕೇಂದ್ರ ವಿದ್ಯುತ್ ಸಚಿವಾಲಯದ ತಾಂತ್ರಿಕ ವಿಭಾಗವಾದ ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ಮಾಹಿತಿ ಲಭ್ಯವಿದೆ.

ಅಧ್ಯಯನಗಳ ಪ್ರಕಾರ, ದೆಹಲಿಯಲ್ಲಿ PM2.5 ಮಾಲಿನ್ಯದ ಸುಮಾರು ಎಂಟು ಪ್ರತಿಶತದಷ್ಟು ಈ ಸ್ಥಾವರಗಳಿಂದಲೇ ಹಬ್ಬಿದೆ. ಇವುಗಳು ಹೊರಸೂಸುವ ವಿಷಗಾಳಿಯು ಸಾಮಾನ್ಯ ಗಾಳಿಯಲ್ಲಿ ಸೇರಿಕೊಳ್ಳುವುದು ಹೀಗೆ ಮುಂದುವರಿದಲ್ಲಿ ಶುದ್ಧ ಗಾಳಿಯೇ ಇಲ್ಲವಾಗುತ್ತದೆ. ವಿಧಿಸಿದ ಮಾನದಂಡಗಳನ್ನು ಅನುಸರಿಸಲು ಈ ಸ್ಥಾವರಗಳು ಹೆಣಗಾಡುತ್ತಿವೆ ಎಂದಿದೆ.

ಇದನ್ನೂ ಓದಿ:ವಾಯುವ್ಯ ಮಾರುತಗಳಿಂದ ಇಳಿಯುತ್ತಿರುವ ದೆಹಲಿ ವಾಯುಮಾಲಿನ್ಯ: ಕೆಲ ನಿರ್ಬಂಧಗಳು ಸಡಿಲ

ABOUT THE AUTHOR

...view details