ಪಾಟ್ನಾ: ಬಿಹಾರದ ದಲಿತರು ಮತ್ತು ಮಹಾದಲಿತರು ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಶುಕ್ರವಾರ ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಶಕಕ್ಕೂ ಹೆಚ್ಚು ಕಾಲದಿಂದ ರಾಜಕಾರಣಿಗಳು ಈ ಎರಡು ಸಮುದಾಯಗಳನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ದಲಿತರು ಮತ್ತು ಮಹಾದಲಿತರ ಸ್ಥಿತಿ ನಿಜವಾಗಿಯೂ ಶೋಚನೀಯವಾಗಿದೆ. ಅವರು ಅಮಾನವೀಯ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾರೆ. ಅವರ ಮನೆಗಳಲ್ಲಿ ಅವರಿಗೆ ಮಲಗಲು ಒಂದು ಕಟ್ಟಿಗೆಯ ಪಲ್ಲಂಗವೂ ಇಲ್ಲ. ಅವರು ನೆಲದ ಮೇಲೆಯೇ ಮಲಗುತ್ತಾರೆ. ನಾನು ಅವರ ಮನೆ ಮತ್ತು ಹೊಲಗಳಿಗೆ ಭೇಟಿ ನೀಡಿದಾಗಲೆಲ್ಲಾ ಇದನ್ನು ಕಂಡಿದ್ದೇನೆ.
ಮಳೆಗಾಲದಲ್ಲಿ ಗುಡಿಸಲಿನಲ್ಲಿಯೇ ಮೂರ್ನಾಲ್ಕು ತಿಂಗಳು ಮರದ ತುಂಡುಗಳ ಮೇಲೆ ಜೀವನ ನಡೆಸುತ್ತಾರೆ. ಇದು ಬಿಹಾರದ ಸ್ಥಿತಿ. ಆದರೆ ಬಿಹಾರ ರಾಜಕಾರಣಿಗಳು ಕಳೆದ 10 ರಿಂದ 12 ವರ್ಷಗಳಿಂದ ದಲಿತರು ಮತ್ತು ಮಹಾದಲಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಶೋರ್ ಹೇಳಿದರು.
3500 ಕಿಲೋಮೀಟರ್ಗಳಿಗಿಂತ ಹೆಚ್ಚು ಪಾದಯಾತ್ರೆ ಮಾಡಿ ಪ್ರತಿ ಪಂಚಾಯತ್ ಮತ್ತು ಬ್ಲಾಕ್ಗಳಿಗೆ ತಲುಪಿ ರಾಜ್ಯದ ರಾಜಕೀಯವನ್ನು ಸುಧಾರಿಸಲು ಪ್ರಶಾಂತ್ ಕಿಶೋರ್ ಮುಂದಾಗಿದ್ದಾರೆ. ತಳಮಟ್ಟದಲ್ಲಿ ಸೂಕ್ತ ವ್ಯಕ್ತಿಗಳನ್ನು ಗುರುತಿಸಲು ಪಾದಯಾತ್ರೆ ನಡೆಸುತ್ತಿದ್ದಾರೆ.