ಕರ್ನಾಟಕ

karnataka

By ETV Bharat Karnataka Team

Published : Oct 4, 2023, 12:19 PM IST

ETV Bharat / bharat

ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರ ಸತತ ಸಾವು: ವೈದ್ಯರನ್ನು ವಜಾಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ

ತಮಿಳುನಾಡಿನ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಗರ್ಭಿಣಿಯರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ವಜಾಗೊಳಿಸುವಂತೆ ಮಧುರೈ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Consecutive deaths of pregnant women in Madurai Government Rajaji Hospital - Madurai Collector instructs Hospital
ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರ ಸತತ ಸಾವು: ವೈದ್ಯರನ್ನು ವಜಾಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ

ಮಧುರೈ (ತಮಿಳುನಾಡು):ಮಧುರೈನ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಇಬ್ಬರು ಗರ್ಭಿಣಿ ಮಹಿಳೆಯರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ವಜಾಗೊಳಿಸುವಂತೆ ಮಧುರೈ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಮಧುರೈ ಜಿಲ್ಲೆಯ ವಂಡಿಯೂರ್​ನ ಗರ್ಭಿಣಿಯೊಬ್ಬರು ಹೆರಿಗೆಗಾಗಿ ಮನಗಿರಿ ನಗರದ ಆರೋಗ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಅವರನ್ನು ಅಲ್ಲಿಂದ ಸೆ.29ರಂದು ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್​ಗೆ ದಾಖಲಿಸಲಾಗಿತ್ತು. ಇಲ್ಲಿ ಹೆರಿಗೆಯಾದ ಕೆಲವೇ ನಿಮಿಷಗಳಲ್ಲಿ ಮಹಿಳೆ ಮೃತಪಟ್ಟಿದ್ದರು. ಮಹಿಳೆ ಡೆಂಗ್ಯೂ ತರಹದ ರೋಗಲಕ್ಷಣಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ತಿಳಿಸಿತ್ತು.

ಈ ಹಿನ್ನೆಲೆಯಲ್ಲಿ ಮಧುರೈ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿ ವಿನೋತ್ ಆಸ್ಪತ್ರೆಯ ಹೆರಿಗೆ ಚಿಕಿತ್ಸಾ ಕೇಂದ್ರಕ್ಕೆ ತೆರಳಿ ಮೃತ ಗರ್ಭಿಣಿಗೆ ನೀಡಿದ ಚಿಕಿತ್ಸೆ ಕುರಿತು ವಿಚಾರಿಸಿದರು. ನಂತರ ಸೂಕ್ತ ಚಿಕಿತ್ಸೆ ನೀಡದೆ ಗರ್ಭಿಣಿಯರನ್ನು ಮುನ್ಸಿಪಲ್ ಅರ್ಬನ್ ಹೆಲ್ತ್ ಸೆಂಟರ್​ನಿಂದ ಮಧುರೈನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ಈ ಸಂಬಂಧ ಮಧುರೈ ಜಿಲ್ಲಾಧಿಕಾರಿ ಸಂಗೀತಾ ಅವರು ರಾಜಾಜಿ ಆಸ್ಪತ್ರೆಯಲ್ಲಿ ಸೆ.2ರಂದು ಮೃತಪಟ್ಟ ಸೆಮ್ಮಲಾರ್​ ಹಾಗೂ ಕಳೆದ ತಿಂಗಳ 5ರಂದು ಮೃತಪಟ್ಟ ಇಬ್ಬರು ಗರ್ಭಿಣಿಯರ ಸಾವಿನ ಕುರಿತು ವಿಚಾರಣೆ ನಡೆಸಿದರು. ಅವರ ವಿಚಾರಣೆಯಲ್ಲಿ ಮುನ್ಸಿಪಲ್ ಅರ್ಬನ್ ಹೆಲ್ತ್ ಸೆಂಟರ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವಾಗ ಮಾಡಿದ ವೈದ್ಯಕೀಯ ಪರೀಕ್ಷೆಯ ದಾಖಲೆಗಳಿಗೂ ಮತ್ತು ರಾಜಾಜಿ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ನೀಡಿದ ಮರಣೋತ್ತರ ಪರೀಕ್ಷೆಯ ವರದಿಗೂ ವ್ಯತ್ಯಾಸವಿರುವುದು ಬೆಳಕಿಗೆ ಬಂದಿದೆ.

ಇದೀಗ ಸಾವಿನ ಕುರಿತ ತನಿಖಾ ವರದಿ ಹೊರಬಿದ್ದಿದ್ದು, ಭಾರಿ ಸಂಚಲನ ಮೂಡಿಸಿದೆ. ಮೃತ ತಾಯಂದಿರಿಗೆ ಸೂಕ್ತ ಚಿಕಿತ್ಸೆ ನೀಡದಿರುವುದು, ಮೃತರಿಗೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ತಿದ್ದಿ ಸರಿಪಡಿಸಿರುವುದು ಬೆಳಕಿಗೆ ಬಂದಿದೆ. ಅದರಂತೆ ಮೃತ ಗರ್ಭಿಣಿ ಸೆಮ್ಮಲಾರ್ ಅವರ ಸಾವಿನ ತನಿಖಾ ವರದಿಯಲ್ಲಿ ಈ ವರ್ಷ ಆಗಸ್ಟ್ 28ರಂದು ಗರ್ಭಿಣಿ ಹೃದ್ರೋಗ ತಜ್ಞರನ್ನು ಭೇಟಿಯಾಗಿರುವ ಮತ್ತು ಆ. 29ರಂದು ರೋಗಿಗೆ ಆಸ್ಪಿರಿನ್ ಮಾತ್ರೆಗಳನ್ನು ನೀಡಲಾಗಿದೆ ಎಂಬ ಬರಹವನ್ನು ಅಳಿಸಿ ಹಾಕಿದ್ದಾರೆ. ಅಲ್ಲದೆ, ಆಗಸ್ಟ್ 31 ರಂದು ಬೆಳಗ್ಗೆ 7 ಗಂಟೆಗೆ ಬಿಟಿ / ಸಿಟಿ (ಬ್ಲೀಡಿಂಗ್ ಸಮಯ / ಹೆಪ್ಪುಗಟ್ಟುವಿಕೆ ಸಮಯ) ಎಂದು ನೋಂದಾಯಿಸಲಾಗಿದೆ. 31.08.2023 ರಂದು ಸಂಜೆ 5 ರಿಂದ 5.15 ರ ವರೆಗೆ ಗರ್ಭಿಣಿ ವಾಂತಿ ಮಾಡಿಕೊಂಡಿದ್ದರು ಮತ್ತು ಹೊಟ್ಟೆ ಹಿಗ್ಗಿತ್ತು, ಕೈ ಕಾಲುಗಳು ನಡುಗುತ್ತಿದ್ದವು ಎಂದು ಹೊಸದಾಗಿ ಬರೆಯಲಾಗಿದೆ ಎಂದಿದೆ.

ಅದರಂತೆ, ಮತ್ತೊಬ್ಬ ಮೃತ ಗರ್ಭಿಣಿಯ ತನಿಖಾ ವರದಿಯಲ್ಲಿ, ಆಕೆಯನ್ನು 18.07.2023 ರಂದು ಎರಡನೇ ಘಟಕದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಬರೆಯಲಾಗಿದೆ. ಹೃದಯ ಬಡಿತ (ಎಚ್ಆರ್), ಚಿಕಿತ್ಸೆಯ ಸಮಯದಲ್ಲಿ ನೀಡಿದ ಔಷಧಿಗಳು ಮತ್ತು ಪರೀಕ್ಷೆಯ ವಿವರಗಳನ್ನು ಮರಣೋತ್ತರ ಪರೀಕ್ಷೆಯ ನಂತರ ದಾಖಲಿಸಲಾಗಿದೆ. ಹೀಗಾಗಿ ಮೃತರ ಹೆರಿಗೆ ಮಾಡುವ ಸಮಯದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರನ್ನು ವಜಾಗೊಳಿಸಲು ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ನಾಂದೇಡ್​ ಆಸ್ಪತ್ರೆಯಲ್ಲಿ ರೋಗಿಗಳ ಸಾವು: ವೈದ್ಯಾಧಿಕಾರಿಯಿಂದ ಕೊಳಕಾಗಿದ್ದ ಶೌಚಾಲಯ ತೊಳಿಸಿದ ಸಂಸದ- ವಿಡಿಯೋ

ABOUT THE AUTHOR

...view details